ಉಪಾಕರ್ಮವನ್ನು ಶ್ರಾವಣಮಾಸದಲ್ಲಿ ಬರುವ ದಿನದಂದು ಋಗ್ವೇದಿಗಳು ಯಜುರ್ವೇದಿಗಳು ಉಪಾಕರ್ಮವನ್ನು ಮಾಡಿಕೊಳ್ಳಬೇಕು. ಅಂದು ನಾವು ಕಲಿತ ವೇದಮಂತ್ರಗಳನ್ನು ಭಗವಂತನಿಗೆ ಅರ್ಪಿಸುತ್ತಾ ಮತ್ತಷ್ಟು ಅಧ್ಯಯನವನ್ನು ಮಾಡುತ್ತೇವೆ ಎಂದು ಸಂಕಲ್ಪಿಸುವ ದಿನ.
ಯಜ್ಞೋಪವೀತವು ದೇವರು ನಮ್ಮ ಹೆಗಲಿಗೇರಿಸಿದ ಕರ್ತ್ಯವ್ಯದ ಸಂಕೇತವೂ ಆಗಿದೆ. ಕಾಲಪ್ರಜ್ಞೆ ಮತ್ತು ಕರ್ತ್ಯವ್ಯ ಪ್ರಜ್ಞೆಗಳ ಸಮಷ್ಟಿಯಾಗಿ ನಿಂತಿರುವ ಯಜ್ಞೋಪವೀತವು ಯಜ್ಞನಾಮಕ ಪರಮಾತ್ಮನು ನಮಗೆ ವಹಿಸಿರುವ ಕರ್ತವ್ಯವನ್ನು ಸೂಚಿಸುತ್ತದೆ.
ನಮ್ಮ ದೇಹದ ಮೇಲಿರುವ ಮೂರು ಎಳೆಗಳ ಯಜ್ಞೋಪವೀತವು ದೇವ ಋಣ, ಋಷಿಋಣ ಮತ್ತು ಪಿತೃಋಣವನ್ನು ಸೂಚಿಸುತ್ತದೆ. ಹಾಗೆಯೇ ಮೂರು ಎಳೆಗಳು ಋಗ್ವೇದ, ಯಜುರ್ವೇದ ಮತ್ತು ಸಾಮವೇದಗಳೆಂಬ ಮೂರು ವೇದಗಳ ಆವಾಹನೆಯಾಗಿದ್ದು ಬ್ರಹ್ಮಗಂಟು ಅಥರ್ವವೇದವನ್ನು ಪ್ರತಿನಿಧಿಸುತ್ತದೆ. ಸೊಂಟದ ತನಕ ಇಳಿ ಬಿದ್ದಿರುವ ಯಜ್ಞೋಪವೀತವು ಆಧ್ಯಾತ್ಮ ಸಾಧನೆಗಾಗಿ ನಾವು ಟೊಂಕ ಕಟ್ಟಿ ನಿಂತಿರಬೇಕೆಂದು ತಿಳಿ ಹೇಳುತ್ತದೆ.
ಅದರ ಮೂರು ಎಳೆಗಳು ತ್ರಿಕಾಲ ಸಂಧ್ಯಾವಂದನೆಯ ಬಗ್ಗೆ ಜಾಗೃತನಾಗಿರಬೇಕೆಂದು ತಿವಿದು ಹೇಳುವ ಹಾಗೆ ಕುತ್ತಿಗೆಯ ಮೇಲೆ ಬಂದಿದೆ. ನಮ್ಮ ಕೆಲಸವಾಗ ಬೇಕಾದಾಗ ಕುತ್ತಿಗೆಯ ಪಟ್ಟು ಹಿಡಿದು ಕೆಲಸ ಮಾಡಿಸಿಕೊಳ್ಳುವಂತೆ ಏನೇ ಕೆಲಸವಿದ್ದರೂ ಬಿಡದೇ ತ್ರಿಕಾಲಸಂಧ್ಯಾವಂದನೆಯನ್ನು ಮಾಡಿಮುಗಿಸು ಎನ್ನುತ್ತಿದೆ
ಈ ಯಜ್ಞೋಪವೀತವು. ಎಡಗಡೆಯಿಂದ ಬಲಗಡೆಗೆ ಬಂದಿರುವುದರಿಂದ ವಾಮಮಾರ್ಗವನ್ನು ಬಿಟ್ಟು ಸಂಪೂರ್ಣ ಬಲನೆನಿಸಿದ ಭಗವಂತನಿಗೆ ಪ್ರಿಯವಾದ ಮಾರ್ಗದಲ್ಲಿ ಚಲಿಸು ಎಂದು ಋಜುಮಾರ್ಗವನ್ನು ತೋರಿಸುತ್ತಿರುವುದರ ಸಂಕೇತ.
ಹೀಗೆ ಅತ್ಯಂತ ಮಹತ್ವ ಮತ್ತು ಪರಮ ಪಾವಿತ್ರ್ಯವನ್ನು ಹೊಂದಿರುವ ಯಜ್ಞ ನಾಮಕ ಪರಮಾತ್ಮನ ಸೇವೆಗಾಗಿಯೇ ಪಣ ತೊಟ್ಟು ನಿಂತಿರುವ ಯಜ್ಞೋಪವೀತಕ್ಕೆ ಬಲ ಬೇಡವೇ? ಅದಕ್ಕಾಗಿ ಅಂದು ಕಶ್ಯಪಾದಿ ಸಪ್ತಋಷಿಗಳನ್ನು ಪೂಜಿಸಿ, ಹೋಮವನ್ನು ಮಾಡಿ ಪಂಚಗವ್ಯ ಹಾಗೂ ಸಕ್ತು (ಹಿಟ್ಟು) ಪ್ರಾಶನದಿಂದ ಸತ್ವಭರಿತರಾಗಿ ವೇದವ್ಯಾಸರ ಪೂಜೆಯನ್ನು ಮಾಡಿ ಯಜ್ಞೋಪವೀತ ದಾನ ಮತ್ತು ಧಾರಣೆಯನ್ನು ಮಾಡಬೇಕು. ಹೀಗೆ ಋಷಿಗಳ ಸನ್ನಿಧಾನದಿಂದ ಬಲಿಷ್ಟವಾದ ಯಜ್ಞೋಪವೀತವು ನಮ್ಮ ಸಂಕಲ್ಪ ಶಕ್ತಿಯನ್ನು, ಕ್ರಿಯಾ ಶಕ್ತಿಯನ್ನು ಬಲಿಷ್ಠಗೊಳಿಸುವದರಲ್ಲಿ ಸಂದೇಹವಿಲ್ಲ. ಈ ಉಪಾಕರ್ಮವನ್ನು ಮುಗಿಸಿ ಬಂದ ಯಜಮಾನ ಮತ್ತು ಮಕ್ಕಳಿಗೆ ಆರತಿ ಮಾಡಿ ಮನೆಯೊಳಗೆ ಕರೆತರುವ ಪದ್ಧತಿ ಇದೆ.
****
ಉಪಾಕರ್ಮ ಮತ್ತು ಉತ್ಸರ್ಜನ ಎಂಬ ವೇದವ್ರತಗಳು:
ಲೇಖನ- ಶ್ರೀ ನಾಗರಾಜಶಾಸ್ತ್ರಿ
ವೇದವ್ರತಗಳಲ್ಲಿ ಎರಡು ವಿಧ. ಉಪಾಕರ್ಮ ಮತ್ತು ಉತ್ಸರ್ಜನ ವಿಧಿಗಳು.ಉಪಾಕರ್ಮದ ಬಗ್ಗೆ ಹಲವಾರು ರೀತಿಯ ಸಂಪ್ರದಾಯಗಳು ಇವೆ. ಆದರೇ ಈಗಿನ ಕಾಲಕ್ಕೆ ಅದು ಕೇವಲ ಜನಿವಾರ ಹಾಕಿಕೊಳ್ಳುವ ಕಾರ್ಯಕ್ರಮವೆಂದೇ ಪ್ರತೀತಿಯಾಗಿರುವದು ವಿಷಾದನೀಯ. ಇದು ಕೇವಲ ಒಂದು ಸಾಂಕೇತಿಕವಾದ ಸಂಪ್ರದಾಯವಾಗಿರುವದು ಶೋಚನೀಯ.ಈಗಿನ ಕಾಲಕ್ಕೆ ಇದು ಕೇವಲ “ಅಹಂ ಬ್ರಹ್ಮಾಸ್ಮಿ” ” ಹೆಮ್ಮೆಯಿಂದ ಹೇಳು ಬ್ರಾಹ್ಮಣನೆಂದು” ಎಂಬ ಸಂಪ್ರದಾಯಕ್ಕೆ ಸೇರಿರುವಂತೆ ಕೇವಲ ಔಪಚಾರಿಕ ವಿಷಯಮೌಢ್ಯತೆಯಾಗಿರುವದು ದುರ್ದೈವ ಹಾಗೂ ಖಂಡನೀಯ. ಆದರೇ ಈ ಉಪಾಕರ್ಮ ಮತ್ತು ಉತ್ಸರ್ಜನ ಎಂಬ ಎರಡು ವಿಧಿಗಳಿಗೂ ಮತ್ತು ಜನಿವಾರ ಹಾಕಿಕೊಳ್ಳುವ ಕ್ರಿಯೆಗೂ ಯಾವದ್ವಿಧವಾದ ಸಂಬಂಧವೂ ಇರುವದಿಲ್ಲ.ಇದರ ಬಗ್ಗೆ ಪ್ರಶ್ನೋತ್ತರ ಮಾಲಿಕೆಯನ್ನು ಸಹೃದಯರಿಗೆ ಅರ್ಪಿಸಬೇಕೆಂದು ಈ ಕಿರು ಹೊತ್ತಿಗೆಯನ್ನು ಪರಿಚಯಿಸಿಕೊಡುತ್ತಿದ್ದೇನೆ.ಇದರಿಂದ ವೇದಾಧ್ಯಯನದ ಪುನರುತ್ಥಾನವಾದರೇ ಸಂಪ್ರದಾಯದ ಪುನರುತ್ಥಾನವಾದಂತೆಯೇ ಎನ್ನುವದರಲ್ಲಿ ಸಂಶಯವಿಲ್ಲ.
೧.ಪ್ರ: ಉಪಾಕರ್ಮ ಎಂದರೇನು ?
ಉ: “ಉಪಾಕರ್ಮ” ಅಥವಾ ಉಪಕ್ರಮ ಎಂದರೆ ಪ್ರಾರಂಭ.
೨.ಪ್ರ: – ಯವುದರ ಪ್ರಾರಂಭ ?
ಉ: ವೇದಾಧ್ಯಯನದ ಪ್ರಾರಂಭ.
೩. ಪ್ರ:- ಉತ್ಸರ್ಜನ ಎಂದರೇನು ? ಅದರ ಕ್ರಿಯಾರ್ಥವೇನು ?
ಉ: ಅಧ್ಯಯನವನ್ನು ಮನನ ಮಾಡಿಕೊಳ್ಳುವದಕ್ಕಾಗಿ ಮಾಡುವ ತಾತ್ಕಾಲಿಕ ವಿರಮನ.
೪.ಪ್ರ:- ವೇದಗಳ ಅಧ್ಯಯನದ ಆರಂಭ ಮತ್ತು ವಿರಮನ ಯಾವಾಗ ಹೇಗೆ ಮಾಡಬೇಕು.?
ಉ: ಆಪಸ್ತಂಬರು ಇದಕ್ಕೆ ಸೂತ್ರವನ್ನು ಹೇಳಿದ್ದಾರೆ.
“ಶ್ರಾವಣ್ಯಾಂ ಪೌರ್ಣಮಾಸ್ಯಾಂ ಅಧ್ಯಾಯೋ ಪ್ರಾಕೃತ್ಯ ತೈಷ್ಯಾಂ ಪೌರ್ಣಮಾಸ್ಯಾಂ ರೋಹಿಣ್ಯಾಂ ವಾ ವಿರಮೇತ್ ”
ಮೇಲಿನ ಶ್ಲೋಕದ ಅರ್ಥವೇನೆಂದರೆ :- ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ವೇದಾಧ್ಯಯನವನ್ನು ಪ್ರಾರಂಭಿಸಿ ಪುಷ್ಯ ಮಾಸದ ಹುಣ್ಣಿಮೆಯ ದಿನದಲ್ಲಾಗಲೀ ಅಥವಾ ಪುಷ್ಯಮಾಸದ ರೋಹಿಣೀ ನಕ್ಷತ್ರಯುಕ್ತ ದಿನದಲ್ಲಾಗಲೀ ವಿರಮಿಸ ಬೇಕು.ಅರ್ಥಾತ್ ಅಧ್ಯಯನದ ಕಾಲ ಕೇವಲ ಐದು ತಿಂಗಳು.
೫.ಪ್ರ:- ಕೇವಲ ಐದು ತಿಂಗಳಷ್ಟೇ ಅಧ್ಯಯನವನ್ನು ಏಕೆ ಮಾಡಬೇಕು ?
ಉ: ಇದಕ್ಕೆ ನಿರ್ದಿಷ್ಟವಾದ ಕಾರಣವೇನೆಂಬುದು ತಿಳಿದಿಲ್ಲ.ಆದರೂ ಕಲಿತದ್ದದ್ದನ್ನು ಮನನ ಮಾಡಬೇಕೆಂದು ಮತ್ತು ಮಿಕ್ಕ ಕಾಲದಲ್ಲಿ ವೇದಾಂಗಗಳನ್ನು ಅಧ್ಯಯನ ಮಾಡುವದಕ್ಕಾಗಿ ಅನುಕೂಲವಾಗಲಿ ಎಂದು ಸೂತ್ರಕಾರರು ಹೀಗೆ ಹೇಳಿರಬಹುದು.ಹಾಗೂ ಹಿಂದಿನ ಗುರುಕುಲ ಪದ್ಧತಿಯನ್ನು ಪರಿಶೀಲಿಸಿದಾಗ ನಮಗೆ ತಿಳಿಯುವ ವಿಷಯವೇನೆಂದರೇ ಮಾಘಮಾಸದಿಂದಾಚೆಗೆ ಹಬ್ಬಹರಿದಿನಗಳೂ, ಯಜ್ಞಯಾಗಾದಿಗಳೂ ನಡೆಯುವ ಕಾಲವಾದ್ದರಿಂದ ಅಧ್ಯಾಪಕರು ವ್ಯಾವಹಾರಿಕ , ದ್ರವ್ಯ ಸಂಗ್ರಹಣೆ ಹಾಗೂ ವಿತರಣೆಗೆ ಕಾಲಾವಕಾಶವು ಬೇಕಾದ್ದರಿಂದ ಈ ರೀತಿಯಾಗಿ ಕಾಲಾನುಕೂಲವನ್ನು ಮಾಡಿಕೊಂಡಿರಬಹುದಾಗಿದೆ.
೬. ವೇದವ್ರತಗಳಾದ ಈ ಉಪಾಕರ್ಮ ಮತ್ತು ಉತ್ಸರ್ಜನಗಳಿಗೆ ಅಧಿಕಾರಿಗಳಾರು ?
ಉ:- ವೇದಾಧ್ಯಯನವನ್ನು ಮಾಡುವವರೇ ಇದಕ್ಕೆ ಅಧಿಕಾರಿಗಳು. ಹಾಗೂ ವೇದಾಧ್ಯಯನ ಮಾಡಿರುವವರಿಗೇ ಬ್ರಹ್ಮಯಜ್ಞವನ್ನೂ ಹೇಳಿರುವದು. ಯಾವುದಾದರೊಂದು ಶಾಖೆಯನ್ನು ವೇದಾಂಗಗಳೊಡನೆ ಪರಿಪೂರ್ಣ ಅಧ್ಯಯನ ಮಾಡಿ ಪ್ರತಿನಿತ್ಯ ಸಂಧ್ಯೋಪಾಸನೆ,ಬ್ರಹ್ಮಯಜ್ಞ,ಅಗ್ನಿಕಾರ್ಯ ,ವೇದ ಪಠನ ಹಾಗೂ ಅನುಷ್ಠಾನ ಮಾಡುವವರಿಗೆ ಈ ವ್ರತಗಳನ್ನು ಮಾಡಲೇಬೇಕೆಂಬ ನಿಯಮವಿಲ್ಲ.
೭.ಪ್ರ:- ಉಪಾಕರ್ಮ ಮತ್ತು ಉತ್ಸರ್ಜನಗಳ ಔಚಿತ್ಯವೇನು ?
ಉ:- ವೇದಸಮೂಹವನ್ನು ಪ್ರಪಂಚದ ಒಳಿತಿಗಾಗಿ ಕಂಡುಕೊಟ್ಟ ,ದ್ರಷ್ಟಾರರಾದ ಋಷಿಗಳಿಗೂ ಅದನ್ನು ಹೇಳಿಕೊಟ್ಟ ಅಧ್ಯಾಪಕರಿಗೂ ಕೃತಜ್ಞತಾಭಾವವನ್ನು ವ್ಯಕ್ತಪಡಿಸುವದೇ ಇದರ ಮುಖ್ಯ ಉದ್ದೇಶ. ಅದಕ್ಕನುಗುಣವಾಗಿ ಆಯಾ ದೇವತೆಗಳಿಗೂ , ಆಯಾ ಮಂತ್ರಗಳ ದ್ರಷ್ಟಾರರಾದ ಋಷಿಗಳಿಗೂ ಹೋಮಗಳ ಮೂಲಕ ಹವಿಸ್ಸುಗಳನ್ನು ,ತರ್ಪಣಗಳನ್ನೂ ಕ್ರಮವಾಗಿ ಕೊಡಬೇಕು.
೮.ಪ್ರ:-ಉಪಾಕರ್ಮ ಮತ್ತು ಉತ್ಸರ್ಜನಗಳ ಸಂಪ್ರದಾಯವೇನು ?
ಉ:- ಉಪಾಕರ್ಮವು ಎರಡು ವಿಧ.ಕಾಂಡೋಪಾಕರ್ಮ ಮತ್ತು ಅಧ್ಯಾಯೋಪಾಕರ್ಮ.
ಕಾಂಡೋಪಾಕರ್ಮ: ಗುರುಕುಲದಲ್ಲಿ ಯಜುರ್ವೇದದ ಅಧ್ಯಯನವನ್ನು ಪ್ರಾರಂಬಿಸಿದಾಗ ಇದನ್ನು ಮಾಡಬೇಕು.ಉಪಾಕರ್ಮವನ್ನು ಪ್ರತಿಯೊಂದು ಕಾಂಡದ ಆದಿಯಲ್ಲೂ , ಉತ್ಸರ್ಜನವನ್ನು ಅಂತ್ಯದಲ್ಲೂ ಮಾಡಬೇಕು.ಇದನ್ನು ಯಜುರ್ವೇದದ ಏಳು ಕಾಂಡ ಸಂಹಿತೆ, ಮೂರು ಆಷ್ಟಕ ಬ್ರಾಹ್ಮಣ ,ಆರು ಆರಣ್ಯಕಗಳು,ಏಕಾಗ್ನಿಕಾಂಡ ಮತ್ತು ನಾಲ್ಕು ಉಪನಿಷತ್ತುಗಳು (ಇಷ್ಟೂ ಸೇರಿ ಮಾಡುವದಕ್ಕೆ ಸಾರಸ್ವತ ಪಾಠವೆನ್ನುತ್ತಾರೆ) ಇವುಗಳ ಅಧ್ಯಯನ ಸಂಪೂರ್ಣವಾಗುವವರೆಗೂ ಮಾಡುವದಕ್ಕೆ ಕಾಂಡೋಪಾಕರ್ಮ ಎಂಬುದಾಗಿ ಹೇಳುತ್ತಾರೆ.
ಅಧ್ಯಾಯೋಪಾಕರ್ಮ: ಇದು ಸಾಮಾನ್ಯವಾಗಿ ವೇದದ ಎಲ್ಲಾ ಶಾಖೆಗಳಿಗೂ ಅನ್ವಯಿಸುತ್ತದೆ.ಪ್ರತಿವರ್ಷವೂ ಶ್ರಾವಣ ಹುಣ್ಣಿಮೆಯಲ್ಲಿ ಉಪಕ್ರಮಿಸಿ ಪುಷ್ಯ ಹುಣ್ಣಿಮೆಯಲ್ಲಿ ಉತ್ಸರ್ಜಿಸುವ ಕ್ರಮ.
೯.ಪ್ರ:- ಈ ಕರ್ಮಗಳನ್ನು ಮಾಡಲಾಗದಿದ್ದರೇ ಪ್ರಾಯಶ್ಚಿತ್ತವೇನು ?
ಉ: ಇವುಗಳು ನಿತ್ಯನೈಮಿತ್ತಿಕಕರ್ಮಗಳಾದ್ದರಿಂದ ಇವುಗಳನ್ನು ಮಾಡಲೇ ಬೇಕು.ಮಾಡದೇ ಇರುವದರಿಂದ ಪ್ರತ್ಯವಾಯ ದೋಷಗಳು ಅಂಟಿಕೊಳ್ಳುತ್ತವೆ. ಆದ್ದರಿಂದ ಇದಕ್ಕೆ ಪ್ರಾಯಶ್ಚಿತ್ತವೆಂಬ ಮಾರ್ಗವಿಲ್ಲ.ಆದರೂ ಗೃಹ್ಯಸೂತ್ರಗಳಲ್ಲಿ ಇದಕೆ ಪ್ರಾಯಶ್ಚಿತ್ತಕರ್ಮಗಳನ್ನೂ ಹೇಳಿರುತ್ತಾರೆ.
೧೦.ಪ್ರ:- ಜನಿವಾರ ಹಾಕಿಕೊಳ್ಳುವುದಕ್ಕೂ ಉಪಾಕರ್ಮೋತ್ಸರ್ಜನಕ್ಕೂ ಏನೂ ಸಂಬಂಧವಿಲ್ಲ ಎಂದಿರಲ್ಲ.ಅದು ಹೇಗೆ ?
ಉ:- ನಾವು ಇಲ್ಲಿ ತಿಳಿದುಕೊಳ್ಳಬೇಕಾದ ವಿಷಯವೇನೆಂದರೇ ಜನಿವಾರ ಹಾಕಿಕೊಳ್ಳುವದು ಉಪಾಕರ್ಮೋತ್ಸರ್ಜನಗಳ ಒಂದು ಅಂಗವಲ್ಲ.ಅದು ನಾವು ಪವಿತ್ರರಾಗಿ,ಶುಚಿರ್ಭೂತರಾಗಿದ್ದೇವೆ ಎಂಬ ಭಾವನೆಯನ್ನು ದೃಢಪಡಿಸುವ ಕೇವಲ ಸಾಂಕೇತಿಕವಾದ ಕ್ರಿಯೆ.ಜನಿವಾರ ಹಾಕಿಕೊಳ್ಳುವದೇ ಉಪಾಕರ್ಮೋತ್ಸರ್ಜನಗಳಲ್ಲ.ಹೀಗೆ ಮಾಡಿ ಕೃತಾರ್ಥರಾದೆವು ಎಂಬುವದು ಇತ್ತೀಚಿನ ಒಂದು ಸಾಂಪ್ರದಾಯಿಕವಾದ ಅಪಾಯಕಾರೀ ಭ್ರಾಂತಿ ಎನ್ನುವದರಲ್ಲಿ ತಪ್ಪೇನಿಲ್ಲ.
೧೧.ಪ್ರ:- ಪ್ರಥಮೋಪಾಕರ್ಮ ಎಂದರೇನು?
ಉ:- ಇದರಲ್ಲಿ ವಿಶೇಷವಾದ ಯಾವ ಅರ್ಥವೂ ಇಲ್ಲ. ಉಪನಯನವಾದಮೇಲೆ ಹೊಸದಾಗಿ ವೇದಾಧ್ಯಯನ ಪ್ರಾರಂಭಮಾಡುವ ಒಂದು ಕ್ರಿಯೆಯಲ್ಲಿ ಅದು ನಿರ್ವಿಘ್ನವಾಗಿ ನೆರವೇರಲಿ ಮತ್ತು ಮುಂದೆವರೆಯಲಿ ಎಂಬುವಲ್ಲಿ ಮಹತ್ವವುಳ್ಳದ್ದಾಗಿದೆ.
೧೨.ಪ್ರ:- ಉಪಾಕರ್ಮೋತ್ಸರ್ಜನಗಳ ಪ್ರಯೋಜನವೇನು?
ಉ:- ಇದರ ಮುಖ್ಯ ಮಹತ್ವ ಎಂದರೆ ನಮ್ಮ ಆರ್ಷೇಯಪದ್ಧತಿಯು ನಿರಂತರವಾಗಿ ಮುಂದುವರೆಯಲಿ ಎಂಬುವದು. ನಾವು ಕಲಿತದ್ದನ್ನು ಮೆಲುಕು ಹಾಕುತ್ತಾ ಅರ್ಥಾತ್ ಮನನ ಮಾಡಿಕೊಳ್ಳುವದು ಮತ್ತೂ ಅದರಿಂದುಂಟಾದ ಜ್ಞಾನವನ್ನು ಲೋಕೋಪಯೋಗಕ್ಕೆ ಮಾಡಿಕೊಳ್ಳುವದು ಇನ್ನೊಂದು. ಮೇಲ್ನೋಟಕ್ಕೆ ಹೀಗೆ ಕಂಡರೂ ಇದರಲ್ಲಿ ಅತಿಮುಖ್ಯವಾದ ಮಹತ್ತರವಾದ ಉದ್ದೇಶವೂ ಇದೆ.ಅದು ವೇದಗಳ ಯಾತಯಾಮತಾ ನಿವಾರಣಾ ಪ್ರಯೋಜನ ಎಂಬುವದು.
೧೩.ಪ್ರ:- ವೇದಗಳ ಯಾತಯಾಮತಾ ನಿವಾರಣಾ ಪ್ರಯೋಜನ ಎಂದರೆ ಏನು ?
ಉ:- ಯಾತಯಾಮತೆ ಎಂದರೆ ಹಳಸುವದು,ನಿಸ್ಸಾರವಾಗುವದು ಎಂದರ್ಥ. ಇದಕ್ಕೂ ವೇದಕ್ಕೂ ಏನುಸಂಬಂಧವೆಂದರೆ ವೇದಗಳು ಹಿಂದಿನ ಕಾಲದಿಂದಲೂ ಗುರುಮುಖೇನ ಶಿಷ್ಯನಿಗೆ ಪುಸ್ತಕಗಳ ನೆರವಿಲ್ಲದೇ ನಡೆದು ಬಂದ ಆರ್ಷೇಯಪದ್ಧತಿಯು.ಇದು ನಿರಂತರವಾಗಿ ನಡೆಯಬೇಕೆಂಬುದೇ ಇದರ ಮುಖ್ಯ ಉದ್ದೇಶ. ಅದು ಹೇಗೆಂದರೇ , ಯಾವ ವೇದಗಳೇ ಆಗಲೀ ಶಾಸ್ತ್ರಗಳೇ ಆಗಲಿ ಅದಕ್ಕೆ ಅಧಿಕಾರಿ,ವಿಷಯ,ಸಂಬಂಧ ಮತ್ತು ಪ್ರಯೋಜನಗಳೆಂಬ ಅನುಬಂಧ ಚತುಷ್ಟಯಗಳು ಇದ್ದೇ ಇರುತ್ತದೆ.ವೇದಮಂತ್ರಗಳಿಗೆ ದ್ರಷ್ಟೃ ಋಷಿ, ದೇವತಾ, ಛಂದಸ್ಸುಗಳಿರುತ್ತದೆ.ಇವುಗಳನ್ನು ಸ್ಮರಿಸಿಕೊಂಡೇ ಮಂತ್ರಗಳನ್ನು ಹೇಳಿಕೊಳ್ಳಬೇಕೆಂಬ ನಿಯಮವೂ ಇದೆ. ಹೀಗೆ ಹೇಳಿಕೊಳ್ಳದಿದ್ದರೇ ಮಂತ್ರಾರ್ಥಗಳೂ ಮತ್ತು ಅವುಗಳಿಂದುಂಟಾಗುವ ಜ್ಞಾನವೂ ಪೂರ್ತಿಯಾಗುವದಿಲ್ಲ ಎಂಬ ಭಾವನೆ.ಯಜುರ್ವೇದದ ಮಂತ್ರಗಳಿಗೆ ಈ ಸೌಲಭ್ಯವು ಮರೆಯಾಗಿರುವದು ಈ ಯಾತಯಾಮತಾ ದೋಷದಿಂದಲೇ ಎನ್ನುವದರಲ್ಲಿ ಸಂಶಯವಿಲ್ಲ. ಆದರೂ ಕೆಲವು ಯಜುರ್ವೇದ ಮಂತ್ರಗಳಿಗೆ ಭಟ್ಟ ಭಾಸ್ಕರರೂ ,ವಿಷ್ಣುಸೂರಿಗಳೂ ದ್ರಷ್ಟೃ ಋಷಿ, ದೇವತಾ, ಛಂದಸ್ಸುಗಳನ್ನು ಅವರ ಭಾಷ್ಯದಲ್ಲಿ ಅಲ್ಲಲ್ಲಿ ಸೂಚಿಸಿರುತ್ತಾರೆ. ಉಪಾಕರ್ಮೋತ್ಸರ್ಜನಗಳಲ್ಲಿ ನಾವು ಈ ವಿಧಾನವನ್ನು ಕಂಡುಕೊಳ್ಳಬಾಹುದಾಗಿದೆ. ಅದರಿಂದ ಇವುಗಳು ಮನುಷ್ಯನ ಸ್ಮೃತಿಯಲ್ಲಿ ಅಳಿಯದೇ ನಿಲ್ಲವದು.ಇದೇ ಈ ಉಪಾಕರ್ಮೋತ್ಸರ್ಜನಗಳ ಮುಖ್ಯ ಧ್ಯೇಯೋದ್ದೇಶ.
೧೪.ಪ್ರ:- ಬ್ರಹ್ಮಯಜ್ಞಕ್ಕೂ ಉಪಾಕರ್ಮೋತ್ಸರ್ಜನ ಕರ್ಮಕ್ಕೂ ಏನು ವ್ಯತ್ಯಾಸ?
ಉ:- ಬ್ರಹ್ಮಯಜ್ಞವು ನಿತ್ಯ ಕರ್ಮಗಳಲ್ಲಿ ಸೇರಿರುತ್ತದೆ. ಬ್ರಹ್ಮ ಎಂದರೆ ವೇದಗಳು ಯಜ್ಞ ಎಂದರೆ ಅದ್ಯಯನ ಮಾಡುವದು.ಗುರುಮುಖೇನ ಕಲಿತದ್ದನ್ನು ನಿತ್ಯ ಅಧ್ಯಯಿಸಿ ಮನದಟ್ಟು ಮಾಡಿಕೊಳ್ಳುವದೇ ಇದರ ಉದ್ದೇಶವು.
ಉಪಾಕರ್ಮೋತ್ಸರ್ಜನ ಕರ್ಮಗಳು ನೈಮಿತ್ತಿಕ ಕರ್ಮಗಳು . ಇದಕ್ಕೆ ಮೇಲೆ ಹೇಳಿದ ಕೃತಜ್ಞತಾ ಸೂಚಿಸುವ ಮತ್ತು ಯಾತಯಾಮತಾ ದೋಷನಿವಾರಣೆ ಎಂಬ ಉದ್ದೇಶಗಳೇ ಮೂಲ.
ಹರಿಃ ಓಂ ತತ್ ಸತ್ ||
ಯಜ್ಞೋಪವೀತ(ಜನಿವಾರ)
ತಲೆತಲಾಂತರದಿಂದ ಬ್ರಾಹ್ಮಣ ಗಳಿಸುತ್ತಿರುವ ಯಶಸ್ಸಿನ ಗುಟ್ಟು ಬಯಲು. ಅದುವೇ ಯಜ್ಞೋಪವೀತ ಧಾರಣೆ:
Rigveda Upakarma
ಋಗ್ವೇದ ಉಪಾಕರ್ಮ ಹಿನ್ನಲೆ ಮತ್ತು ವಿಧಿ ವಿಧಾನಗಳು
ಉಪಾಕರ್ಮ ಅಂದರೆ ” ಆರಂಭ” (ಸಂಸ್ಕೃತ :उपाकर्म), ಅಂದರೆ ಅಂದಿನಿಂದ ಶುರು ಎಂದು ಅರ್ಥ. ಕನ್ನಡ ಜನಾಂಗದವರು ಇದನ್ನು ಜನಿವಾರದ ಹುಣ್ಣಿಮೆ (ನೂಲು ಹುಣ್ಣಿಮೆ) ಅಥವಾ ಜನಿವಾರದ ಹಬ್ಬವೆಂದು ಆಚರಿಸುವುರು .ಈ ಹಬ್ಬದ ಉಗಮ ವೇದ ಕಾಲದಿಂದಲೂ ನಮ್ಮ ದೇವಾನು ದೇವತೆಗಳು ,ಋಷಿ , ಮುನಿಗಳಿಂದ ಆಚರಿಸಲ್ಪಟ್ಟಿದೆ .
ಉಪಾಕರ್ಮ ಹಬ್ಬವನ್ನು ಶ್ರಾವಣ ಮಾಸದ ಶುಕ್ಲಪಕ್ಷದ ಹುಣ್ಣಿಮೆಯೆಂದು ( ನೂಲು ಹುಣ್ಣಿಮೆ) ,ಧನಿಷ್ಠ ನಕ್ಷತ್ರದಂದು ಹೋಮವನ್ನು ಮಾಡಿ ಮತ್ತು ಹೊಸ ಜನಿವಾರದ ಧಾರಣೆ ಮಾಡುತ್ತಾರೆ .ಅಂದಿನ ದಿನ ನಮ್ಮ ಉತ್ತರ ಭಾರತದವರು ರಕ್ಷಾ ಬಂಧನ ಹಬ್ಬವನ್ನು ಆಚರಿಸುತ್ತರೆ. ಅಣ್ಣ-ತಂಗಿ ,ಅಕ್ಕ-ತಮ್ಮ ,ಅಣ್ಣ-ಅತ್ತಿಗೆಯರ ರಕ್ಷೆಗಾಗಿ ರಕ್ಷಾಬಂಧನ ( ಬಣ್ಣ ಬಣ್ಣದ ದಾರಗಳಲ್ಲಿ ಪುಷ್ಪಗಳು,ಮಣಿಗಳು ,ಎಲೆಗಳು ಹೀಗೆ ಅತ್ಯಾಕರ್ಶವಾಗಿ ಕಾಣಿಸಲು ಬೊಂಬೆಗಳು,ನವರತ್ನಗಳನ್ನು ಅಳವಡಿಸುತ್ತಾರೆ )ಉಡುಗೊರೆಯನ್ನು ದೊಡ್ಡವರು ಚಿಕ್ಕವರಿಗೆ ಕೊಡುತ್ತಾ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ .
ದಂತಕಥೆ :
ಒಮ್ಮೆ ಬ್ರಹ್ಮದೇವನಿಗೆ ತನ್ನ ಜ್ಞಾನ ಮತ್ತು ತಾನೇ ಸೃಷ್ಟಿಕರ್ತ ನಾಗಿರುವ ಬಗ್ಗೆ ಜಂಭವಾಗಿ ತಾನೇ ಶ್ರೇಷ್ಠನೆಂದು ತ್ರಿಮೂರ್ತಿಗಳಲ್ಲಿ ಎಂದು ವಾದವನ್ನು ಮಂಡಿಸಿದ ಆಗ ಮಹಾವಿಷ್ಣು ಬ್ರಹ್ಮದೇವನು ಆಸೀನರಾಗಿದ್ದ ಕಮಲದ ೨ ನೀರಿನ ಹನಿಯಿಂದ ಮಧು ಮತ್ತು ಕೈಠಭ ಎಂಬ ರಾಕ್ಷಸರನ್ನು ಸೃಷ್ಟಿಸಿ ಅವರಿಗೆ ಬ್ರಹ್ಮನು ರಚಿಸಿದ ೪ ವೇದಗಳನ್ನು ಅಪಹರಿಸಬೇಕಂದು ಆಜ್ಞಾಪಿಸುತ್ತಾನೆ . ಮಹಾವಿಷ್ಣುವಿನ ಆಣತಿಯಂತೆ ಮಧು ಮತ್ತು ಕೈಠಭರು ಬ್ರಹ್ಮನಿಂದ ವೇದಗಳನ್ನು ಅಪಹರಿಸುತ್ತಾರೆ. ಆಗ ಬ್ರಹ್ಮದೇವನು ಮಹಾವಿಷ್ಣುವನ್ನು ಪ್ರಾರ್ಥಿಸಿ ತಾನು ಮಾಡಿದ ತಪ್ಪು ಅರಿವಾಯಿತು ನಿನ್ನ ಆಜ್ಞೆಯಿಲ್ಲದೆ ಎಲ್ಲೂ ಏನು ನಡೆಯುವುದಿಲ್ಲ ಎಂದು ಅರಿವಾಯಿತು ನನ್ನ ಮಹಾಪರಾಧವನ್ನು ಮನ್ನಿಸಿ ಆ ವೇದಗಳನ್ನು ಸಂರಕ್ಷಿಸಬೇಕಂದು ಕೋರುತ್ತಾನೆ .
ಆಗ ಮಹಾವಿಷ್ಣು ಹಯಗ್ರೀವನಾಗಿ ( ಕುದುರೆಯಾಗಿ) ಅವತಾರ ತಾಳಿ ಮಧು ಮತ್ತು ಕೈಠಭರಿಂದ ವೇದಗಳನ್ನು ಸಂರಕ್ಷಿಸಿದ ಎಂದು ಪುರಾಣದಲ್ಲಿ ಉಲ್ಲೇಖವಿದೆ . ಈ ದಿನವನ್ನು “ಹಯಗ್ರೀವ ಉತ್ಪತ್ತಿ ” ಎಂದು ಆಚರಿಸುತ್ತಾರೆ . ಎಲ್ಲಾ ವೇದಗಳನ್ನು ಸಂರಕ್ಷಿಸಿದ ದಿನವಾದ್ದರಿಂದ ಅಂದಿನ ದಿನದಿಂದ “ಉಪಾಕರ್ಮ” ಹಬ್ಬವನ್ನು ಆಚರಿಸುವರು .
***
ಸರ್ವಜನ ಸುಖಿನೋಭವತು
ಕೃಷ್ಣಾರ್ಪಣಮಸ್ತು ಧನ್ಯವಾದಗಳು
ಶ್ರೀಮತಿ ನಿರ್ಮಲರಾಜೇಶ್ @everyone