ಬೆಂಗಳೂರು ಜಲ ಮಂಡಳಿ ನಿವೃತ್ತ ಅಭಿಯಂತರ ಎಂ. ಎನ್. ತಿಪ್ಪೇಸ್ವಾಮಿಯವರು ಬೆಂಗಳೂರಿನ ನೀರಿನ ಸರಬರಾಜು ವಿಚಾರವಾಗಿ ಮಾತನಾಡಿದರು. 3000 ಅಡಿಗಳಷ್ಟು ಎತ್ತರವಿರುವ ಬೆಂಗಳೂರಿಗೆ ನೀರನ್ನು ಪೂರೈಸಲು ಅಂದಿನ ದಿವಾನರಾಗಿದ್ದ ಶೇಷಾದ್ರಿ ಅಯ್ಯರ್ ರವರು 1860ನೇ ಇಸವಿಯಲ್ಲಿ ಅರ್ಕಾವತಿ ನದಿಗೆ ಅಡ್ಡಲಾಗಿ ಹೆಸರಘಟ್ಟದಲ್ಲಿ ಜಲಾಶಯವನ್ನು ನಿರ್ಮಿಸಿದರು. ಆಗಿನ ಸಂದರ್ಭದಲ್ಲಿ ವಿದ್ಯುತ್ ಇರಲಿಲ್ಲ ಆದುದರಿಂದ ಟ್ಯಾಂಕುಗಳಲ್ಲಿ ಬೆಂಗಳೂರಿಗೆ ನೀರನ್ನು ಸರಬರಾಜ ಮಾಡುವ ವ್ಯವಸ್ಥೆಯನ್ನು ಮಾಡುತ್ತಿದ್ದರು.
1920 ನೇ ಇಸವಿಯಲ್ಲಿ ಸರ್. ಎಂ. ವಿಶ್ವೇಶ್ವರಯ್ಯನವರ ನೇತೃತ್ವದ ಸಮಿತಿಯು ಅರ್ಕಾವತಿ ನದಿಗೆ ಅಡ್ಡಲಾಗಿ ತಿಪ್ಪಗೊಂಡನಹಳ್ಳಿಯಲ್ಲಿ ಜಲಾಶಯವನ್ನು ನಿರ್ಮಿಸಬೇಕೆಂದು ತೀರ್ಮಾನಿಸಿದರು. ನಂತರ 1930 ನೇ ಇಸವಿಯಲ್ಲಿ ತಿಪ್ಪಗೊಂಡನ ಹಳ್ಳಿ ಜಲಾಶಯ ನಿರ್ಮಾಣವಾಯಿತು. ಅರ್ಕಾವತಿ ನದಿಯಿಂದ 150 ಎಂಎಲ್ಡಿ ಹಾಗೂ ಹೆಸರಘಟ್ಟ ಜಲಾಶಯದಿಂದ 50 ಎಂಎಲ್ಡಿ ನೀರುನ್ನು ಸಂಗ್ರಹಿಸುವ ಸಾಮರ್ಥ್ಯ ಈ ಜಲಾಶಯಕ್ಕೆ ಇತ್ತು.
1974ರಲ್ಲಿ ಕಾವೇರಿ ಮೊದಲನೇ ಹಂತದ ಯೋಜನೆ ಆರಂಭವಾಗಿ ಬೆಂಗಳೂರಿಗೆ ನೀರಿನ ಸರಬರಾಜು ಮಾಡುವ ವ್ಯವಸ್ಥೆ ಆಯಿತು. ಬಿಡಬ್ಲಿಎಸ್ಎಸ್ಪಿ ಸಂಸ್ಥೆಯಿಂದ ಪ್ರತಿ ವರ್ಷವೂ ತೆಪ್ಪೋತ್ಸವವನ್ನು ಸಹ ಮಾಡಲಾಗುತ್ತಿತ್ತು. 1990 ರಿಂದ ಜಲಾಶಯವು ಸಂಪೂರ್ಣ ಬತ್ತಿ ಹೋಗಿ ಕುಡಿಯಲು ನೀರಿಗೆ ಯೋಗ್ಯವಿಲ್ಲವೆಂದು ತೀರ್ಮಾನಿಸಿದ್ದಾರೆ.
ಆದರೆ ಟಿ.ಜಿ .ಹಳ್ಳಿ ಜಲಾಶಯದಿಂದ ಬೆಂಗಳೂರಿಗೆ ನೀರು ಸರಬರಾಜು ಮಾಡುವ ವ್ಯವಸ್ಥೆಯಲ್ಲಿ ಅತ್ಯಂತ ಕಡಿಮೆ ಖರ್ಚು ಬರುತ್ತದೆ. ಆದರೆ ಕಾವೇರಿಕೊಳ್ಳದಿಂದ ನೀರು ಹರಿಸುವ ಯೋಜನೆಗೆ ಅತ್ಯಂತ ದುಬಾರಿಯಾಗಿದೆ.
ಬೆಂಗಳೂರಿನ ನೀರು ಸರಬರಾಜು ಅವಶ್ಯಕತೆ 1950 ಎಂ.ಎಲ್. ಡಿ ಅಷ್ಟು ಇದೆ. ಆದರೆ ಇದೀಗ 110 ಹಳ್ಳಿಗಳಿಗೆ ಪೂರೈಸಲು ಸಿದ್ಧವಾಗಿರುವ ಕಾವೇರಿ 5 ನೆ ಹಂತದ ಯೋಜನೆಯಲ್ಲಿ ಕೇವಲ 750 ಎಂಎಲ್ಡಿ ಯಷ್ಟು ಮಾತ್ರ ಸರಬರಾಜು ಮಾಡುವ ಸಾಮರ್ಥ್ಯ ಇದೆ.
ತಿಪ್ಪಗೊಂಡನಹಳ್ಳಿ ಜಲಾಶಯವನ್ನು ಪುನರುಜ್ಜೀವಗೊಳಿಸಲು ಈಗಾಗಲೇ 2000ನೇ ಇಸವಿಯಲ್ಲಿ ಇಸ್ರೋ ಸಂಸ್ಥೆಯಿಂದ, ATREE ,EMPR, BWSSB ಸಂಸ್ಥೆಗಳಿಂದ ಸವಿಸ್ತಾರವಾದಂತಹ ವರದಿಯನ್ನು ಈಗಾಗಲೇ ಕೊಟ್ಟಿದ್ದಾರೆ ಆದರೂ ಸಹ ಸರ್ಕಾರ ಈ ಜಲಾಶಯದ ಪುನರುಜ್ಜೀವನಕ್ಕೆ ಯಾವುದೇ ಯೋಜನೆಯನ್ನು ಇಲ್ಲಿಯವರೆಗೂ ಮಾಡದಿರುವುದು ನಿಜಕ್ಕೂ ಬೆಂಗಳೂರಿಗೆ ಮಾಡುತ್ತಿರುವ ಅನ್ಯಾಯವೇ ಸರಿ.
ಭವಿಷ್ಯದ ಎತ್ತಿನಹೊಳೆ ಯೋಜನೆಯಲ್ಲಿ ಟಿ.ಜಿ.ಹಳ್ಳಿ ಜಲಾಶಯಕ್ಕೆ 3 ಟಿಎಂಸಿ ಹೆಸರುಘಟ್ಟ ಜಲಾಶಯಕ್ಕೆ 1 ಟಿಎಂಸಿ ನೀರನ್ನು ತಲುಪಿಸುವ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಆದರೆ ದಶಕಗಳಿಂದ ಯೋಜನೆ ನೆನೆಗುದಿಯಲ್ಲೇ ಬಿದ್ದಿದೆ.
2050ನೇ ಇಸವಿಗೆ ಬೆಂಗಳೂರಿನ ಜನಸಂಖ್ಯೆ 20.96 ಮಿಲಿಯನ್ ನಷ್ಟು ಆಗುವ ಅಂದಾಜಿದೆ. ಇವುಗಳಿಗೆ ಪೂರಕವಾದಂತಹ ಯಾವುದೇ ಯೋಜನೆಗಳು ಇನ್ನು ಸರ್ಕಾರ ಕೈಗೊಳ್ಳದಿರುವುದು ಎದ್ದು ಕಾಣುತ್ತಿದೆ.
ಶ್ರೀಮತಿ ಕ್ಯಾತ್ಯಾಯಿನಿ, ನಾಗರಿಕ ಹೋರಾಟಗಾರರು ಮತ್ತು ಪತ್ರಕರ್ತರು
ಬೆಂಗಳೂರಿನ ಸ್ಥಳೀಯ ಆಡಳಿತವನ್ನು ನಡೆಸಲು ಬಿಬಿಎಂಪಿಯನ್ನು ರದ್ದುಗೊಳಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು ರಚಿಸುವ ಸಂದರ್ಭದಲ್ಲಿ ನಮ್ಮೆಲ್ಲರ ಒತ್ತಾಯದ ಫಲವಾಗಿ ನಾಮಕಾವಸ್ತೆಯಾಗಿ. ಮಹಾನಗರ ಯೋಜನಾ ಸಮಿತಿಯನ್ನು ಸೇರಿಸಿದರು. ಬೆಂಗಳೂರಿನ ಸರ್ವಾಂಗೀಣ ಅಭಿವೃದ್ಧಿಗೆ ಈ ಯೋಜನಾ ಸಮಿತಿಯು ಕಾಲಕಾಲಕ್ಕೆ ನೀಡುವ ವರದಿಯ ಅನುಸಾರ ಬೆಂಗಳೂರಿನ ಅಭಿವೃದ್ಧಿ ಆಗಬೇಕಿದೆ. ಈ ಸಮಿತಿಯ ಮೂಲ ಆಶಯವೇನೆಂದರೆ ಯಾವುದೇ ನಗರಗಳು ಅಭಿವೃದ್ಧಿಗೊಳ್ಳಬೇಕಾದರೆ ಆ ನಗರಕ್ಕೆ ನೀರಿನ ಲಭ್ಯತೆಯ ಸಾಮರ್ಥ್ಯದ ಮೇಲೆ ಅಭಿವೃದ್ಧಿ ಆಗಬೇಕಿದೆ. ಆದರೆ ಬೆಂಗಳೂರಿನ ನೀರಿನ ಲಭ್ಯತೆಯ ವಿರುದ್ಧ ದಿಕ್ಕಿನಲ್ಲಿ ಬೆಂಗಳೂರನ್ನು ಅಭಿವೃದ್ಧಿಪಡಿಸುತ್ತಿರುವುದು ರಾಜಕಾರಣಿಗಳ ದುರಾಸೆಯ ಪರಮಾವಧಿಯಾಗಿದೆ. ಬಿ ಎಂ ಆರ್ ಡಿ ಎ ಸಂಸ್ಥೆಯ ಸ್ಥಾಪನೆಯ ಉದ್ದೇಶವು ಸಹ ಇದೇ ಆಗಿರುತ್ತದೆ.
ಪದೇ ಪದೇ ಕಾವೇರಿ ನೀರಿನಿಂದ ಮಾತ್ರ ಬೆಂಗಳೂರಿಗೆ ನೀರು ಸರಬರಾಜು ಮಾಡುವ ವ್ಯವಸ್ಥೆಯು ಕಡಿಮೆಯಾಗಬೇಕಿದೆ. ಕಾವೇರಿ ನೀರಿನ ಮೇಲಿನ ಅವಲಂಬನೆ ಕಡಿಮೆಯಾಗಬೇಕಿದೆ. ಮುಖ್ಯಮಂತ್ರಿಗಳ ನೇತೃತ್ವದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ನಿಜಕ್ಕೂ ಸ್ಥಳೀಯ ಆಡಳಿತಕ್ಕೆ ನೀಡುವ ಪೆಟ್ಟಾಗಿದೆ. ಇದರ ವಿರುದ್ಧ ನಾವೆಲ್ಲರೂ ಹೋರಾಡಬೇಕಿದೆ.
ವಿಶ್ವನಾಥ್, ಮಳೆ ನೀರು ತಜ್ಞರು
ಸಭೆಯಲ್ಲಿ ಭಾಗವಹಿಸಿದ್ದ ಶ್ರೀಯುತರು ಮಾತನಾಡಿ ಬೆಂಗಳೂರು ನಗರಕ್ಕೆ ನೀರಿನ ನೀತಿ ಯನ್ನು ಕೂಡಲೇ ಜಾರಿಗೊಳಿಸ ಬೇಕು. ಬೆಂಗಳೂರಿನ ಕಾಲು ಭಾಗ ಮಾತ್ರ ಕಾವೇರಿ ನದಿಯನ್ನು ಆಶ್ರಯಿಸಬೇಕು. ಮುಕ್ಕಾಲು ಭಾಗ ಬೆಂಗಳೂರಿಗೆ ದಕ್ಷಿಣ ಪಿನಾಕಿನಿ ಹಾಗೂ ಸ್ಥಳೀಯ ಕೆರೆಗಳು, ಬಾವಿ ಗಳಿಂದ , ಅಂತರ್ಜಲ ವ್ಯವಸ್ಥೆಗಳಿಂದ ನೀರನ್ನು ಸ್ವಯಂ ನಾವೇ ಪೂರೈಕೆ ಮಾಡಿಕೊಳ್ಳಬಹುದಾಗಿದೆ.
ಬೆಂಗಳೂರು ನಗರದಲ್ಲಿ 3000 ದಶಲಕ್ಷ ಲೀಟರ್ ಮಳೆ ನೀರಿನಿಂದ ಸಂಗ್ರಹವಾದರೆ, ಕಾವೇರಿಯಿಂದ ಕೇವಲ 2050 ದಶಕ ನೀರು ಸಂಗ್ರಹಣೆಯಾಗುತ್ತದೆ. ಮನೆಗಳ ಛಾವಣಿಗಳ ಮೇಲೆ, ಬಾವಿಗಳು, ಇಂಗು ಬಾವಿಗಳು, 186 ಕೆರೆಗಳ ಪುನರುಜ್ಜೀವನ ದಂತಹ ಮಳೆ ನೀರಿನ ಸಂಗ್ರಹಣೆ ವ್ಯವಸ್ಥೆಯನ್ನು ವೃದ್ಧಿಗೊಳಿಸಿಕೊಂಡರೆ ನೀರು ಪೂರೈಕೆ ಸಮಸ್ಯೆ ಆಗುವುದಿಲ್ಲ. ಆಗಲೇ ಬೆಂಗಳೂರಿ ನಗರದಲ್ಲಿ 5 ಲಕ್ಷ ಬೋರ್ ವೆಲ್ ಗಳು ಇವೆ. ಇವುಗಳಿಂದ 8000 ದಶಲಕ್ಷ ಲೀಟರ್ ಗಳಷ್ಟು ನೀರು ಪೂರೈಕೆ ಆಗುತ್ತಿದೆ.
ಬಾವಿಗಳನ್ನು ಅಗೆಯುವುದರಲ್ಲಿ ಅತ್ಯಂತ ನಿಪುಣರಾಗಿರುವ ಬೋವಿ ಜನಾಂಗದವರಿಗೆ ಹೆಚ್ಚಿನ ನೆರವು ಹಾಗೂ ಪ್ರೋತ್ಸಾಹವನ್ನು ನೀಡುವ ಮೂಲಕ 10 ಲಕ್ಷ ಬಾವಿಗಳನ್ನು ನಗರದಲ್ಲಿ ತೊಡಬಹುದಾಗಿದೆ. ಬೆಂಗಳೂರು ನಗರದಲ್ಲಿ ಈಗಾಗಲೇ ಈ ಜನಾಂಗದವರಿಂದ 3 ಲಕ್ಷ ಬಾವಿಗಳ ನಿರ್ಮಾಣವಾಗಿದೆ. ನಿಜಕ್ಕೂ ಇವರುಗಳೇ ನಿಜವಾದ ಆಧುನಿಕ ಭಗೀರಥರು ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ನೀರಿನ ಸಂಬಂಧವನ್ನು ಪ್ರತಿಯೊಬ್ಬರು ಹೆಚ್ಚಿಸಿಕೊಳ್ಳಬೇಕಾಗಿದೆ.
ಸ್ಥಳೀಯ ಆಡಳಿತಗಳು ನೀರಿನ ಸಂಗ್ರಹಣ ವ್ಯವಸ್ಥೆಗೆ ಹೆಚ್ಚಿನ ಬಂಡವಾಳವನ್ನು ಹೂಡಬೇಕಿದೆ. ನದಿ ಸಂರಕ್ಷಣೆಯಲ್ಲಿ ಕೇವಲ ನಗರವಾಸಿಗಳ ಕುಡಿಯುವ ನೀರನ್ನು ನೆಪವಾಗಿಟ್ಟುಕೊಳ್ಳಬಾರದು ಜೊತೆ ಜೊತೆಗೆ ಜೀವಸಂಕುಲಯಗಳು ಹಾಗೂ ರೈತರಿಗೆ ನೀರನ್ನು ಸರಪರಾಜುವ ಮಾಡುವ ಗುರಿಯನ್ನು ಸಹ ಇಟ್ಟುಕೊಳ್ಳಬೇಕಿದೆ.
ಪ್ರತಿಯೊಂದು ನದಿಗಳ ಸಂರಕ್ಷಣೆಗಾಗಿ ಜಲಾನಯನ ಸಂರಕ್ಷಣ ಸಂಸ್ಥೆಗಳನ್ನು( River basin institution )ನಿರ್ಮಾಣ ಮಾಡಬೇಕಿದೆ. ಇವುಗಳಿಗೆ ಕಾನೂನಿನ ಪರಮಾಧಿಕಾರವನ್ನು ನೀಡಬೇಕು. ನದಿಗಳನ್ನು ಕಾಪಾಡಬಹುದು. ಕೇವಲ ಬೆಂಗಳೂರು ಜಲ ಮಂಡಳಿ ಹಾಗೂ ಪರಿಸರ ಮಾಲಿನ್ಯ ಮಂಡಳಿಗಳಿಗೆ ಇವುಗಳ ಜವಾಬ್ದಾರಿಯನ್ನು ವಹಿಸುವುದು ಸೂಕ್ತವಲ್ಲ.
ರಾಮ್ ಪ್ರಸಾದ್, ಕೆರೆ ಹಾಗೂ ಪರಿಸರ ಹೋರಾಟಗಾರರು
ಶ್ರೀಯುತರು ಸಭೆಯಲ್ಲಿ ಮಾತನಾಡಿ ಈಗಾಗಲೇ ನ್ಯಾಯಾಲಯಗಳು ಸರ್ಕಾರದ ನೀತಿಗಳ ವಿರುದ್ಧ ಅನೇಕ ಬಾರಿ ಮಾತನಾಡಿದ್ದಾರೆ. ಇತ್ತೀಚಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮಸೂದೆಯಲ್ಲಿ ಕೆರೆಗಳನ್ನು ಸಂರಕ್ಷಿಸುವ 62 ನಾಗರಿಕ ಗುಂಪುಗಳನ್ನು ಸಂಪೂರ್ಣ ಹೊರಗಿಟ್ಟಿರುವುದು ಅತ್ಯಂತ ದುರದೃಷ್ಟಕರ ಸಂಗತಿ. ನಾಗರೀಕರ ಸಹಭಾಗಿತ್ವಕ್ಕೆ ನೂತನ ಮಸೂದೆಯಲ್ಲಿ ಉದ್ದೇಶಪೂರ್ವಕವಾಗಿ ಮಟಕುಗೊಳಿಸಿರುವುದು ಎದ್ದು ಕಾಣುತ್ತದೆ.
ಈಗಾಗಲೇ 19 ಕೆರೆಗಳನ್ನು ಸತ್ತ ಕೆರೆ (Dead lake)ಗಳೆಂದು ಸರ್ಕಾರವು ಘೋಷಿಸಿದೆ. ಇವುಗಳ ಪುನರ್ಜೀವಕ್ಕೆ ಯಾವುದೇ ಆಸ್ಪದವನ್ನು ನೀಡದೆ ಅನ್ಯ ಉದ್ದೇಶಗಳಿಗಾಗಿ ಮಾಡುತ್ತಿರುವುದು ಎದ್ದು ಕಾಣುತ್ತಿದೆ. ಇತ್ತೀಚಿನ ಸರ್ವೋಚ್ಚ ನ್ಯಾಯಾಲಯದ ತೀರ್ಪು ಸಹ ಇವರುಗಳ ಪರವಾಗಿಯೇ ಇದೆ.
ತಿಪ್ಪಗೊಂಡನಹಳ್ಳಿಯ ಅಚ್ಚುಕಟ್ಟು ಪ್ರದೇಶವನ್ನು 2 ಕಿಲೋಮೀಟರ್ ಗಳಿಂದ ಕೇವಲ 30 ಮೀಟರ್ ಗೆ ಇಳಿಸಿರುವುದು ದುರಂತದ ಸಂಗತಿ. ಕಾನೂನಿನ ಪ್ರಕಾರ ಬಫರ್ ವಲಯ ಕೇವಲ 30 ಮೀಟರ್ ಮಾತ್ರ ಇರುತ್ತದೆ. ಆದರೆ ಇದು ಬಫರ್ ವಲಯ ಅಲ್ಲ. ಇದು ಸಂಪೂರ್ಣ ಜಲಾನಯನದ ಅಚ್ಚುಕಟ್ಟು ಪ್ರದೇಶ. ಇವುಗಳನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ.
ಕೆಲ ಸ್ಥಳೀಯ ರೈತರುಗಳು ಈ ಅಚ್ಚುಕಟ್ಟು ಪ್ರದೇಶದಿಂದ ಅಭಿವೃದ್ಧಿಯಾಗಲು ಸಾಧ್ಯವಿಲ್ಲ ಎಂದು ಪದೇ ಪದೇ ದೂರುತ್ತಿದ್ದಾರೆ. ಆದರೆ ಈ ಪ್ರದೇಶದಲ್ಲಿಯೂ 5 ವಲಯಗಳಾಗಿ ವಿಂಗಡಿಸಿ ಹಸಿರು ಕೈಗಾರಿಕೆಗಳು, ವ್ಯವಸಾಯ ಚಟುವಟಿಕೆಗಳನ್ನು ಮಾಡಲು ಅನುವು ಮಾಡಿಕೊಡಲಾಗಿದೆ. ಆದರೆ ಸರ್ಕಾರದಿಂದ ಈ ರೀತಿಯ ಅಭಿವೃದ್ಧಿ ಕೆಲಸಗಳಿಗೆ ಪ್ರೋತ್ಸಾಹ ಸಿಗುತ್ತಿಲ್ಲ.
ಅಭಿವೃದ್ಧಿಯೆಂದರೆ ಕೇವಲ ದೊಡ್ಡ ದೊಡ್ಡ ಕಂಪನಿಗಳಿಗೆ ಖಾಸಗಿ ಬಿಲ್ಡರ್ ಗಳಿಗೆ ಜಮೀನುಗಳನ್ನು ನೀಡಿದರೆ ಅಭಿವೃದ್ಧಿ ಸಾಧ್ಯವಿಲ್ಲ. ಈ ಜಲಾನಯನದ ಅಚ್ಚುಕಟ್ಟು ಪ್ರದೇಶವು ಪ್ರವಾಹ ಪೀಡಿತ ವಲಯವೆಂದು ಈಗಾಗಲೇ ತೀರ್ಮಾನಿಸಲಾಗಿದೆ.
ಮಾನ್ಯತಾ ಟೆಕ್ ಪಾರ್ಕ್, ಬಿಟಿಎಂ ಬಡಾವಣೆ , ರೈನ್ ಬೋ ಅಪಾರ್ಟ್ ಮೆಂಟ್ ಸಂಪೂರ್ಣ ಜವಲಾವೃತವಾಗಲು ಮಡಿವಾಳ ಕೆರೆ,ಹಾಲನಾಯಕನ ಹಳ್ಳಿ ಕೆರೆಯ ಜಲಾನಯನ ಪ್ರದೇಶವನ್ನು ರಿಯಲ್ ಎಸ್ಟೇಟ್ ಉದ್ದೇಶಕ್ಕೆ ಅಭಿವೃದ್ಧಿ ಪಡಿಸಿದ್ದೆ ಪ್ರಮುಖ ಕಾರಣವಾಗಿದೆ.
ಈ ಜಲಾನಯನ ಪ್ರದೇಶಗಳನ್ನು ಪ್ರವಾಹ ಪೀಡಿತ ಪ್ರದೇಶಗಳಿಂದ ಸರ್ಕಾರಕ್ಕೆ ಹೇಳಲು ಮನಸ್ಸಿಲ್ಲ. ಭೂಕಬಳಿಗೆ ಸಾಕಷ್ಟು ಕಷ್ಟವಾಗುತ್ತದೆ.
ಸರ್ಕಾರಗಳಿಗೆ ನಗರ ಪ್ರದೇಶಗಳು ಪ್ರವಾಹ ಪೀಡಿತವಾದರೆ ಕೂಡಲೇ ವಿಶ್ವ ಬ್ಯಾಂಕಿನ ಸಾವಿರಾರು ಕೋಟಿ ಹಣ ಲಪಟಾಯಿಸುವ ಉನ್ನಾರವನ್ನು ನಡೆಸುತ್ತಿದ್ದಾರೆ. ಈಗಾಗಲೇ 3600 ಕೋಟಿ ರೂಪಾಯಿಗಳನ್ನು ಲಪಟಾಯಿಸಿದ್ದಾರೆ.
ಎತ್ತಿನ ಹೊಳೆ ಯೋಜನೆ 2 ಸಾವಿರ ಕೋಟಿಗಿಂತ 26 ಸಾವಿರ ಕೋಟಿಗೆ ತಲುಪಿದರು ಮುಗಿಯುವ ಹೊತ್ತಿಗೆ ಮತ್ತಷ್ಟು ಸಾವಿರಾರು ಕೋಟಿ ಖರ್ಚಾಗುವ ಸಾಧ್ಯತೆ ಇದೆ.
ನೂತನವಾಗಿ ನಿರ್ಮಿಸಿರುವ ಶಿವರಾಮ ಕೊರಂಟೈನ್ ಕೆಂಪೇಗೌಡ ಬಡಾವಣೆ ಬಡಾವಣೆಗಳಲ್ಲಿ ಎತ್ತರದ ಪ್ರದೇಶಗಳಲ್ಲಿ ಎಸ್ ಟಿ ಪಿ ಹಾಗೂ ಈ ಟಿ ಪಿ ಯೋಜನೆಗಳನ್ನು ಮಾಡುತ್ತಿದ್ದಾರೆ. ಎತ್ತರದ ಪ್ರದೇಶಗಳಲ್ಲಿ ಮಾಡಿದರೆ ಪಂಪ್ ಮಾಡುತ್ತಾ ಮಾಡುತ್ತಾ ಭ್ರಷ್ಟಾಚಾರ ಮಾಡಬಹುದೆಂಬ ಅತಿಯಾಸೆ ಇಲ್ಲಿನ ಇಂಜಿನಿಯರಿಂಗ್ ಗಳಿಗಿದೆ.
ಸಂವಿಧಾನದ 74ನೆಯ ತಿದ್ದುಪಡಿಯನ್ನು ಸರ್ಕಾರ ಚಾಚು ಸಹ ಪಾಲಿಸದೆ ಸ್ಥಳೀಯ ಆಡಳಿತಗಳಲ್ಲಿ ನಾಗರೀಕರ ಸಹಭಾಗಿತ್ವವನ್ನು ಸಾಯಿಸುವ ಮೂಲಕ ಸಂವಿಧಾನವನ್ನು ಕಗ್ಗೊಲೆ ಮಾಡಿದೆ ಎಂದು ಹೇಳಿದರು.
ರಾಜಕಾರಣಿಗಳು ತಮ್ಮ ಓಟಿಗಾಗಿ ನೀರಿನ ರಾಜಕಾರಣವನ್ನು ಮಾಡುತ್ತಿರುವುದು ನಮ್ಮ ದುರಂತದ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. ನಮ್ಮೆಲ್ಲರನ್ನು ನೀರಿನ ಗುಲಾಮರಾಗುವಂತೆ ಮಾಡುತ್ತಿದ್ದಾರೆ.
ನೀರಿನ ಲಭ್ಯತೆಯನ್ನು ರಾಜಕಾರಣಿಗಳ ಕೈಗೆ ನೀಡಿ ನಾಗರಿಕರನ್ನು ಗುಲಾಮರಾಗಿಸುತ್ತಿರುವುದು ನಿಜಕ್ಕೂ ದುರದೃಷ್ಟಕರ ಸಂಗತಿ. ಇವುಗಳೆಲ್ಲವನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ ಇವುಗಳ ವಿರುದ್ಧ ಹೋರಾಡಬೇಕಿದೆ ಎಂದರು.
ಸಿಂಹಾದ್ರಿ, ಪರಿಸರ ಹಾಗೂ ಪ್ರಾಣಿ ಸಂರಕ್ಷಕರು
ತಿಪ್ಪಗೊಂಡನಹಳ್ಳಿ ಜಲಾಶಯ ಪ್ರದೇಶದಲ್ಲಿ ಈ ಮೊದಲು ಆನೆ ಕಾರಿಡಾರ್ ಇತ್ತು.ಆದರೆ ಇತ್ತೀಚಿನ ದಿನಗಳಲ್ಲಿ ಅಲ್ಲಿನ ಆನೆಗಳು ಸಂಪೂರ್ಣ ಮಾಯವಾಗಿವೆ.
ದೂರ ದೂರದಿಂದ ಬರುವ ಪಕ್ಷಿ ಸಂಕುಲಗಳು ಇತ್ತೀಚಿನ ದಿವಸಗಳಲ್ಲಿ ಬರುತ್ತಿಲ್ಲ. ನೀರು ಕೋಳಿಗಳು ಸಾಕಷ್ಟು ಸಂಖ್ಯೆಯಲ್ಲಿ ಇದ್ದವು ಅವುಗಳು ಸಹ ನಾಪತ್ತೆಯಾಗಿವೆ. ಮನುಷ್ಯನು ಪ್ರಾಣಿ ಪಕ್ಷಿಗಳ ಸಂಕುಲಗಳಿಗೆ ಸಂಪೂರ್ಣ ಮಾರಣಹೋಮವನ್ನು ಮಾಡಿರುವುದು ಈ ಜಲಾಶಯದ ಸುತ್ತಮುತ್ತ ಎದ್ದು ಕಾಣುತ್ತಿದೆ ಎಂದು ಶ್ರೀಯುತರು ತಿಳಿಸಿದರು.
ಮೂರು ಅಂಶಗಳ ಪ್ರಮುಖ ನಿರ್ಣಯಗಳು
1) ತಜ್ಞರುಗಳ ಸಮಿತಿ ನೇಮಕ
ಜಲಾಶಯವನ್ನು ಉಳಿಸಲು ನಾಗರಿಕರ ಸಹಭಾಗಿತ್ವದಲ್ಲಿ ತಜ್ಞರುಗಳ ಸಮಿತಿಯನ್ನು ನೇಮಿಸಬೇಕು. ಸಮಿತಿಯ ಶಿಫಾರಸಿನಂತೆ ಆಮೂಲಾಗ್ರವಾಗಿ ಜಲಾಶಯವನ್ನು ಪುನಃ ಚೇತನ ಗೊಳಿಸಲು ಕಾರ್ಯತಂತ್ರ ಯೋಜನೆಯನ್ನು ಸರ್ಕಾರ ಕೂಡಲೇ ಪ್ರಕಟಿಸಿ ನಿರ್ಧಾರ ಕೈಗೊಳ್ಳಬೇಕು.
2) ಪಾದಯಾತ್ರೆ ಆಯೋಜನೆ
ಬೆಂಗಳೂರಿನ ನಾಗರೀಕರೆಲ್ಲರೂಗಳು ಪಾಲ್ಗೊಳ್ಳಲು ಜಲಾಶಯವನ್ನು ಉಳಿಸುವ ದಿಶೆಯಲ್ಲಿ ತಿಪ್ಪಗೊಂಡನಹಳ್ಳಿ ಜಲಾಶಯದಿಂದ ಬೆಂಗಳೂರು ನಗರದ ಸ್ವಾತಂತ್ರ್ಯ ಉದ್ಯಾನದ ವರೆಗೆ ಪಾದಯಾತ್ರೆಯನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ರೂಪರೇಷೆಗಳನ್ನು ಸಮಿತಿಯ ನಿರ್ಧರಿಸುತ್ತದೆ.
3) ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಶೀಘ್ರ ಕಾರ್ಯತಂತ್ರ ಯೋಜನೆಯನ್ನು ರೂಪಿಸಲು ಒತ್ತಾಯ ಪಡಿಸುವುದು.