ಬೆಂಗಳೂರು: ‘ಬ್ಯಾಟರಾಯನಪುರ ಜನಾಕ್ರೋಶ ಯಾತ್ರೆ’ ನಡೆಸದಂತೆ ತಡೆದಿರುವುದನ್ನು ಬಿಜೆಪಿ ರಾಜ್ಯ ಕಾರ್ಯದರ್ಶಿ ತಮ್ಮೇಶ್ ಗೌಡ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ, ಪ್ರಸ್ತುತ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ನೀತಿ, ತೆರಿಗೆ ಏರಿಕೆ, ದುರಾಡಳಿತ, ಭ್ರಷ್ಟಚಾರ, ಸ್ವಜನಪಕ್ಷಪಾತ ಹಾಗು ಬ್ಯಾಟರಾಯನಪುರ ಕ್ಷೇತ್ರದ ಅಭಿವೃದ್ಧಿಯನ್ನು ಕಡೆಗಣಿಸಿದುದರ ವಿರುದ್ಧವಾಗಿ ಇಂದು (10 ಜೂನ್ 2025) ‘ಬ್ಯಾಟರಾಯನಪುರ ಜನಾಕ್ರೋಶ ಯಾತ್ರೆ’ ಯ ಹೆಸರಿನಲ್ಲಿ, ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕುರಿತು ಸ್ಥಳೀಯ ಬಿಬಿಎಂಪಿ ಕಚೇರಿಗೆ ಮನವಿ ಸಲ್ಲಿಸಲು ತೆರಳುವಾಗ, ಪೊಲೀಸರು ಹಾಗು ಕೆಲವು ಅಧಿಕಾರಿಗಳು ತಡೆದಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಇದು ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸದಂತೆ ಹತ್ತಿಕ್ಕುವ ಪ್ರಯತ್ನವಾಗಿದೆ. ಆ ಮೂಲಕ ಜನರ ಸಮಸ್ಯೆಗಳನ್ನು ಸರ್ಕಾರಕ್ಕೆ ತಿಳಿಸದಂತೆ ತಡೆಹಿಡಿಯುವ ವ್ಯವಸ್ಥಿತ ತಂತ್ರ ನಡೆಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಇದರಿಂದ ಒಂದಿಷ್ಟು ಮೂಲಭೂತ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಪ್ರಸ್ತುತ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರವನ್ನು ಕೃಷ್ಣ ಭೈರೇಗೌಡ ಅವರು ಪ್ರತಿನಿಧಿಸುತ್ತಿದ್ದು, ಅವರು ಸರ್ಕಾರದ ಪ್ರಭಾವಿ ಸಚಿವರು ಎನ್ನಿಸಿಕೊಂಡಿದ್ದಾರೆ. ಹಾಗಾದರೆ ಸಚಿವರು ಅಧಿಕಾರದ ಪ್ರಭಾವ ಬಳಸಿ ಇಂಥಹ ಕಾರ್ಯಕ್ರಮ ನಡೆಯದಂತೆ ತಡೆಹಿಡಿದರೇ? ಜನಸಾಮಾನ್ಯರು ಒಕ್ಕೊರಲಿನಿಂದ ಸಮಸ್ಯೆಗಳನ್ನು ವಿರೋಧಿಸುವುದನ್ನು ಹತ್ತಿಕ್ಕುವ ಪ್ರಯತ್ನವಾಗುತ್ತಿದೆಯೇ? ಈ ಕಾರ್ಯಕ್ರಮ ನಡೆದರೆ ಎಲ್ಲಿ ತಮ್ಮ ಕ್ಷೇತ್ರದ ಸಮಸ್ಯೆಗಳ ಗುಟ್ಟು ರಟ್ಟಾಗುತ್ತದೆಯೋ ಎಂಬ ಭಯ ಕೃಷ್ಣ ಭೈರೇಗೌಡರಿಗೆ ಕಾಡುತ್ತಿದೆಯೇ? ಶಾಸಕರಾದವರಿಗೆ ತಮ್ಮ ಕೆಲಸಗಳು ಸರಿಯಾಗಿ ನಡೆಯುತ್ತಿಲ್ಲ ಎಂಬ ಬಗ್ಗೆ ಪ್ರಶ್ನಿಸುವುದನ್ನು ಸಹಿಸಿಕೊಳ್ಳಲಾಗುತ್ತಿಲ್ಲವೇ? ಎಂದು ಅವರು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ಜನಸಾಮಾನ್ಯರ ಆಕ್ರೋಶವನ್ನು ಕೇಳಿಸಿಕೊಳ್ಳಲು ಶಾಸಕರು ಸಿದ್ಧರಿಲ್ಲವೇ? ಅಥವಾ ಶಾಸಕರು ಬೇಕೆಂದೇ ಕೇಳಿಸಿಕೊಳ್ಳುವುದರಿಂದ ತಪ್ಪಿಸಿಕೊಳ್ಳಲು ಹೀಗೆಲ್ಲ ಷಡ್ಯಂತ್ರ ಮಾಡಲಾಗುತ್ತಿದೆಯೇ? ಜನಸಾಮಾನ್ಯರಿಗೆ ತಮ್ಮ ಸಮಸ್ಯೆಗಳ ವಿರುದ್ಧ ಆಕ್ರೋಶ ಹೊರಹಾಕುವ ಅವಕಾಶವನ್ನು ಕಸಿಯಲಾಗುತ್ತಿದೆಯೇ? ಈ ಸರ್ಕಾರದ ಅವಧಿಯಲ್ಲಿ ಜನಸಾಮಾನ್ಯರ ಧ್ವನಿಯನ್ನು ಮಟ್ಟಹಾಕುವ ಪ್ರಯತ್ನವಾಗುತ್ತಿದೆಯೇ? ಎಂಬೆಲ್ಲ ಮೂಲಭೂತ ಪ್ರಶ್ನೆಗಳು ನಮ್ಮನ್ನು ಕಾಡುತ್ತಿದೆ. ಈ ಕುರಿತು ಶಾಸಕ, ಸಚಿವರು ಉತ್ತರಿಸಬೇಕು ಎಂದು ವಿನಂತಿಸಿದ್ದಾರೆ.
ಶಾಸಕರ ಸರ್ವಾಧಿಕಾರಿ ಧೋರಣೆ
ಈ ಕುರಿತು ಪ್ರಶ್ನಿಸಿದ್ದಕ್ಕೆ ನನ್ನನ್ನು ಹಾಗೂ ಸ್ಥಳೀಯ ಬಿಜೆಪಿ ಮುಖಂಡರನ್ನು ಸ್ಥಳೀಯ ಪೊಲೀಸ್ ಅಧಿಕಾರಿಗಳನ್ನು ಬಳಸಿಕೊಂಡು ಗೃಹಬಂಧನದಲ್ಲಿ ಇರಿಸಲಾಗಿದೆ. ಶಾಸಕರ ಈ ಸರ್ವಾಧಿಕಾರಿ ಧೋರಣೆಯನ್ನು ನಾವೆಲ್ಲರೂ ಖಂಡಿಸುತ್ತೇವೆ. ಈ ರೀತಿಯ ಗೊಡ್ಡು ಬೆದರಿಕೆಗಳಿಗೆ ನಾವು ಹೆದರುವುದಿಲ್ಲ. ಹಿಂದೆ ಸರಿಯುವುದೂ ಇಲ್ಲ. ನಮ್ಮನ್ನು ಹತ್ತಿಕ್ಕುವ ಪ್ರಯತ್ನಕ್ಕೆ ತಕ್ಕ ರೀತಿಯಲ್ಲಿ ಉತ್ತರಿಸುತ್ತೇವೆ. ಇದು ಹೀಗೇ ಮುಂದುವರೆದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟದ ಎಚ್ಚರಿಕೆ ನೀಡುತ್ತಿದ್ದೇವೆ. ನಮ್ಮ ಹೋರಾಟ ನಿರಂತರ. ಜನಸಾಮಾನ್ಯರ ಪರವಾದ ನಮ್ಮ ಹೋರಾಟ ಎಂದೂ ನಿಲ್ಲುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.