ಹಾಸನ : ಪೌರಾಣಿಕ ನಾಟಕ ಪ್ರದರ್ಶನದ ದುಬಾರಿ ವೆಚ್ಚವನ್ನು ಭರಿಸಲು ಕಲಾತಂಡಗಳೇ ಒಟ್ಟಾಗಿ ಒಂದು ತಂಡದ ನೇತೃತ್ವದಲ್ಲಿ ನಾಟಕೋತ್ಸವ ಏರ್ಪಡಿಸಿ ಕಲಾಪ್ರೇಮಿಗಳಿಗೆ ಮನರಂಜನೆ ಒದಗಿಸುತ್ತಿವೆ. ಮನೆಯಲ್ಲೇ ಕುಳಿತು ಜಡ್ಡು ಹಿಡಿದ ಜನರ ಮನಸ್ಸು ಉಲ್ಲಾಸಗೊಳಿಸುವ ದಿಶೆಯಲ್ಲಿ ನಾಟಕಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ನಾಟಕಕಾರ ಗೊರೂರು ಅನಂತರಾಜು ಅಭಿಪ್ರಾಯಪಟ್ಟರು. ಹಾಸನದ ಶ್ರೀ ಅನ್ನಪೂರ್ಣೇಶ್ವರಿ ಕಲಾಸಂಘ ಹಾಸನದ ಕಲಾಭವನದಲ್ಲಿ ಏರ್ಪಡಿಸಿರುವ ನಾಟಕೋತ್ಸವದಲ್ಲಿ ಭಾನುವಾರ ಶ್ರೀ ಅನ್ನಪೂರ್ಣೇಶ್ವರಿ ಕಲಾಸಂಘ ಪ್ರದರ್ಶಿಸಿದ ಹೇಮಾವತಿ ಸ್ವಯಂವರ ನಾಟಕದಲ್ಲಿ ಅವರು ಮಾತನಾಡಿ ಕುರುಕ್ಷೇತ್ರ, ರಾಮಾಯಣ ನಾಟಕಗಳೇ ಹೆಚ್ಚೆಚ್ಚು ಪ್ರದರ್ಶನಗೊಂಡು ಜನರ ಮನಸ್ಸಿನಲ್ಲಿ ಹಾಸುಹೊಕ್ಕಾಗಿವೆ. ಕಲಾತಂಡಗಳು ಹೊಸ ಹೊಸ ನಾಟಕ ಕಲಿತು ಪ್ರದರ್ಶಿಸಬೇಕು. ಕಲಾವಿದರು ಹಲವು ಬಗೆಯ ಪಾತ್ರಗಳಲ್ಲಿ ಅಭಿನಯ ತೋರಬೇಕು. ಕಲಾವಿದ ಡಿ.ವಿ.ನಾಗಮೊಹನ್ ಹೊಸ ಪ್ರಯೋಗವಾಗಿ ಹೇಮಾವತಿ ಸ್ವಯಂವರ ನಾಟಕ ಏರ್ಪಡಿಸಿದ್ದಾರೆ.
ಇದೇ ರೀತಿ ಇನ್ನೂ ಹಲವು ಪೌರಾಣಿಕ ನಾಟಕಗಳ ಪ್ರದರ್ಶನ ಕಲಾಭವನದಲ್ಲಿ ನಡೆಯಲೆಂದು ಆಶಿಸಿದರು. ಹಾಸನ ಜಿಲ್ಲಾ ಕಲಾವಿದರ ಹಿತರಕ್ಷಣಾ ಸಮಿತಿ ಅಧ್ಯಕ್ಷರು ಬಿದರೆ ರವಿ, ಖಜಾಂಚಿ ರಮೇಶ್ ಗೌಡಪ್ಪ, ಕಲಾವಿದರಾದ ಹೆಚ್.ಎಂ.ಪ್ರಭಾಕರ್, ಯರೇಹಳ್ಳಿ ಮಂಜೇಗೌಡ್ರು, ಗ್ಯಾರಂಟಿ ರಾಮಣ್ಣ, ಕರ್ಲೆ ಗೋವಿಂದೇಗೌಡ್ರು, ತಿಮ್ಮಣ್ಣ, ಗಣೇಶ್, ಭಾನುಶೇಖರ್, ಶಶಿ ಸಾಲಗಾಮೆ, ಶ್ರೀಕಂಠಪ್ಪ ಸಿ.ಎಂ. ಮಾಯಸಂದ್ರ ಟಿ.ನಾಗರಾಜ್, ವಕೀಲರು ತಿಮ್ಮೇಗೌಡ್ರು ಮೊದಲಾದವರು ಇದ್ದರು. ನಾಟಕ ನಿರ್ದೇಶಕÀರು ಡಿ.ಸಿ.ಪುಟ್ಟರಾಜು ಕುಟುಂಬವನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು.
ಅನ್ನಪೂರ್ಣೇಶ್ವರಿ ಕಲಾಸಂಘದ ಅಧ್ಯಕ್ಷರು ನಾಟಕೋತ್ಸವ ಆಯೋಜಕರು ಕಲಾವಿದ ಡಿ.ವಿ.ನಾಗಮೊಹನ್ ಕಾರ್ಯಕ್ರಮ ನಿರೂಪಿಸಿ ಕಲಾವಿದ ವೈಭವ್ ವೆಂಕಟೇಶ್ ಸ್ವಾಗತಿಸಿದರು. ಹಾಸನದಲ್ಲಿ ನೂತನವಾಗಿ ಪ್ರಯೋಗಗೊಂಡ ಶಿವಭಕ್ತ ಚಂಡಾಸುರನ ವಧೆ ಪ್ರೇಕ್ಷಕರ ಮನ ಸೆಳೆಯಿತು.