ಕೌಶಲ್ಯತೆ ಮೂಡಿಸಿಕೊಳ್ಳುವಂತೆ ಪ್ರಾಂಶುಪಾಲ ನಂಜುoಡಪ್ಪ ಕರೆ
ತುಮಕೂರು: ಪ್ರಸ್ತುತ ದಿನಗಳಲ್ಲಿ ವಿದ್ಯೆಯ ಜೊತೆಗೆ ಕೌಶಲ್ಯವು ಬಹಳ ಮುಖ್ಯವಾಗಿದೆ. ಜೀವನದಲ್ಲಿ ಉದ್ಯೋಗವನ್ನು ಪಡೆದುಕೊಳ್ಳಲು ವಿದ್ಯಾರ್ಥಿಗಳು ಸಮಯ ಪ್ರಜ್ಞೆ, ಜ್ಞಾನ, ಕೌಶಲ್ಯಗಳನ್ನು ಪಡೆದುಕೊಳ್ಳಬೇಕು ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ಟಿ.ಬಿ.ನಂಜು0ಡಪ್ಪ ತಿಳಿಸಿದರು.
ನಗರದ ಶ್ರೀ ಸಿದ್ಧಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ತುಮಕೂರು ಇವರ ವತಿಯಿಂದ ಕಾಲೇಜಿನಲ್ಲಿ ಆಯೋಜಿಸಿದ್ದ ಪ್ಲೇಸ್ಮೆಂಟ್ ಅಂಡ್ ಟ್ರೈನಿಂಗ್ ಸೆಲ್ ಹಾಗೂ ಮ್ಯಾಜಿಕ್ ಬಸ್ ಫೌಂಡೇಶನ್ ವತಿಯಿಂದ ಬೃಹತ್ ಉದ್ಯೋಗ ಮೇಳ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಜೀವನವು ಸರಾಗವಾಗಿ ಸಾಗಬೇಕಾದರೆ ಉದ್ಯೋಗವು ಬಹಳ ಮುಖ್ಯವಾದದ್ದು ಆಧುನಿಕ ಜೀವನದ ಬೇಕು ಬೇಡಗಳನ್ನು ನಿಭಾಯಿಸಲು ಆರ್ಥಿಕವಾಗಿ ಸದೃಢವಾಗಬೇಕಾದರೆ ಉದ್ಯೋಗದ ಅವಶ್ಯಕತೆ ಬಹಳ ಮುಖ್ಯವಾಗಿದೆ. ನಮ್ಮ ಕಾಲೇಜು ವಿದ್ಯೆಯ ಜೊತೆಗೆ ಉದ್ಯೋಗವನ್ನು ಕಲ್ಪಿಸುವ ಕೆಲಸವನ್ನು ಮಾಡುತ್ತಿದೆ ಎಲ್ಲರಿಗೂ ಉದ್ಯೋಗ ಪಡೆಯಲು ಸುವರ್ಣ ಅವಕಾಶವಿದು ಎಂದು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಸಿದ್ಧಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಚ್.ಎಂ.ದಕ್ಷಿಣಮೂರ್ತಿ ರವರು ಮಾತನಾಡಿ, ದುಡಿಯುವ ಕೈಗಳಿಗೆ ಕೆಲಸ ನೀಡಲು ಹಲವಾರು ಕಂಪನಿಗಳು ಮುಂದೆ ಬಂದಿವೆ.
ಮಾನವ ಸಂಪನ್ಮೂಲದ ಸದ್ಬಳಕೆಯ ಮೂಲಕ ಜನರ ಜೀವನ ಮಟ್ಟವನ್ನು ಸುಧಾರಿಸಬಹುದಾಗಿದೆ. ಗ್ರಾಮೀಣ ಭಾಗದ ಯುವಜನತೆ ನಗರಗಳ ಕಡೆ ಆಗಮಿಸಿ ಬದುಕನ್ನು ಕಟ್ಟಿಕೊಳ್ಳಲು ಹಲವಾರು ಕಂಪನಿಗಳು ಮುಖ್ಯ ಪಾತ್ರ ವಹಿಸಿವೆ. ಮಾನವನ ಆರ್ಥಿಕತೆ ಉತ್ತಮವಾಗಬೇಕಾದರೆ ಉದ್ಯೋಗ ಬಹಳ ಮಹತ್ವವಾಗಿದೆ ಆದ್ದರಿಂದ ವಿದ್ಯಾರ್ಥಿಗಳು ಹೆಚ್ಚು ಉದ್ಯೋಗದ ಅವಕಾಶಗಳನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಬೃಹತ್ ಉದ್ಯೋಗ ಮೇಳದಲ್ಲಿ 32ಕ್ಕೂ ಹೆಚ್ಚು ಎಂಎನ್ಸಿ ಕಂಪನಿಗಳು ಭಾಗವಹಿಸಿದ್ದು 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉದ್ಯೋಗ ಮೇಳದ ಸದುಪಯೋಗವನ್ನು ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಐಕ್ಯುಎಸಿ ಸಂಯೋಜಕರಾದ ಪ್ರೊ.ಎಚ್.ಜಿ.ಸರ್ವಮಂಗಳ, ಐಕ್ಯೂಎಸಿ ಮಾರ್ಗದರ್ಶಕ ಪ್ರೊ.ಸಿ.ಎಸ್ ಸೋಮಶೇಖರಯ್ಯ, ಪ್ಲೇಸ್ಮೆಂಟ್ ಅಂಡ್ ಟ್ರೈನಿಂಗ್ ಸೆಲ್ನ ಸಂಚಾಲಕರಾದ ಪ್ರೊ.ಲಿಂಗದೇವರಪ್ಪ ಹಾಗೂ ಎಲ್ಲಾ ಬೋಧಕ ಮತ್ತು ಬೋಧಕೇತರ ವರ್ಗದವರು ಹಾಗೂ ವಿದ್ಯಾರ್ಥಿಗಳು ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.