ಚಾಮರಾಜನಗರ: ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ನೆನಪಿನಲ್ಲಿ ನಿರ್ಮಿಸಿರುವ ನಗರದ ಪ್ರಸಿದ್ಧ ಋಗ್ವೇದಿ ಕುಟೀರದ ಜೈ ಹಿಂದ್ ಕಟ್ಟೆಯಲ್ಲಿ ಜೈ ಹಿಂದ್ ಪ್ರತಿಷ್ಠಾನ ಮತ್ತುಋಗ್ವೇದಿ ಯೂತ್ ಕ್ಲಬ್ ವತಿಯಿಂದ ವೀರಹುತಾತ್ಮ ಮದನ್ ಲಾಲ್ ಧಿಂಗ್ರಾರವರ ಪುಣ್ಯಸ್ಮರಣೆಯನ್ನು ಆಚರಿಸಲಾಯಿತು. ಒಂದು ನಿಮಿಷ ಮೌನ ಆಚರಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಮದನ್ ಲಾಲ್ ಧಿಂಗ್ರಾರವರ ಕುರಿತು ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ ಮದನ್ ಲಾಲ್ ಧಿಂಗ್ರಾ ರವರು ಕೇವಲ 18ನೇ ವರ್ಷದಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ಗಲ್ಲು ಶಿಕ್ಷೆಗೆ ಒಳಪಟ್ಟ ಅಪ್ರತಿಮ ವೀರ. ಅತ್ಯಂತ ಶ್ರೀಮಂತ ಮನೆತನದಲ್ಲಿ ಬೆಳೆದ ಮದನ್ ಲಾಲ್ ಇಂಗ್ಲೆಂಡಿನಲ್ಲಿ ವೀರ ಸಾವರ್ಕರ್ ಅವರ ಪ್ರಭಾವಕ್ಕೆ ಒಳಗಾಗಿ ದೇಶನಿಷ್ಠೆ ,ರಾಷ್ಟ್ರಭಕ್ತಿ ಹಾಗೂ ಬ್ರಿಟಿಷರ ವಿರುದ್ಧ ಹೋರಾಟವನ್ನು ನಡೆಸಿದ ಮಹಾನ್ ಕ್ರಾಂತಿಕಾರಿ. ಕೋಟ್ಯಾಂತರ ಯುವಕರಿಗೆ ಧೈರ್ಯ, ಸ್ಪೂರ್ತಿ ಹಾಗೂ ದೇಶಭಕ್ತಿಯ ಪ್ರತೀಕ ಮದನ್ ಲಾಲ್ ಧಿಂಗ್ರಾರವರು ಹಾಗು ಕ್ರಾಂತಿಕಾರರ ಇತಿಹಾಸ ಶಾಲೆ, ಕಾಲೇಜುಗಳ ಬೋಧನಾ ವಿಷಯವಾಗಬೇಕು ಎಂದರು.
ಶ್ರೀರಂಗಪಟ್ಟಣದ ಬೆಳವಾಡಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ದಿನೇಶ್ ಪೂರಿಗಾಲಿ ಮಾತನಾಡಿ ಜೈ ಹಿಂದ್ ಕಟ್ಟೆಯಲ್ಲಿ ಸಾವಿರಾರು ಕಾರ್ಯಕ್ರಮಗಳನ್ನು ರೂಪಿಸಿ ದೇಶಭಕ್ತಿಯ ಕಾರ್ಯಕ್ರಮಗಳಿಗೆ ಸದಾ ಕಾಲ ಅರ್ಥಗರ್ಭಿತವಾಗಿ, ಇತಿಹಾಸ ಪ್ರಜ್ಞೆಯನ್ನು ದೇಶಭಕ್ತಿಯ ಮೂಲಕ ಜಾಗೃತಿ ಮೂಡಿಸುತ್ತಿರುವ ಜೈ ಹಿಂದ್ ಪ್ರತಿಷ್ಠಾನ ಹೆಮ್ಮೆಯ ರಾಷ್ಟ್ರಭಕ್ತಿಯ ಸಂಸ್ಥೆಯಾಗಿದೆ. ಪ್ರತಿ ಮನೆಮನೆಗಳಲ್ಲೂ ದೇಶಭಕ್ತರ ಸ್ಮರಣೆ ಮಾಡಿಕೊಳ್ಳುವ ಮೂಲಕ ನಾವು ನಿಷ್ಠೆಯಿಂದ ಬದುಕುವ ಹಾಗೂ ಸಮಾಜಕ್ಕೆ ಸೇವೆ ಸಲ್ಲಿಸುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಇಂಜಿನಿಯರ್ ಬೆಂಗಳೂರಿನ ಸತೀಶ್ ಮಾತನಾಡಿ ಯುವಕರಲ್ಲಿ ದೇಶದ ಇತಿಹಾಸವನ್ನು ತಿಳಿಸುವ ಕೆಲಸ ಮಾಡೋಣ. ಧರ್ಮ, ರಾಷ್ಟ್ರದ ಜಾಗೃತಿ ಹಾಗೂ ಸೇವಾಗುಣದ ಪ್ರಜ್ಞೆಯನ್ನು ಹೆಚ್ಚಿಸಿಕೊಳ್ಳೋಣ ಎಂದು ತಿಳಿಸಿದರು. ಋಗ್ವೇದಿ ಯೂತ್ ಕ್ಲಬ್ ನ ಶರಣ್ಯ, ಶ್ರಾವ್ಯ, ಅಧಿತಿ ,ಸಾನಿಕ ಮುಂತಾದವರು ಉಪಸ್ಥಿತರಿದ್ದರು.