ಬೆಂಗಳೂರು : ಭರತನಾಟ್ಯ ಕಲೆಗೆ ಅಪಾರವಾದ ವೈಶಿಷ್ಟ ಮತ್ತು ಪರಂಪರೆ ಇದೆ. ಕಾಲಕ್ಕೆ ತಕ್ಕಂತೆ ಹಲವಾರು ಮಹನೀಯರು ಕಲೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ. ಕಲೆಯೂ ಪ್ರತಿಯೊಬ್ಬರನ್ನೂ ಭಕ್ತಿ ಮುಕ್ತಿಯ ಮಾರ್ಗಕ್ಕೆ ಕೊಂಡೊಯ್ಯುತ್ತದೆ.
ಗುರು ಡಾ. ಸತ್ಯನಾರಾಯಣರಾಜು ಇವರು ತಮ್ಮ 60ನೇ ವರ್ಷದ ಸಾರ್ಥಕ ನೃತ್ಯ ಬದುಕಿನ ಪಯಣವನ್ನು “ಷಷ್ಠಿ ವರ್ಣ ಚಕ್ರ” ಎಂಬ ಶೀರ್ಷಿಕೆಯ ಅಡಿಯಲ್ಲಿ 60 ಬಾರಿ ವರ್ಣವನ್ನು ವಿವಿಧ ನೃತ್ಯ ಶಾಲೆಯಲ್ಲಿ ಪ್ರದರ್ಶಿಸಲು ಇಚ್ಚಿಸಿರುತ್ತಾರೆ. ಗುರುವಿನ ಮೇಲಿನ ಆಪಾರ ಭಕ್ತಿಯಿಂದ ಪ್ರತಿ ಕಾರ್ಯಕ್ರಮವನ್ನು ತಮ್ಮ ಗುರುಗಳಾದ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಪೃರಸ್ಕೃತರು ಆದ ಗುರು ಶ್ರೀಮತಿ ನರ್ಮದಾರವರಿಗೆ ಮೀಸಲಿಟ್ಟಿದ್ದಾರೆ. ಇವರ 18ನೇ ವರ್ಣ ಪ್ರಸ್ತುತಿಯನ್ನು ಅರಿಶಿನಕುಂಟೆಯ “ಶ್ರೀ ಗಣೇಶ ನೃತ್ಯಾಲಯದ ” ಕಲಾ ನಿರ್ದೇಶಕರಾದ ಶ್ರೀಮತಿ ಭಾವನಾ ಗಣೇಶ ಮತ್ತು ಶ್ರೀ ಎಂ ಡಿ ಗಣೇಶ್ ನೃತ್ಯ ದಂಪತಿಗಳು ಆಯೋಜಿಸಿದ್ದರು. ನಟ್ಟುವಾಂಗ ನಿರ್ವಹಣೆಯಲ್ಲಿ ವಿದ್ವಾನ್ ಭರತ್ ನಾರಾಯಣ್, ಸುಶ್ರಾವ್ಯ ಗಾಯನದಲ್ಲಿ ವಿದುಷಿ ಅನಂದಿತಾ ಕುಲೂರು, ಮೃದಂಗದಲ್ಲಿ ವಿದ್ವಾನ್ ವಿದ್ಯಾ ಶಂಕರ್, ಕೊಳಲು ವಾದನದಲ್ಲಿ, ವಿದ್ವಾನ್ ವರುಣ್ ಭಾರೀಘಾಟ್ ಇದ್ದದ್ದು ಕಾರ್ಯಕ್ರಮಕ್ಕೆ ಇನ್ನಷ್ಟು ಮೆರಗು ತಂದಿತ್ತು. “ವರ್ಣ ” ಎನ್ನುವುದು ಭರತನಾಟ್ಯ ಮಾರ್ಗದಲ್ಲಿ ಘನ ಪ್ರಸ್ತುತಿ. ಇದನ್ನು ಕಿರಿಯರಿಂದ ಹಿರಿಯರವರೆಗೂ ಮನಮುಟ್ಟುವಂತೆ ಪ್ರದರ್ಶಿಸಿ, ನಂತರ ಪುರಂದರದಾಸರ “ಜಗದೋದ್ದಾರನ” ಮತ್ತು “ಇನ್ನು ದಯಬಾರದೆ” ಎಂಬ ದೇವರನಾಮದಲ್ಲಿ ನವವಿಧ ಭಕ್ತಿಯನ್ನು ತೋರಿಸಿ ಕಲಾರಸಿಕರ ಕಣ್ಣಂಚಿನಲ್ಲಿ ಆನಂದದ ಭಾಷ್ಪ ಬರುವಂತೆ ಮೂಡಿತ್ತು ಪ್ರದರ್ಶನ. ಧನ್ಯತಾ ಭಾವದಿಂದ ದಂಪತಿಗಳಿಬ್ಬರೂ ಸಂತೋಷವನ್ನು ವ್ಯಕ್ತ ಪಡಿಸಿ ನಟರಾಜನ, ಗುರುಗಳ ಆಶೀರ್ವಾದದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.