ಬೆಂಗಳೂರು, ಜೂ.21: ಅಂತರಾಷ್ಟ್ರೀಯ ಯೋಗ ದಿನ ಮತ್ತು ವಿಶ್ವ ಸಂಗೀತ ದಿನದ ಪ್ರಯುಕ್ತ ನಗರದ ಅರಮನೆ ಮೈದಾನದಲ್ಲಿ ಲೈಫ್ ಎಟರ್ನಲ್ ಟ್ರಸ್ಟ್ ವತಿಯಿಂದ ಸಹಜ ಯೋಗ, ಸಂಗೀತ ಹಾಗೂ ನೃತ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಕೇಂದ್ರ ಆರೋಗ್ಯ ಮತ್ತು ಆಯುಷ್ ರಾಜ್ಯ ಸಚಿವರಾದ ಪ್ರತಾಪ ರಾವ್ ಜಾಧವ್ ಅವರು ವರ್ಚುವಲ್ ಮೂಲಕ ಉದ್ಘಾಟಿಸಿದರು. ಯೋಗವು ಕೇವಲ ವ್ಯಾಯಾಮವಲ್ಲ, ಇದು ದೇಹ ಮತ್ತು ಆತ್ಮವನ್ನು ಸಮತೋಲನಗೊಳಿಸುವ ದಾರಿ. ಇದು ಭಾರತದ ಆಧ್ಯಾತ್ಮಿಕ ಪರಂಪರೆ ಮತ್ತು ವಸುದೈವ ಕುಟುಂಬಕಂ ತತ್ವವನ್ನು ಸಾರಿ ಹೇಳುತ್ತದೆ. ಭಾರತವು ಜಾಗತಿಕವಾಗಿ ಅಭಿವೃದ್ಧಿಯನ್ನು ಕಾಣುತ್ತಿದ್ದು, ಅದರಲ್ಲಿ ಯೋಗ ಕೂಡ ಪ್ರಮುಖವಾಗಿ ಖ್ಯಾತಿಯನ್ನು ಪಡೆದಿದೆ ಎಂದರು.
ಲೈಫ್ ಎಟರ್ನಲ್ ಟ್ರಸ್ಟ್ನ ಚೇರ್ಮೆನ್ ಡಾ. ಮನೋಜ್ ಕುಮಾರ್ ಮಾತನಾಡಿ, ಸಹಜ ಯೋಗವು ಆತ್ಮ ಸಾಕ್ಷಾತ್ಕಾರಕ್ಕಾಗಿ ದೈವಿಕ ಮಾರ್ಗವನ್ನು ಸೂಚಿಸುತ್ತದೆ. ಇಂದಿನ ಕಾರ್ಯಕ್ರಮವು ಕೇವಲ ದೈಹಿಕ ಆರೋಗ್ಯಕ್ಕೆ ಮಾತ್ರವಲ್ಲದೆ ಆಂತರಿಕ ಪರಿವರ್ತನೆಗೆ ಮಾರ್ಗದರ್ಶಿಯಾಗಿತ್ತು ಎಂದರು.
ವಿಶ್ವ ಸಂಗೀತ ದಿನದ ಪ್ರಯುಕ್ತ 20ಕ್ಕೂ ಹೆಚ್ಚು ದೇಶಗಳ 200 ಕಲಾವಿದರು 100ಕ್ಕೂ ಹೆಚ್ಚು ಸಂಗೀತ ವಾದ್ಯಗಳೊಂದಿಗೆ ಸಂಗೀತವನ್ನು ಪ್ರಸ್ತುತಪಡಿಸಿದರು. ಭಾರತೀಯ ಸಶಸ್ತ್ರ ಪಡೆಗಳಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಸಂಗೀತಗಾರರು, ಗಾಯಕರು ಮತ್ತು ಭರತನಾಟ್ಯ ನೃತ್ಯಗಾರರನ್ನು ಒಳಗೊಂಡ “ವಂದೇ ಮಾತರಂ” ಸಾಂಸ್ಕೃತಿಕ ಪ್ರದರ್ಶನವನ್ನು ನೀಡಿದರು. ಅದಾಗ್ಯೂ ಯೋಗ, ಸಂಗೀತ ಮತ್ತು ಧ್ಯಾನ ಸಮ್ಮಿಲನವುಳ್ಳ ಅದ್ಭುತ ಪ್ರದರ್ಶನ ನೀಡಿದ ಸಹಜ ಯೋಗ ಹಾಗೂ ಸಮರ್ಥನಂ ಟ್ರಸ್ಟ್ ಫಾರ್ ದಿ ಡಿಸೇಬಲ್ಡ್ ಸಂಸ್ಥೆಗೆ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್, ಲಂಡನ್ ನಿಂದ ಎಕ್ಸೆಲೆನ್ಸ್ ಸರ್ಟಿಫಿಕೇಟ್ ನೀಡಲಾಯಿತು.
ಅಂತರಾಷ್ಟ್ರೀಯ ಖ್ಯಾತಿಯ ಧನ್ವಂತರಿ ಯೋಗ ತಂಡದ ನೇತೃತ್ವದಲ್ಲಿ ಯೋಗ ಕಾರ್ಯಗಾರವು ನಡೆಯಿತು. ಈ ಸಂದರ್ಭದಲ್ಲಿ ನಟಿ ನಮ್ರತಾ ಗೌಡ, ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಸಿಇಒ (ಲಂಡನ್ ಯುಕೆ) ಸಂತೋಷ್ ಶುಕ್ಲ, ಡಾ, ರಾಜೀವ್, ಕಲ್ಪನಾ, ಸುದರ್ಶನ್ ಶರ್ಮಾ, ನಿಖಿಲ್ ಗೌಡ, ಉಷಾ ಅಯ್ಯರ್, ಪುನೀತ್ ಶ್ರೀಧರ್ , ಆರ್. ಚೇತನ್, ಡಾ. ಮಹಾಂತೇಶ್, ಡಾ. ಮಧು ಟೇಮ್ಲೆ, ತಿಥಿ ಬಳ್ಳಾ ಸೇರಿದಂತೆ ಇನ್ನೂ ಹಲವು ಗಣ್ಯರು ಮತ್ತು ಸಹಜ ಯೋಗ ಲೈಫ್ ಎಟರ್ನಲ್ ಟ್ರಸ್ಟ್ನ ಹಲವಾರು ಟ್ರಸ್ಟಿಗಳು ಪಾಲ್ಗೊಂಡಿದ್ದರು.