ಸ್ಯಾನ್ಹೋಸೆ, ಅಮೆರಿಕ, ಜುಲೈ 5 : ಅಮೆರಿಕದ ಸ್ಯಾನ್ಹೋಸೆ ನಗರದ ಮೆಕನರಿ ಕನ್ವೆನ್ಷನ್ ಸೆಂಟರ್ನಲ್ಲಿ ಮೂರು ದಿನಗಳ (ಜು.3-5) 18ನೇ ವಿಶ್ವ ಒಕ್ಕಲಿಗ ಮಹಾಸಮ್ಮೇಳನಕ್ಕೆ ಶನಿವಾರ ಅದ್ಧೂರಿ ಚಾಲನೆ ದೊರಕಿತು.
ಸಪ್ತ ಸಾಗರದಾಚೆ ಕನ್ನಡ ಮಣ್ಣಿನ ಮಕ್ಕಳ ಸಾಂಸ್ಕೃತಿಕ ಮಹಾಸಮ್ಮೇಳನವನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ದಿವ್ಯ ಆಶೀರ್ವಾದದೊಂದಿಗೆ ಉದ್ಘಾಟಿಸಿದರು.
ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಮಾಜಮುಖಿ ಹಬ್ಬವಾಗಿ ರೂಪುಗೊಂಡಿರುವ ಈ ಕಾರ್ಯಕ್ರಮವು ವಿಶ್ವದ ವಿವಿಧೆಡೆ ನೆಲೆಸಿರುವ ಒಕ್ಕಲಿಗ ಸಮುದಾಯದ ಬಂಧುಗಳನ್ನು ಒಂದೆಡೆ ಸೇರಿಸಿರುವ ಅಪೂರ್ವ ಸನ್ನಿವೇಶವಾಗಿದೆ.
ಕರ್ನಾಟಕದ ಮಾಜಿ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ ನಾರಾಯಣ, ಸಂಸದರಾದ ಡಾ. ಕೆ. ಸುಧಾಕರ್, ಶಾಸಕರಾದ ಸಿ.ಎಸ್. ಪುಟ್ಟರಾಜು, ಎಸ್.ಟಿ. ಸೋಮಶೇಖರ್, ಸತೀಶ್ ರೆಡ್ಡಿ, ಗುಬ್ಬಿ ಶ್ರೀನಿವಾಸ್ ಹಾಗೂ ಒಕ್ಕಲಿಗ ಸಮುದಾಯದ ಮುಖಂಡರಾದ ಸಚ್ಚಿದಾನಂದ, ಒಕ್ಕಲಿಗ ಪರಿಷತ್ ಆಫ್ ಅಮೆರಿಕ ಅಧ್ಯಕ್ಷರಾದ ಧನಂಜಯ್ ಕೆಂಗಯ್ಯ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿ ಸಮ್ಮೇಳನಕ್ಕೆ ಕಳೆ ತಂದಿದ್ದಾರೆ.
ಸಾಂಸ್ಕೃತಿಕ ವೈಭವ
ವಿಶ್ವದ ನಾನಾ ಭಾಗಗಳಿಂದ ಆಗಮಿಸಿದ ಸಮುದಾಯದ ಸದಸ್ಯರು, ವೈವಿಧ್ಯಮಯ ಸಂಸ್ಕೃತಿ, ಪರಂಪರೆ, ಉತ್ಸವವನ್ನು ಇಲ್ಲಿ ಜಗತ್ತಿಗೆ ತೋರಿಸಿದ್ದಾರೆ. ಒಕ್ಕಲಿಗರ ಸಂಸ್ಕೃತಿಯ ಬಣ್ಣನೆ, ಭಕ್ತಿಯ ಮೆರವಣಿಗೆ, ಸುಗ್ಗಿ ಕುಣಿತ, ದೇವರ ಉತ್ಸವ, ಕೋಲಾಟ, ವೇಷ ಭೂಷಣಗಳ ಪ್ರದರ್ಶನಗಳು ಸ್ಯಾನ್ಹೋಸೆ ರಸ್ತೆಗಳಲ್ಲಿ ಜಾತ್ರಾ ಉತ್ಸವದ ಅನುಭವವನ್ನು ನೀಡಿದವು.
ಸಾಂಸ್ಕೃತಿಕ, ಕಲಾ ಪ್ರದರ್ಶನಗಳ ಜೊತೆಗೆ ಈ ಮೂರು ದಿನಗಳ ಕಾರ್ಯಕ್ರಮದಲ್ಲಿ ವಿಶಿಷ್ಟ ಭೋಜನ ವ್ಯವಸ್ಥೆ, ಸಮುದಾಯ ವಧು-ವರರ ಪರಿಚಯ ವೇದಿಕೆ, ಉದ್ಯಮಿಗಳಿಗೆ ‘ಬಿಸಿನೆಸ್ ಫೋರಂ’, ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳು, ಕಾರ್ಯಕ್ರಮಗಳು, ಮಹಿಳಾ ಚಟುವಟಿಕೆಗಳು ಸೇರಿದಂತೆ ಹಲವು ವಿಷಯಾಧಾರಿತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಒಕ್ಕಲಿಗ ಸಮುದಾಯದ ಬಲವರ್ಧನೆಗೆ ಪರಸ್ಪರ ಸಹಕಾರಕ್ಕೆ ನಾಂದಿಯಾಗಿವೆ.
ಅಮೆರಿಕದ ವಿವಿಧ ರಾಜ್ಯಗಳು ಹಾಗೂ ಇತರ ದೇಶಗಳಿಂದ ಸಾವಿರಾರು ಕುಟುಂಬಗಳು ಭಾಗವಹಿಸಿದ್ದ ಈ ಸಮ್ಮೇಳನ, ವಿದೇಶಿ ನೆಲದಲ್ಲಿ ಸಮುದಾಯದ ಹೆಗ್ಗಳಿಕೆಯನ್ನು ಅನಾವರಣಗೊಳಿಸಿದೆ. “ಒಕ್ಕಲಿಗ ಸಮಾಜ – ಜಗತ್ತಿನ ಮೂಲೆಮೂಲೆಗೂ ತಲುಪಿದೆ” ಎಂಬುದನ್ನು ಸಮರ್ಥವಾಗಿ ಸಾರುತ್ತಿದೆ.
ಒಕ್ಕಲುತನ ಮಾಡುವ ಒಕ್ಕಲಿಗರು ಇಂದು ತಮ್ಮ ಜ್ಞಾನ, ಸ್ವಸಾಮರ್ಥ್ಯದಿಂದ ಸಮಾಜದಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ. ತಮ್ಮ ಜ್ಞಾನ ಭಂಡಾರದಿಂದಲೇ ಅಮೆರಿಕ, ಯುರೋಪ್ ಸೇರಿದಂತೆ ಅನೇಕ ದೇಶಗಳಲ್ಲಿ ನೆಲೆಸಿದ್ದಾರೆ. ತಂತ್ರಜ್ಞಾನ ಹುದ್ದೆಗಳು, ಉದ್ಯಮ, ವ್ಯವಹಾರ ಸೇರಿದಂತೆ ಅನೇಕ ಕೆಲಸಗಳನ್ನು ಮಾಡುತ್ತಿದ್ದಾರೆ. ತಾವು ನೆಲೆಸಿರುವ ದೇಶ ಮತ್ತು ತಾಯ್ನಾಡು ಭಾರತಕ್ಕೆ ತಮ್ಮದೇ ಆದ ಮಹತ್ವದ ಕೊಡುಗೆಗಳನ್ನು ನೀಡುತ್ತಿದ್ದಾರೆ. ತಮ್ಮ ಊರಿನಿಂದ ಸಾವಿರಾರು ಕಿ.ಮೀ ದೂರದ ಊರಿಗೆ ಬಂದಿದ್ದರೂ ಸಮುದಾಯ ಮತ್ತು ಕನ್ನಡ ನಾಡಿನ ಸಂಸ್ಕೃತಿ, ಪರಂಪರೆ, ಗೌರವಯನ್ನು ಉಳಿಸಿ ಬೆಳೆಸುತ್ತಿರುವುದು ಅತ್ಯಂತ ಸಂತೋಷದ ಸಂಗತಿ. ಇದು ಸಾಮಾನ್ಯ ಸಮ್ಮೇಳನವಲ್ಲ. ಸಮುದಾಯ ಮತ್ತು ಸಂಸ್ಕೃತಿಯನ್ನು ಒಗ್ಗೂಡಿಸಿ ಅಭಿವೃದ್ಧಿಗೆ ಕೊಡುಗೆ ನೀಡುವ ವಿಶೇಷ ಸಂದರ್ಭವಾಗಿದೆ.
-ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಪೀಠಾಧಿಪತಿ, ಆದಿಚುಂಚನಗಿರಿ ಮಠ
ಸಂಸ್ಕೃತಿ, ಕಲೆ, ಪರಂಪರೆಯ ಪ್ರದರ್ಶನದ ಜೊತೆಗೆ ವ್ಯಾಪಾರ ಉದ್ಯಮ ಸ್ಥಾಪನೆ, ವಿಸ್ತರಣೆ, ಸ್ಟಾರ್ಟಪ್ ಐಡಿಯಾಗಳು, ನೆಟ್ವರ್ಕಿಂಗ್, ಅಮೆರಿಕದಲ್ಲಿರುವ ಹೊಸ ಅವಕಾಶಗಳನ್ನು ಬಳಸಿಕೊಂಡು ಅಭಿವೃದ್ಧಿ ಕಾಣಲು ಈ ಸಮ್ಮೇಳನ ಮಹತ್ವದ ಪಾತ್ರ ವಹಿಸುತ್ತದೆ. ಅಮೆರಿಕದಲ್ಲಿ ನೆಲೆಸಿರುವವರು, ಕರ್ನಾಟಕ ಸೇರಿದಂತೆ ಜಗತ್ತಿನ ನಾನಾ ಭಾಗಗಳಿಂದ ಆಗಮಿಸಿರುವವರು ಇದರ ಸಂಪೂರ್ಣ ಪ್ರಯೋಜನ ಪಡೆದು ಮತ್ತಷ್ಟು ಅಭಿವೃದ್ಧಿ ಕಾಣುವ ಸಂಪೂರ್ಮ ವಿಶ್ವಾಸವಿದೆ.
-ಡಾ.ಸಿ.ಎನ್. ಅಶ್ವತ್ಥನಾರಾಯಣ, ಶಾಸಕರು
ಈ ಸಮ್ಮೇಳನದಲ್ಲಿ ಭಾಗವಹಿಸಿ ನನಗೆ ಅತ್ಯಂತ ಸಂತೋಷವಾಯಿತು. ಅಮೆರಿಕದಲ್ಲಿ ಒಕ್ಕಲಿಗ ಸಮುದಾಯದವರು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸೇರಿ ನಮ್ಮ ಸಂಸ್ಕೃತಿ, ಕಲೆ, ಪರಂಪರೆಯ ಪ್ರದರ್ಶನದ ಜೊತೆಗೆ ಉದ್ಯಮ ಅವಕಾಶಗಳು, ಬೆಳವಣಿಗೆ ಕುರಿತು ಚರ್ಚಿಸುವುದು ನಿಜಕ್ಕೂ ಶ್ಲಾಘನೀಯ. ಯಾವುದೇ ಸಮುದಾಯವಾಗಲಿ ಒಗ್ಗಟ್ಟಿನಿಂದ ಯಾವ ರೀತಿ ಅಭಿವೃದ್ಧಿ ಕಾಣಬಹುದು ಎನ್ನುವುದಕ್ಕೆ ಈ ಸಮ್ಮೇಳನ ಸಾಕ್ಷಿಯಾಗಿದೆ.
-ಸಿ.ಎಸ್. ಪುಟ್ಟರಾಜು, ಶಾಸಕರು
ಅಮೆರಿಕದಲ್ಲಿ ಒಕ್ಕಲಿಗರ ಸಮ್ಮೇಳನ ಆಯೋಜನೆಯೇ ಒಂದು ಹೆಮ್ಮೆಯ ಸಂಗತಿ. ಮೂಲತಃ ಕೃಷಿಕರಾಗಿರುವ ಒಕ್ಕಲಿಗ ಸಮುದಾಯದವರು ಇಂದು ಜಗತ್ತಿನ ಮೂಲೆ ಮೂಲೆಯಲ್ಲಿದ್ದಾರೆ. ಅಮೆರಿಕದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಒಕ್ಕಲಿಗರು ಒಂದೆಡೆ ಸೇರುವುದರಿಂದ ಬೆಳವಣಿಗೆಗೆ ಇನ್ನಷ್ಟು ಅನುಕೂಲವಾಗುತ್ತದೆ. ಮುಂದಿನ ದಿನಗಳಲ್ಲಿ ಈ ಸಮ್ಮೇಳನವನ್ನು ಮತ್ತಷ್ಟು ವಿಸ್ತಾರಗೊಳಿಸುವ ಉದ್ದೇಶವಿದೆ.
-ಧನಂಜಯ್, ಅಧ್ಯಕ್ಷರು, ವಿಶ್ವ ಒಕ್ಕಲಿಗ ಪರಿಷತ್ ಆಫ್ ಅಮೆರಿಕ
VEE KAY NEWS DIGITAL
ರಾಜ್ಯ ಬಿಜೆಪಿ ಮತ್ತೆ ಪುಟಿದೇಳುತ್ತಾ?- ಒಂದು ವಿಶ್ಲೇಷಣೆ :
ದೃಶ್ಯಾವಳಿ ವೀಕ್ಷಿಸಲು ಇದನ್ನು ಕ್ಲಿಕ್ ಮಾಡಿ