” ಯೋಗ ವೆಂದರೆ ಭೂಮಿಯಲ್ಲಿನ ಆರೋಗ್ಯ ಸಂಪತ್ತು “.
“ಯೋಗ” ಎಂದರೆ ಸೇರಿಸು, ಒಂದಾಗಿಸು, ಒಂದುಗೂಡಿಸು, ಕೇಂದ್ರೀಕರಿಸು, ಜೋಡಿಸು ಎಂದರ್ಥ.
ಮನಸ್ಸು ದೇಹ ಮತ್ತು ಉಸಿರನ್ನು ಪ್ರಜ್ಞಾಪೂರ್ವಕವಾಗಿ ಒಂದುಗೂಡಿಸುವುದೇ “ಯೋಗ”
“ಯೋಗ” ಅತ್ಯಂತ ಪ್ರಾಚೀನವಾದ ಹಾಗೂ ಪವಿತ್ರವಾದ ಕಲೆ ಮತ್ತು ವಿಜ್ಞಾನ. ಯೋಗದ ಬಗ್ಗೆ ಪುರಾಣಗಳಲ್ಲಿ, ವೇದೋಪನಿಷತ್ತುಗಳಲ್ಲಿ , ಹಾಗೂ ಭಗವದ್ಗೀತೆಯಲ್ಲಿಯೂ ಕೂಡ ಉಲ್ಲೇಖವಿದೆ.
ಯೋಗದ ಮೂಲಪುರುಷ “ಶಿವ” ಎಂಬ ಉಲ್ಲೇಖ ಗ್ರಂಥಗಳಲ್ಲಿವೆ.
” ಶ್ರೀ ಕೃಷ್ಣ” ಭಗವದ್ಗೀತೆಯಲ್ಲಿ – ಸಿದ್ಧಿ ಮತ್ತು ಆಸಿದ್ಧಿ ಗಳನ್ನು ಸಮಾನ ಮನಸ್ಸಿನಿಂದ ನೋಡುವುದೇ “ಯೋಗ” ಎಂದು ತಿಳಿಸಿದ್ದಾರೆ.
” ಪತಾಂಜಲಿ” ಮಹರ್ಷಿಗಳು ತಮ್ಮ ಯೋಗ ಸೂತ್ರದಲ್ಲಿ – ಚಿತ್ತದ ವೃತ್ತಿಗಳನ್ನು ನಿರೋಧಿಸುವುದೇ ಯೋಗವೆಂದು ಹೇಳಿದ್ದಾರೆ.
ಹೀಗೆ ಯೋಗವನ್ನು ಋಷಿ ಮುನಿಗಳು ತಮ್ಮ ಜೀವನದಲ್ಲಿ ಅನುಸರಿಸಿ ಮತ್ತು ಮುಂದುವರಿಸಿಕೊಂಡು ಬಂದು ವಿಶ್ವಕ್ಕೆ ಪರಿಚಯಿಸಿದ್ದಾರೆ, ಇದು ನಮಗೆ ಇಂದಿನ ಕಾಲಘಟ್ಟದಲ್ಲಿ ಸರ್ವ ಶ್ರೇಷ್ಠ ಕೊಡುಗೆಯಾಗಿದೆ . ಯೋಗ ಯಾವುದೇ ಒಬ್ಬ ವ್ಯಕ್ತಿಗೆ, ಸಮಾಜಕ್ಕೆ, ಪಂಗಡಕ್ಕೆ, ಜಾತಿಗೆ, ಧರ್ಮಕ್ಕೆ ಅಥವಾ ರಾಷ್ಟ್ರಕ್ಕೆ ಸೀಮಿತವಾದದ್ದಲ್ಲ, ಇದು ಅನಂತ ಹಾಗೂ ಅಪರಿಮಿತವಾದದ್ದು.
” ಯೋಗ” ಎಂದರೆ ಸೇರಿಸುವ ಕುಡಿಸು ಜೋಡಿಸು ಒಂದಾಗಿಸು ಎಂಬ ಅರ್ಥಗಳಿವೆ, ಈ ಭೂಮಿ ಮೇಲೆ ವಾಸಿಸುವ ಪ್ರತಿಯೊಂದು ಜೀವಿಯು ತಮ್ಮ ಉಸಿರನ್ನು ಪ್ರಕೃತಿಯೊಡನೆ ಸೇರಿಸುತ್ತಾ, ಒಂದಾಗಿಸುತ್ತ, ಪ್ರಾಣ ಶಕ್ತಿಯಾದ ಉಸಿರನ್ನು ಪರಸ್ಪರ ಒಂದುಗೂಡಿಸುತ್ತಾ, ಸದಾ ಕಾಲ ಪ್ರಾಣವಾಯು ವನ್ನು ಪರಸ್ಪರ ವಿನಿಯೋಗ ಮಾಡುತ್ತಾ ಒಂದು ರೀತಿಯ ಸರ್ವಶ್ರೇಷ್ಠವಾದ ಯೋಗಾಭ್ಯಾಸವನ್ನು ತನಗರಿವಿಲ್ಲದಂತೆ ಹುಟ್ಟಿನಿಂದ ಸಾಯುವವರೆಗೂ ಪ್ರಾಣಾಯಾಮಭ್ಯಾಸವನ್ನು ಮಾಡುತ್ತಾ, ತನ್ನ ಪ್ರತಿಯೊಂದು ನಿಲುಮೆಯ ಬಂಗಿಗಳಿಂದ ಆಸನಗಳನ್ನು ಮಾಡುತ್ತಾ, ಪ್ರಕೃತಿಯನ್ನು ಸಂಪೂರ್ಣವಾಗಿ ಅವಲಂಬಿಸುತ್ತ ಬೆಳೆದು ಬಂದಿವೆ . ಅಂದರೆ ಜೀವಿಗಳ ಮೂಲಭೂತ ಅವಶ್ಯಕತೆಗಳಾದ ಗಾಳಿ, ನೀರು, ಬೆಳಕು, ಆಹಾರ ಮತ್ತು ಆಕಾಶ ಇತ್ಯಾದಿಗಳನ್ನು ಅನುಭವಿಸುತ್ತಾ, ಅನುಸರಿಸಿತ್ತ, ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅಸ್ತಿತ್ವದಲ್ಲಿವೆ.
ಸಹಸ್ರಾರು ವರ್ಷಗಳಿಂದ “ಯೋಗ” ಮನುಷ್ಯನ ಜೀವನದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಾ ಬಂದಿದೆ,
ಹಾಗೂ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಸಮತೋಲನವನ್ನು ಕಾಪಾಡುವಲ್ಲಿ ಕಾರಣಿಭೂತವಾಗಿದೆ. ಯೋಗ ತನ್ನದೇ ಆದ ಶಾಖೆಗಳನ್ನು ಒಳಗೊಂಡಿದೆ ಅವುಗಳಲ್ಲಿ ಪ್ರಮುಖವಾದಂದರೆ :- ಜ್ಞಾನ ಯೋಗ, ಕರ್ಮ ಯೋಗ, ಭಕ್ತಿ ಯೋಗ ಹಾಗೂ ರಾಜಯೋಗ ಇತ್ಯಾದಿಗಳು.
ಪತಂಜಲಿ ಮಹರ್ಷಿಯವರ ರಾಜಯೋಗದ ಪರಮ ಧ್ಯೇಯ :- ಅಷ್ಟ- ಅಂಗ-ಯೋಗ. ಇವರು ತಮ್ಮ ಯೋಗ ಸೂತ್ರಗಳಲ್ಲಿ, ಸಾಧನೆಯ 8 ಮೆಟ್ಟಿಲುಗಳಾದ ಯಮ, ನಿಯಮ, ಆಸನ, ಪ್ರಾಣಾಯಾಮ,ಪ್ರತ್ಯಹಾರ, ಧಾರಣ, ಧ್ಯಾನ ಮತ್ತು ಸಮಾಧಿ ಗಳ ಬಗ್ಗೆ ಸಂಪೂರ್ಣವಾಗಿ ವಿವರಿಸಿದ್ದಾರೆ.
ಅಷ್ಟಾಂಗ ಯೋಗ :-
ಸಂಪೂರ್ಣ ಜೀವನಕ್ಕೆ ಬೇಕಾದ ಯಮ:- ಅಂದರೆ ಸಾಮಾಜಿಕ ನೀತಿ ನಿರ್ಬಂಧಗಳು, ನಿಯಮ:- ಸ್ವಯಂ ನಿರ್ಬಂಧಗಳ ಆಚರಣೆಗಳು, ಆಸನ – ಪ್ರಾಣಾಯಾಮ- ಪ್ರತ್ಯಹಾರ :- ಇವು ದೇಹದ ಭಂಗಿ, ಉಸಿರಿನ ನಿಯಂತ್ರಣ, ಮನೋ ನಿಗ್ರಹದಿಂದ ಹೊರಪ್ರಪಂಚದ ಪ್ರಜ್ಞೆಗಳಿಂದ ಅಂತರ್ಮುಖಿಯಾಗುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ , ಧಾರಣ – ಧ್ಯಾನ ಮತ್ತು ಸಮಾಧಿ :- ಇಂದ್ರಿಯ ನಿಗ್ರಹ ಹೊಂದಿದ ಮನಸ್ಸು, ಅಂತರ್ಮುಖಿಯಾಗಿ ಏಕಾಗ್ರತೆಯಿಂದ ಪರಿಶುದ್ಧ ಪ್ರಜ್ಞೆಯೊಂದಿಗೆ ಅಷ್ಟಾಂಗ ಯೋಗದ ತುತ್ತ ತುದಿಯ ಸ್ಥಿತಿಯಾದ ಸಮಾಧಿ ಸ್ಥಿತಿಯನ್ನು ಅನುಭವಿಸುವುದು.
ಜೀವಾತ್ಮ ಮತ್ತು ಪರಮಾತ್ಮಗಳೆರಡು ಒಂದಾಗುವುದು…
ಹೀಗೆ ಯೋಗ ಭೂಮಿಯ ಮೇಲೆ ವಾಸಿಸುವ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಔಷಧಿಯಾಗಿದೆ.