ಬೆಂಗಳೂರು: ಕರ್ನಾಟಕ ಸಾಹಿತ್ಯ ಪರಿಷತ್ತು ಬೆಂಗಳೂರು ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಕವಿ ಡಾ| ಪ್ರವೀಣರಾಜ್ ಎಸ್ ರಾವ್ ಇವರ “ನದಿ ತಟದ ವೃಕ್ಷ” ಕವನ ಸಂಕಲನವು ಇಂದು ಬಿಡುಗಡೆಗೊಂಡಿತ್ತು.
ಕಾರ್ಯಕ್ರಮದ ಉದ್ಘಾಟನೆಯು ಎಲ್ಲಾ ಸೇರಿದ ಕವಿಗಳು ವೃಕ್ಷಗಳಿಗೆ ನೀರೆರೆಯುವ ಮೂಲಕ ನರೆವೇರಿಸಿದರು.
“ನದಿ ತಟದ ವೃಕ್ಷ” ಕವನ ಸಂಕಲನವನ್ನು ಬೆಂಗಳೂರು ನಗರ ಜಿಲ್ಲಾ ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷರಾದ ಶ್ರೀ ಎಂ. ಪ್ರಕಾಶಮೂರ್ತಿಯವರು ಬಿಡುಗಡೆ ಮಾಡಿ, ಕವನದಲ್ಲಿ ಆಧುನಿಕ ಯುಗದ ಆಕರ್ಷಣೆಗೆ ಒಳಗಾಗಿ ನಾವು ನಮ್ಮ ನೆಲ, ಜಲ, ಆಕಾಶವನ್ನು ನಿರ್ಲಕ್ಷ ಮಾಡುತ್ತಿರುವ ಬಗೆಗೆ ಮಾರ್ಮಿಕವಾಗಿ ಕವಿಗಳು ಈ ಕವನಸಂಕಲನದಲ್ಲಿ ಚಿತ್ರಿಸಿರುತ್ತಾರೆ ಹಾಗೆಯೇ ಪರಿಸರದ ಬಗ್ಗೆ ಒಳ್ಳೆಯ ಸಂದೇಶವನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮುಕ್ತಕಂಠದಿ0ದ ಶ್ಲಾಘಿಸಿದರು, ಇಂತಹ ಕವನಗಳು ಮತ್ತೆ ಮತ್ತೆ ಅವರ ಲೇಖನಿಯಿಂದ ಬರಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಆಶಯ ನುಡಿಗಳನ್ನಾಡಿದ ಆರ್.ಆರ್. ನಗರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಉದಂತ ಶಿವಕುಮಾರ್ ಅವರು ಪ್ರತಿಯೊಂದು ಕವನದ ಮೌಲ್ಯ ಮಾಪನ ಮಾಡುತ್ತಾ ಈ ಕವನಸಂಕಲನದಲ್ಲಿ ಇರುವ ಕವಿತೆಗಳು ಉತ್ತಮ ಮಟ್ಟದಲ್ಲಿದ್ದು ಒಂದೇ ಬಾರಿಗೆ ಓದಿಸಿಕೊಂಡು ಹೋಗುತ್ತದೆ. ಇಂತಹ ಕವಿತೆಗಳನ್ನು ಓದಿ ಪ್ರೋತ್ಸಾಹಿಸಿ ಎಂದು ಓದುಗರಲ್ಲಿ ವಿನಂತಿಸಿದರು.
ಮಕ್ಕಳ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿರುವ ಡಾ. ಮಲಕಪ್ಪ ಅಲಿಯಾಸ್ ಮಹೇಶ್ ಮಾತನಾಡಿ, ಈ ಕವನ ಸಂಕಲನವನ್ನು ಎಲ್ಲರೂ ಪ್ರೋತ್ಸಾಹಿಸಿ ಕನ್ನಡ ಭಾಷೆಯ ಬೆಳವಣಿಗೆಗೆ ನೆರವಾಗಿ ಎಂದು ಆಶಿಸಿದರು.
ಮಂಡ್ಯ ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ಡಾ. ಕೆ.ಎನ್. ವಿಜಯಕುಮಾರ್ ಕೊಪ್ಪ ಅವರು ಕವನ ಸಂಕಲನದ ಬಗ್ಗೆ ಮಾತನಾಡಿ ಕವಿಯ ಆಶಯ ಮತ್ತು ಅಭಿವ್ಯಕ್ತಿಯನ್ನು ಕೊಂಡಾಡಿದರು.
ಕಾರ್ಯಕ್ರಮವನ್ನು ನಿರೂಪಿಸಿದ ಡಾ.ನಾಗರಾಜ ತಂಬ್ರಹಳ್ಳಿ ಅವರು, ಇವರ ಕವನಗಳು ಎಲ್ಲರಿಗೂ ಸುಲಭವಾಗಿ ಅರ್ಥವಾಗುವಂತೆ ರಚಿಸಲ್ಪಟ್ಟಿದ್ದು, ವೈಶಿಷ್ಟ ಪೂರ್ಣವಾಗಿದೆ ಎಂದು ಹೇಳಿ ಇನ್ನೂ ಒಳ್ಳೆಯ ಕವನಗಳು ಇವರಿಂದ ಕಾವ್ಯ ಲೋಕಕ್ಕೆ ಕೊಡುಗೆಯಾಗಿ ಬರಲಿಯೆಂದು ಶುಭ ಹಾರೈಸಿದರು.
“ನದಿ ತಟದ ವೃಕ್ಷ “ ಕವನ ಸಂಕಲನದ ಕವಿ ಡಾ. ಪ್ರವೀಣರಾಜ್ ಎಸ್ ರಾವ್ ಕಾಸರಗೋಡು, ಇವರು ಮಾತನಾಡಿ ಕಾಸರಗೋಡು ಕನ್ನಡಿಗರು ಸದಾ ಕನ್ನಡ ಕೆಲಸಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಕನ್ನಡದ ಸಾಹಿತ್ಯ, ಸಂಸ್ಕೃತಿಯ ಕೆಲಸಗಳು ಇಲ್ಲಿ ನಿರಂತರ ನಡೆಯುತ್ತಿರುತ್ತದೆ . ಆದರೆ ಕರ್ನಾಟಕ ಸರಕಾರ ಗಡಿನಾಡಾದ ಕಾಸರಗೋಡಿನ ಬಗೆಗೆ ತೀವ್ರ ನಿರ್ಲಕ್ಷವನ್ನು ಹೊಂದಿದೆ. ಇಲ್ಲಿನ ಕವಿಗಳಿಗೆ ಕಲಾವಿದರಿಗೆ ಇಲ್ಲಿನ ಸಂಸ್ಕೃತಿಗಳಿಗೆ ಅತ್ತ ಕೇರಳ ಹಾಗೂ ಇತ್ತ ಕರ್ನಾಟಕದ ಯಾವುದೇ ಪ್ರೋತ್ಸಾಹವನ್ನು ನೀಡುತ್ತಿಲ್ಲದೆ ಇಲ್ಲಿನ ಕನ್ನಡಿಗರು ಅತಂತ್ರರಾಗಿದ್ದಾರೆ. ಸರಕಾರ ಈ ಕುರಿತು ಅಧ್ಯಯನ ಮಾಡಿ ವರದಿ ತರಿಸಿಕೊಂಡು ಇಲ್ಲಿನ ಕನ್ನಡಿಗರ ನಾನಾ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ವಿನಂತಿಸಿದರು.
“ನದಿ ತಟದ ವೃಕ್ಷ” ಕವನ ಸಂಕಲನದ ಬಿಡುಗಡೆಯ ಈ ಕಾರ್ಯಕ್ರಮದಲ್ಲಿ ರಾಜ್ಯದ, ಗಡಿನಾಡಿನ ಹಲವಾರು ಯುವ ಹಾಗೂ ಹಿರಿಯ ಕವಿಗಳು ಉಪಸ್ಥಿತರಿದ್ದು, ಈ ಸಂಧರ್ಭದಲ್ಲಿ ಕವಿಗಳ ಕವಿತಾ ವಾಚನವು ಯಶಸ್ವಿಯಾಗಿ ಜರುಗಿತು, ಸ್ಥಳೀಯ ವಿದ್ಯಾರ್ಥಿಗಳ ವಿವಿಧ ಜಾನಪದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸಭಿಕರನ್ನು ರಂಜಿಸಿತು.
ಬಳಿಕ ಸಮಾಜದ ವಿವಿಧ ಸಾಧಕರನ್ನು ಈ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಡಾ. ಸುಕನ್ಯಾ ಹೆಗಡೆ, ಕೆಂಗೇರಿ ಅವರು ಅತಿಥಿಗಳನ್ನು ಸ್ವಾಗತಿಸಿ, ಸಭಿಕರಿಗೆ ಪರಿಚಯಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಕಾರ್ಯಕ್ರಮದ ಯಶಸ್ಸಿಗೆ ನೆರವಾದವರಿಗೆ ಗೌರವಿಸಿ ವಂದಿಸಲಾಯಿತು.