ಬೆಂಗಳೂರಿನ ಕೋರಮಂಗಲದಲ್ಲಿರುವ ಕೇಂದ್ರೀಯ ಸದನ ಕನ್ನಡ ಸಂಘವು, ಸದನದ ೮ನೇ ಮಹಡಿಯ ಕಚೇರಿಯಲ್ಲಿ ಎರಡು ದಶಕಗಳಿಂದ ರಚನಾತ್ಮಕ ಕನ್ನಡ ಕೆಲಸ ಮಾಡುತ್ತಿದೆ. ಈಗ ಬಂದಿರುವ ಕನ್ನಡೇತರ ಅಧಿಕಾರಿಗಳು ಕನ್ನಡ ಸಂಘವು ಕಚೇರಿಯನ್ನು ಅನಧಿಕೃತವಾಗಿ ಆಕ್ರಮಿಸಿಕೊಂಡಿದೆ ಎಂದು ಆದೇಶ ಪತ್ರ ನೀಡಿ ಸಂಘದ ಕಚೇರಿಯನ್ನು ತೆರವುಗೊಳಿಸಿ, ವಸ್ತುಗಳನ್ನು ಪಡಸಾಲೆಗೆ ಹಾಕಿದ್ದಾರೆ. ಸಂಘದ ಕಚೇರಿಯನ್ನು ಉಳಿಸಿಕೊಂಡುವAತೆ ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿಯವರಿಗೆ ಸಂಘದ ನಿಯೋಗವು ಮನವಿ ಮತ್ತು ದಾಖಲೆಗಳನ್ನು ನೀಡಿತು. ಮನವಿಯನ್ನು ಪರಿಶೀಲಿಸಿದ ಸಚಿವರು ಕೇಂದ್ರ ನಗರಾಭಿವೃದ್ಧಿ ಸಚಿವರೊಂದಿಗೆ ಮಾತನಾಡಿ ಸಂಘದ ಕಚೇರಿಯನ್ನು ಉಳಿಸಿಕೊಡುವುದಾಗಿ ಖಚಿತ ಭರವಸೆ ನೀಡಿದರು.
ಇಂದು (೨೮-೦೬-೨೦೨೫) ಬೆಳಗ್ಗೆ ಸಚಿವರ ಜೆಪಿ ನಗರದ ಮನೆಯಲ್ಲಿ ಖ್ಯಾತ ಚಲನಚಿತ್ರ ನಿರ್ದೇಶಕ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಡಾ. ಟಿ.ಎಸ್. ನಾಗಾಭರಣ, ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಡಾ. ಮನು ಬಳಿಗಾರ್, ಕನ್ನಡ ಚಿಂತಕ ರಾ.ನಂ. ಚಂದ್ರಶೇಖರ, ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಕಾರ್ಯದರ್ಶಿ ವ.ಚ. ಚನ್ನೇಗೌಡ, ಕೇಂದ್ರೀಯ ಸದನ ಕನ್ನಡ ಸಂಘದ ಅಧ್ಯಕ್ಷ ಮ. ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಬಿ. ಆನಂದಮೂರ್ತಿ ಮತ್ತು ಸಮಿತಿಯ ಸದಸ್ಯ ಕೆಂಪಯ್ಯ ಅವರುಗಳಿದ್ದ ನಿಯೋಗವು ಸಚಿವರನ್ನು ಭೇಟಿ ಮಾಡಿದಾಗ ಸಚಿವರ ಕಾರ್ಯದರ್ಶಿ ತೇಜಸ್ವಿ ನಾಯಕ್ ಐ.ಎ.ಎಸ್. ಮುಂತಾದ ಅಧಿಕಾರಿಗಳು ಇದ್ದರು.