ಬೆಂಗಳೂರು 21.06.2025: “ಯೋಗಾಭ್ಯಾಸವು ನಮ್ಮನ್ನು ಅಹಿಂಸೆ, ಕರುಣೆ ಮತ್ತು ಶಾಂತಿಯ ಕಡೆಗೆ ಕೊಂಡೊಯ್ಯುತ್ತದೆ, ಇವು ಭೂಮಿಯ ಸುಸ್ಥಿರ ಅಭಿವೃದ್ಧಿ ಮತ್ತು ರಕ್ಷಣೆಗೆ ಅತ್ಯಗತ್ಯ. ಆದ್ದರಿಂದ, “ಒಂದು ಭೂಮಿ, ಒಂದು ಆರೋಗ್ಯ” ಎಂಬ ದೃಷ್ಟಿಕೋನವನ್ನು ಸಾಕಾರಗೊಳಿಸಲು ಯೋಗವನ್ನು ಅಳವಡಿಸಿಕೊಳ್ಳುವುದು ಇಂದಿನ ಅತಿ ದೊಡ್ಡ ಅಗತ್ಯವಾಗಿದೆ” ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.
“ಆಯುಷ್ ಇಲಾಖೆಯಿಂದ ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ಆಯೋಜಿಸಿದ್ದ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ-2025 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ” ಯೋಗವು ಪ್ರಾಚೀನ ಭಾರತೀಯ ಸಂಪ್ರದಾಯದ ಅಮೂಲ್ಯ ಕೊಡುಗೆಯಾಗಿದೆ. ಇದು ಆತ್ಮ ಮತ್ತು ದೇಹ, ಆಲೋಚನೆ ಮತ್ತು ಕ್ರಿಯೆ, ಸಂಯಮ ಮತ್ತು ಪರಿಪೂರ್ಣತೆಯ ನಡುವಿನ ಸಮತೋಲನದ ಮಾಧ್ಯಮವಾಗಿದೆ. ಯೋಗವು ನಮ್ಮನ್ನು ಸಂಯಮ, ಸಮತೋಲನ ಮತ್ತು ಪ್ರಕೃತಿಯ ಕಡೆಗೆ ಸಂವೇದನಾಶೀಲರನ್ನಾಗಿ ಮಾಡುತ್ತದೆ. ಇದು ಸಾವಿರಾರು ವರ್ಷಗಳಿಂದ ಮಾನವ ಆರೋಗ್ಯ ಮತ್ತು ಅದರ ಕಲ್ಯಾಣಕ್ಕಾಗಿ ಸಮರ್ಪಿತವಾಗಿರುವ ಭಾರತದ ಸಾಂಸ್ಕೃತಿಕ ಸಂಪ್ರದಾಯದ ಸಂಕೇತವಾಗಿದೆ” ಎಂದು ತಿಳಿಸಿದರು.
“ಯೋಗವು ಎಲ್ಲರನ್ನೂ ಒಗ್ಗೂಡಿಸುವ ಮತ್ತು ಎಲ್ಲರಿಗೂ ಒಳ್ಳೆಯದನ್ನು ಮಾಡುವ ಮೂಲ ಮನೋಭಾವವನ್ನು ಹೊಂದಿದೆ. ಯೋಗವು ದೇಹ, ಮನಸ್ಸು ಮತ್ತು ಭಾವನೆಗಳನ್ನು ಸಮತೋಲನಗೊಳಿಸಲು ಒಂದು ಉತ್ತಮ ಮಾರ್ಗವಾಗಿದೆ. ಇದು ನಮ್ಮ ಋಷಿಮುನಿಗಳು ಮತ್ತು ಸಂತರು ನೀಡಿದ ವಿಶಿಷ್ಟ ಕೊಡುಗೆಯಾಗಿದ್ದು, ಇಂದು ಪ್ರಪಂಚದಾದ್ಯಂತ ಮಾನವೀಯತೆಗೆ ಭರವಸೆಯ ಕಿರಣವಾಗಿದೆ. ಇಡೀ ಜಗತ್ತು ಯೋಗದ ಮಹತ್ವವನ್ನು ಅರ್ಥಮಾಡಿಕೊಂಡಿದೆ ಮತ್ತು ಅದನ್ನು ಅಳವಡಿಸಿಕೊಂಡಿದೆ” ಎಂದು ಹೇಳಿದರು.
“ಜೂನ್ 21 ರಂದು, ಇಡೀ ಜಗತ್ತು ಅತ್ಯಂತ ದೀರ್ಘವಾದ ದಿನದ ಸೂರ್ಯೋದಯವನ್ನು ಸ್ವಾಗತಿಸುತ್ತಿರುವಾಗ, ನಾವು ಯೋಗದ ಮೂಲಕ ನಮ್ಮೊಳಗಿನ ಸೂರ್ಯನನ್ನು ಜಾಗೃತಗೊಳಿಸುತ್ತೇವೆ ಮತ್ತು ಒತ್ತಡದಿಂದ ಸಮತೋಲನಕ್ಕೆ, ಆತಂಕದಿಂದ ಮನಸ್ಸಿನ ಸ್ಥಿರತೆಗೆ ಮತ್ತು ಅಸಮತೋಲಿತ ಜೀವನದಿಂದ ಪರಿಪೂರ್ಣ ಆರೋಗ್ಯಕ್ಕೆ ನಮ್ಮನ್ನು ಕರೆದೊಯ್ಯುವ ಪ್ರಜ್ಞೆಯನ್ನು ಜಾಗೃತಗೊಳಿಸುತ್ತೇವೆ. 11ನೇ ಅಂತರರಾಷ್ಟ್ರೀಯ ಯೋಗ ದಿನದ ಥೀಮ್ “ಒಂದು ಭೂಮಿಗೆ ಯೋಗ, ಒಂದು ಆರೋಗ್ಯ”. “ಒಂದು ಭೂಮಿ, ಒಂದು ಆರೋಗ್ಯ” ಎಂಬ ಕಲ್ಪನೆಯು ಎಲ್ಲಾ ಜೀವಿಗಳು, ಪರಿಸರ ಮತ್ತು ಪ್ರಕೃತಿ ಪರಸ್ಪರ ಸಂಬಂಧ ಹೊಂದಿವೆ ಎಂಬುದನ್ನು ನಮಗೆ ನೆನಪಿಸುತ್ತದೆ. ಈ ಭಾವನೆಯನ್ನು ಅರಿತುಕೊಳ್ಳಲು ಸರಳ ಮತ್ತು ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ಯೋಗವಾಗಿದೆ ” ಎಂದು ತಿಳಿಸಿದರು.
ಇಂದು ಜಗತ್ತು ಹವಾಮಾನ ಬದಲಾವಣೆ, ಮಾನಸಿಕ ಒತ್ತಡ, ಜೀವನಶೈಲಿ ರೋಗಗಳು ಮತ್ತು ಪರಿಸರ ಅಸಮತೋಲನದಿಂದ ಬಳಲುತ್ತಿರುವಾಗ, ಯೋಗವು ಒಬ್ಬರ ಆರೋಗ್ಯವನ್ನು ಬಲಪಡಿಸುವುದಲ್ಲದೆ, ಭೂಮಿಯೊಂದಿಗಿನ ನಮ್ಮ ಸಂಪರ್ಕವನ್ನು ಗಾಢವಾಗಿಸುತ್ತದೆ. “ಒಂದು ಆರೋಗ್ಯ” ಎಂದರೆ ಮಾನವರ ಯೋಗಕ್ಷೇಮ ಮಾತ್ರವಲ್ಲದೆ ಎಲ್ಲಾ ಪ್ರಾಣಿ, ಸಸ್ಯ ಮತ್ತು ಪರಿಸರದ ರಕ್ಷಣೆಯೂ ಆಗಿದೆ. ನಾವೆಲ್ಲರೂ ಒಟ್ಟಾಗಿ ಯೋಗವನ್ನು ನಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಿಕೊಳ್ಳೋಣ ಮತ್ತು ಆರೋಗ್ಯಕರ, ಶಾಂತಿಯುತ ಮತ್ತು ಸಮತೋಲಿತ ಜಗತ್ತನ್ನು ಸೃಷ್ಟಿಸೋಣ ಎಂದು ರಾಜ್ಯಪಾಲರು ಕರೆ ನೀಡಿದರು.
ಸಮಾರಂಭದಲ್ಲಿ ವಿಧಾನ ಪರಿಷತ್ ನ ಸಭಾಪತಿ ಶ್ರೀ ಬಸವರಾಜ್ ಎಸ್ ಹೊರಟ್ಟಿ, ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ನಟರಾದ ಅನಿರುದ್, ಕಿಶನ್, ನಟಿ ಸಾನಿಯಾ ಅಯ್ಯರ್ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.