ಬೆಂಗಳೂರು 27.06.2025: ಪ್ರತಿಯೊಬ್ಬರು ನಾಡಪ್ರಭು ಕೆಂಪೇಗೌಡರ ಚಿಂತನೆಗಳನ್ನು ಮೈಗೂಡಿಸಿಕೊಂಡು ಅವರ ಜೀವನದಿಂದ ಸ್ಫೂರ್ತಿ ಪಡೆದು ರಾಜ್ಯದ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಪ್ರಗತಿ ಮತ್ತು ಸಾಮಾಜಿಕ ಸಮಾನತೆ ಮತ್ತು ಸಾಮರಸ್ಯಕ್ಕೆ ಕೊಡುಗೆ ನೀಡಬೇಕೆಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಮನವಿ ಮಾಡಿದರು.
ನಗರದಲ್ಲಿ ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 516ನೇ ಜನ್ಮದಿನೋತ್ಸವದಲ್ಲಿ ಮುಖ್ಯಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. “ನಾಡಪ್ರಭು ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯದ ನಾಯಕರಾಗಿ ಕೆಲಸ ಮಾಡಿದರು, ಆದರೆ ಅವರ ಚಿಂತನೆಯು ಆಡಳಿತಕ್ಕೆ ಸೀಮಿತವಾಗಿರಲಿಲ್ಲ. ಅವರು ದಕ್ಷ ಆಡಳಿತಗಾರ, ನಗರ ಯೋಜಕ, ಸಮಾಜ ಸುಧಾರಕ, ಸಮಾನತೆ ಮತ್ತು ಸಾಮರಸ್ಯದ ಪ್ರವರ್ತಕ ಮತ್ತು ಧಾರ್ಮಿಕ ನಾಯಕರಾಗಿದ್ದರು” ಎಂದು ಶ್ಲಾಘಿಸಿದರು.
” ಈ ದಿನ ನಾವೆಲ್ಲರೂ ಇತಿಹಾಸದ ಆ ಸುವರ್ಣ ಅಧ್ಯಾಯವನ್ನು ನೆನಪಿಸಿಕೊಳ್ಳುವ ಸಂದರ್ಭ, ಆ ಸಂದರ್ಭದಲ್ಲಿ ದೂರದೃಷ್ಟಿಯ ನಾಯಕತ್ವವು ಬೆಂಗಳೂರಿನಂತಹ ಮಹಾನ್ ನಗರಕ್ಕೆ ಅಡಿಪಾಯ ಹಾಕಿತು. ಇಂದಿನ ಬೆಂಗಳೂರನ್ನು ಆಧುನಿಕ ತಂತ್ರಜ್ಞಾನ, ಶಿಕ್ಷಣ ಮತ್ತು ವಿಜ್ಞಾನ, ವ್ಯವಹಾರ ಮತ್ತು ಸಾಂಸ್ಕೃತಿಕ ರಾಜಧಾನಿಯಾಗಿ ನೋಡುವಾಗ, ಇದೆಲ್ಲದರ ಅಡಿಪಾಯವನ್ನು ಶತಮಾನಗಳ ಹಿಂದೆ ನಾಡಪ್ರಭು ಕೆಂಪೇಗೌಡರು ತಮ್ಮ ಬಲವಾದ ನಾಯಕತ್ವ ಮತ್ತು ಸಾಮಾಜಿಕ ಕಲ್ಯಾಣ ಯೋಜನೆಗಳ ಮೂಲಕ ಹಾಕಿದರು ಎಂಬುದನ್ನು ನಾವು ನೆನಪಿನಲ್ಲಿಡಬೇಕು. 1537ರಲ್ಲಿ ಅವರು ಬೆಂಗಳೂರಿಗೆ ವಿನ್ಯಾಸಗೊಳಿಸಿದ ಯೋಜನೆಯು ಇಂದಿಗೂ ಆಡಳಿತಾತ್ಮಕ ತತ್ವಗಳು, ವಿಕೇಂದ್ರೀಕರಣ, ಸುಸ್ಥಿರ ಅಭಿವೃದ್ಧಿ, ಸಾಮಾಜಿಕ ಸೇರ್ಪಡೆ, ಸಾರ್ವಜನಿಕ ಸೇವಾ ವಿತರಣೆ ಮತ್ತು ಜಲ ಸಂಪನ್ಮೂಲ ನಿರ್ವಹಣೆಯ ಅತ್ಯುತ್ತಮ ಉದಾಹರಣೆಗಳಲ್ಲಿ ಒಂದಾಗಿದೆ” ಎಂದು ಹೇಳಿದರು.
“ಬೆಂಗಳೂರಿನ ನೀರಿನ ಸಮತೋಲನವನ್ನು ಕಾಪಾಡಿಕೊಳ್ಳಲು ಅವರು 100 ಕ್ಕೂ ಹೆಚ್ಚು ಕೆರೆಗಳನ್ನು ಕಟ್ಟಿಸಿದರು. ಬೆಂಗಳೂರಿನ ಪರಿಸರವನ್ನು ರಕ್ಷಿಸುವಲ್ಲಿ ಈ ಜಲಾಶಯಗಳ ಉಪಯುಕ್ತತೆ ಇನ್ನೂ ಗೋಚರಿಸುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಅವರು ನ್ಯಾಯಕ್ಕೆ ಪ್ರಾಮುಖ್ಯತೆ ನೀಡುತ್ತಿದ್ದರು. ಸಾರ್ವಜನಿಕ ವಿಚಾರಣೆಗಳು, ಸ್ಥಳೀಯ ವಿವಾದ ಪರಿಹಾರ ಮತ್ತು ಸಾರ್ವಜನಿಕ ಭಾಗವಹಿಸುವಿಕೆ ಅವರ ಆಡಳಿತದ ಮೂಲಾಧಾರಗಳಾಗಿದ್ದವು. ಅವರು ಎಲ್ಲಾ ವರ್ಗಗಳು, ರೈತರು ಮತ್ತು ಮಹಿಳೆಯರಿಗಾಗಿ ಕಲ್ಯಾಣ ಯೋಜನೆಗಳನ್ನು ರಚಿಸಿದರು. ಅವರು ಧಾರ್ಮಿಕ ಸಹಿಷ್ಣುತೆಯನ್ನು ಉತ್ತೇಜಿಸಿದರು ಮತ್ತು ಎಲ್ಲಾ ಸಮುದಾಯಗಳ ಧಾರ್ಮಿಕ ಸ್ಥಳಗಳ ಸಂರಕ್ಷಣೆಗೆ ಕೊಡುಗೆ ನೀಡಿದರು” ಎಂದು ಪ್ರಶಂಸೆ ವ್ಯಕ್ತಪಡಿಸಿದರು.
“ಕೆಂಪೇಗೌಡ ಆಡಳಿತವನ್ನು ಜನರ ಜೀವನದ ಪ್ರತಿಯೊಂದು ಅಂಶದೊಂದಿಗೆ ಜೋಡಿಸಿದರು. ಅದು ಶಿಕ್ಷಣ, ಕೃಷಿ, ನೀರು ನಿರ್ವಹಣೆ ಅಥವಾ ಗುಡಿಸಿಲು ಕೈಗಾರಿಕೆಗಳ ಅಭಿವೃದ್ಧಿಯಾಗಿರಬಹುದು. ಇಂದು ಸುಸ್ಥಿರ ಅಭಿವೃದ್ಧಿ ಮತ್ತು ನಾಗರಿಕ ಕೇಂದ್ರಿತ ಆಡಳಿತದ ಯುಗ. ನಾವು “ಸ್ಮಾರ್ಟ್ ಸಿಟಿ”, “ಹಸಿರು ಉಪಕ್ರಮಗಳು”, “ಸಾರ್ವಜನಿಕ ಭಾಗವಹಿಸುವಿಕೆ”, “ಆಡಳಿತದಲ್ಲಿ ನಾವೀನ್ಯತೆ” ಬಗ್ಗೆ ಮಾತನಾಡುವಾಗ, ಕೆಂಪೇಗೌಡರ ಆಲೋಚನೆಗಳು ಮತ್ತು ಕೆಲಸಗಳು ಈ ಯೋಜನೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಕಾರ್ಯಗತಗೊಳಿಸಲು ನಮಗೆ ಸಹಾಯ ಮಾಡುತ್ತವೆ. “ನಾಡಪ್ರಭು ಕೆಂಪೇಗೌಡ ನಾಗರಿಕತೆ” ನಿಜವಾಗಿಯೂ ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆ, ಬಲವಾದ ಸಾರ್ವಜನಿಕ ಆಡಳಿತ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಆಡಳಿತಾತ್ಮಕ ನಾವೀನ್ಯತೆಗಳಿಗೆ ಒಂದು ಶ್ರೇಷ್ಠ ಉದಾಹರಣೆಯಾಗಿದೆ” ಎಂದು ಹೇಳಿದರು.
“ಕೆಂಪೇಗೌಡ ಪ್ರಶಸ್ತಿ, ಸ್ಮಾರಕ ನಿರ್ಮಾಣ, ಶಿಕ್ಷಣ ಸಂಸ್ಥೆಗಳಲ್ಲಿ ಅವರ ವಿಚಾರಗಳನ್ನು ಅಳವಡಿಸುವುದು ಮತ್ತು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೆಸರಿಡುವುದು, ಈ ಎಲ್ಲಾ ಹಂತಗಳು ನಾಡಪ್ರಭುಗಳ ಬಗ್ಗೆ ನಮ್ಮ ನಿಜವಾದ ಭಕ್ತಿಯನ್ನು ಸಂಕೇತಿಸುತ್ತವೆ. ಕೆಂಪೇಗೌಡರ ಜೀವನವು ದೃಢನಿಶ್ಚಯ, ದೂರದೃಷ್ಟಿ ಮತ್ತು ಕಠಿಣ ಪರಿಶ್ರಮವಿದ್ದರೆ, ಯಾವುದೇ ನಗರ, ಸಮಾಜ ಮತ್ತು ರಾಷ್ಟ್ರವು ಪ್ರಗತಿ ಸಾಧಿಸಬಹುದು ಎಂಬುದಕ್ಕೆ ಪುರಾವೆಯಾಗಿದೆ. ತಾಂತ್ರಿಕ ಅಭಿವೃದ್ಧಿಯ ಜೊತೆಗೆ, ನಾವು ಸಾಂಸ್ಕೃತಿಕ ಮತ್ತು ನೈತಿಕ ಮೌಲ್ಯಗಳನ್ನು ರಕ್ಷಿಸಬೇಕು” ಎಂದು ಯುವಜನತೆಗೆ ಕರೆ ನೀಡಿದರು.
“ಸಮಾಜ, ಜನರು ಮತ್ತು ದೇಶದ ಕಲ್ಯಾಣಕ್ಕಾಗಿ ಕೆಲಸ ಮಾಡುವ ಮಹಾನ್ ವ್ಯಕ್ತಿಗಳಿಗೆ ಕೆಂಪೇಗೌಡ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಾ, ಸಮಾಜಕ್ಕಾಗಿ ಅವರ ಸೇವೆ ನಿರಂತರವಾಗಿರಲಿ ಎಂದು ಹಾರೈಸುತ್ತನೇ” ಎಂದರು.
ಸಮಾರಂಭದಲ್ಲಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಶ್ರೀ ಸ್ಪಟಿಕಪುರಿ ಮಹಾಸಂಸ್ಥಾನದ ಪೂಜ್ಯ ನಂಜಾವಧೂತ ಸ್ವಾಮೀಜಿ, ವಿಶ್ವ ವೊಕ್ಕಲಿಗರ ಸಂಸ್ಥಾನ ಮಠದ ಮಹಾಸ್ವಾಮಿ ನಿಶ್ಚಲಾನಂದನಾಥ ಸ್ವಾಮಿ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ವಿಪಕ್ಷ ನಾಯಕರಾದ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕರಾದ ಡಾ.ಅಶ್ವತ್ಥನಾರಾಯಣ, ಕರ್ನಾಟಕದ ವಿಧಾನಪರಿಷತ್ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ, ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಮತ್ತು ಗಣ್ಯರು ಉಪಸ್ಥಿತರಿದ್ದರು.