ಕಳೆದ 2 ವರ್ಷಗಳಲ್ಲಿ ರಾಜ್ಯದಲ್ಲಿ ರೂ. 6,57,660 ಕೋಟಿ ಹೂಡಿಕೆಗೆ 115 ಒಡಂಬಡಿಕೆಗಳನ್ನು (MoU) ಮಾಡಿಕೊಳ್ಳಲಾಗಿದೆ. ಇದರಿಂದ ರಾಜ್ಯದಲ್ಲಿ ಸುಮಾರು 2,32,771 ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದರು.
ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಎರಡು ವರ್ಷಗಳ ಸಾಧನೆಯ “ಪ್ರಗತಿ ಪಥದ ಮುಂದಣ ಹೆಜ್ಜೆ” ಪುಸ್ತಕ ಬಿಡುಗಡೆ ಮಾಡಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿಗಳಲ್ಲಿ 906 ಬಂಡವಾಳ ಹೂಡಿಕೆ ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ಇವುಗಳಿಂದ ಸುಮಾರು ರೂ.1,13,200 ಕೋಟಿ ಬಂಡವಾಳ ಹೂಡಿಕೆಯಾಗಲಿದ್ದು, 2,23,982 ಜನರಿಗೆ ಉದ್ಯೋಗವಕಾಶ ಲಭ್ಯವಾಗಲಿದೆ ಎಂದು ತಿಳಿಸಿದರು.
ಫೆಬ್ರವರಿ-2025ರ ಮಾಹೆಯಲ್ಲಿ “ಇನ್ವೆಸ್ಟ್ ಕರ್ನಾಟಕ-2025″ನ್ನು ಆಯೋಜಿಸಲಾಗಿದ್ದು, ಇದರಲ್ಲಿ ಒಟ್ಟು 3,250 ಉದ್ದಿಮೆದಾರರು ಭಾಗವಹಿಸಿದ್ದು, ಒಟ್ಟು 98 ಕಂಪನಿಗಳೊಂದಿಗೆ ರೂ. 6,23,970 ಕೋಟಿ ಹೂಡಿಕೆಯ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಹಾಗೂ ರೂ. 4,03,533 ಕೋಟಿ ಹೂಡಿಕೆ ಮಾಡಲು 1101 ಕಂಪನಿಗಳು ಸಂಬಂಧಿಸಿದ ವಿವಿಧ ಸಮಿತಿಗಳಿಂದ ಅನುಮೋದನೆ ಪಡೆದಿರುತ್ತಾರೆ. ಈ ಯೋಜನೆಗಳಿಂದ ಅಂದಾಜು 6,00,000 ಗಳಷ್ಟು ಉದ್ಯೋಗ ಸೃಜನೆ ನಿರೀಕ್ಷಿಸಲಾಗಿದೆ. ಇವುಗಳಲ್ಲಿ ಶೇ.75 ರಷ್ಟು ಬೆಂಗಳೂರಿನ ಹೊರಗೆ, ಆ ಪೈಕಿ ಶೇ. 45ರಷ್ಟು ಉತ್ತರ ಕರ್ನಾಟಕ ಭಾಗದಲ್ಲಿವೆ ಎಂದರು.
ರಾಜ್ಯದಲ್ಲಿ ರೂ.7.50 ಲಕ್ಷ ಕೋಟಿ ಹೂಡಿಕೆಗಳನ್ನು ಆಕರ್ಷಿಸಲು ಹಾಗೂ 20 ಲಕ್ಷ ಜನರಿಗೆ ಉದ್ಯೋಗ ಸೃಷ್ಟಿಸುವ ಉದ್ದೇಶದೊಂದಿಗೆ ಹೊಸ ಕೈಗಾರಿಕಾ ನೀತಿ 2025-30ನ್ನು ಹೊರತರಲಾಗಿದೆ. ಹೂಡಿಕೆದಾರರಿಗೆ ಕ್ಯಾಪೆಕ್ಸ್ ಸಬ್ಸಿಡಿ ಅಥವಾ ಪಿ.ಎಲ್.ಐ ನಡುವೆ ಆಯ್ಕೆ ಮಾಡಲು ಅವಕಾಶವಿರುತ್ತದೆ ಮತ್ತು ರಾಜ್ಯದ ಸಮತೋಲನ ಕೈಗಾರಿಕಾ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಕೈಗಾರಿಕಾ ಕ್ಷೇತ್ರದಲ್ಲಿ ಹಿಂದುಳಿದ ಜಿಲ್ಲೆಗಳು / ತಾಲ್ಲೂಕುಗಳು ಹೂಡಿಕೆಗಳನ್ನು ಆಕರ್ಷಿಸಲು ಹೆಚ್ಚಿನ ಪೋತ್ಸಾಹವನ್ನು ನೀಡಲಾಗುತ್ತದೆ.
ಕ್ಲೀನ್ ಮೊಬಿಲಿಟಿ ವಾಹನ ಮೌಲ್ಯ ಸರಪಳಿಯಲ್ಲಿ ರೂ 50,000 ಕೋಟಿ ಹೂಡಿಕೆಗಳನ್ನು ಆಕರ್ಷಿಸುವ ಹಾಗೂ ಸರಿಸುಮಾರು 100,000 ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಉದ್ದೇಶದೊಂದಿಗೆ ಕರ್ನಾಟಕ ಕ್ಲೀನ್ ಮೊಬಿಲಿಟಿ ಪಾಲಿಸಿ-2025-30ನ್ನು ಹೊರತರಲಾಗಿದೆ. ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ಅಧಿನಿಯಮದಡಿ 44,165 ಎಕರೆ ಪ್ರದೇಶವುಳ್ಳ 18 ಕೈಗಾರಿಕಾ ಪ್ರದೇಶಗಳನ್ನು ವಿಶೇಷ ಹೂಡಿಕೆ ಪ್ರದೇಶವೆಂದು (SIR) ಘೋಷಿಸಲಾಗಿದೆ ಎಂದು ತಿಳಿಸಿದರು.
ಮೊದಲನೇ ಹಂತದಲ್ಲಿ ಸುಮಾರು 2000 ಎಕರೆ ಪ್ರದೇಶದಲ್ಲಿ ಬೆಂಗಳೂರಿನ ದೊಡ್ಡಬಳ್ಳಾಪುರ-ದಾಬಸ್ಪೇಟೆ ರಸ್ತೆಯಲ್ಲಿ ಅಂದಾಜು ರೂ.40,000 ಕೋಟಿ ಬಂಡವಾಳ ಹೂಡಿಕೆಯೊಂದಿಗೆ, ಸುಮಾರು 80,000 ಉದ್ಯೋಗ ಸೃಜನೆಯಾಗಲಿರುವ Knowledge, Wellbeing Innovation (KWIN) City ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ. 2017-18, 2018-19 ಮತ್ತು 2019-20ನೇ ಸಾಲಿನಲ್ಲಿ ರಫ್ತು ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ರಾಜ್ಯದ 68 ಶ್ರೇಷ್ಠ ರಫ್ತುದಾರರಿಗೆ ರಾಜ್ಯ ಶ್ರೇಷ್ಠ ರಫ್ತು ಪ್ರಶಸ್ತಿಗಳನ್ನು 2023-24 ನೇ ಸಾಲಿನಲ್ಲಿ ಪ್ರಧಾನ ಮಾಡಲಾಗಿರುತ್ತದೆ.
ಇಲಾಖಾ ಸಚಿವರ ಅಧ್ಯಕ್ಷತೆಯಲ್ಲಿ Strategic Investments Committee ಯನ್ನು ಹಾಗೂAerospace & Defence, ESDM, Auto/EV, Machine Tools, Pharma, Core Manufacturing, Industry 5.O, ಜವಳಿ ಮತ್ತು ಗ್ರೀನ್ ಎನರ್ಜಿ ವಲಯಗಳಲ್ಲಿ 9 ವಿಷನ್ ಗ್ರೂಪ್ಗಳನ್ನು ರಚಿಸಲಾಗಿದೆ. ಅಲ್ಲದೇ ಕರ್ನಾಟಕ ರಾಜ್ಯವು 2023-24ನೇ ಸಾಲಿನಲ್ಲಿ ರೂ. 54,427 ಕೋಟಿ ವಿದೇಶಿ ಹೂಡಿಕೆ ಆಕರ್ಷಿಸಿ, ದೇಶದಲ್ಲಿ 3ನೇ ಸ್ಥಾನದಲ್ಲಿದ್ದು ಹಾಗೂ 2024-25ನೇ ಸಾಲಿನಲ್ಲಿ ರೂ.56,030 ಕೋಟಿ ವಿದೇಶಿ ಹೂಡಿಕೆ ಆಕರ್ಷಿಸುವುದರೊಂದಿಗೆ ದೇಶದಲ್ಲಿ 2ನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.
2023-24ನೇ ಸಾಲಿನಲ್ಲಿ ರಾಜ್ಯವು 166,545 ಮಿಲಿಯನ್ ಯುಎಸ್ ಡಾಲರ್ ರಫ್ತು ಮಾಡುವುದರೊಂದಿಗೆ ಒಟ್ಟಾರೆ ರಫ್ತಿನಲ್ಲಿ 1ನೇ ಸ್ಥಾನದಲ್ಲಿದೆ. ಸೇವಾ ವಲಯಗಳಲ್ಲಿ 1,39,914 ಮಿಲಿಯನ್ ಯುಎಸ್ ಡಾಲರ್ ರಫ್ತು ಮಾಡುವುದರೊಂದಿಗೆ 1ನೇ ಸ್ಥಾನ ಹಾಗೂ ಸರಕು ರಫ್ತಿನಲ್ಲಿ 26,631 ಮಿಲಿಯನ್ ಯುಎಸ್ ಡಾಲರ್ ರಫ್ತು ಮಾಡುವುದರೊಂದಿಗೆ 4ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಅತ್ಯಾಧುನಿಕ ಏಕಗವಾಕ್ಷಿ ಪೋರ್ಟಲ್ ಅನ್ನು ಮೈಕ್ರೋಸಾಫ್ಟ್ ವತಿಯಿಂದ ಅಭಿವೃದ್ಧಿಪಡಿಸಿದ್ದು, ಸುಮಾರು 30 ಇಲಾಖೆಗಳ 100ಕ್ಕೂ ಹೆಚ್ಚು ಅನುಮೋದನೆ / ಹಂಚಿಕೆ / ಅನುಮತಿ / ನಿರಾಪೇಕ್ಷಣಾ ಸೇವೆಗಳನ್ನು ಏಕೀಕರಣ (ಇಂಟಿಗ್ರೇಟ್) ಮಾಡಲಾಗಿದೆ. ಫೆಬ್ರವರಿ 2025ರಲ್ಲಿ ನಡೆದ ಇನ್ವೆಸ್ಟ್ ಕರ್ನಾಟಕ 2025ರಲ್ಲಿ ಸದರಿ ಪೋರ್ಟಲ್ ಲೋಕಾರ್ಪಣೆ ಮಾಡಲಾಗಿದೆ.
ತಯಾರಿಕಾ ವಲಯದ ಬಲವರ್ಧನೆಗೆ ಆಗಬೇಕಾದ ಕಾಯಕಲ್ಪ ಕುರಿತು ದಿನಾಂಕ 10.06.2025 ರಂದು ನಡೆದ “ಉತ್ಪಾದನಾ ಮಂಥನ” ಸಮಾವೇಶದಲ್ಲಿ ಚರ್ಚಿಸಲಾಗಿದ್ದು, ಅದರಲ್ಲಿ 6 ಪ್ರಮುಖ ವಲಯಗಳನ್ನು ಗುರುತಿಸಿದ್ದು, ಅವುಗಳು ಏರೋಸ್ಪೇಸ್, ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್, ಕ್ಯಾಪಿಟಲ್ ಗೂಡ್ಸ್ ಮತ್ತು ರೋಬೋಟಿಕ್ಸ್, ಆಟೋ ಮತ್ತು ಎಲೆಕ್ಟ್ರಿಕ್ ವಾಹನಗಳು, ಜವಳಿ ಹಾಗೂ ಎಫ್.ಎಂ.ಸಿ.ಜಿ ಆಗಿರುತ್ತವೆ. ಈ ಸಮಾವೇಶದಲ್ಲಿ 60 ಪ್ರಮುಖ ಕಂಪನಿಗಳ 80 ಸಿಇಒಗಳು ಭಾಗವಹಿಸಿದ್ದರು ಎಂದು ತಿಳಿಸಿದರು.
ಎರಡು ವರ್ಷಗಳಲ್ಲಿ ನನಸಾಗಿರುವ ಕಂಪನಿಗಳ ಹೂಡಿಕೆ :
ಫಾಕ್ಸ್ ಕಾನ್ ಕಂಪನಿಯಿಂದ 22,000 ಕೋಟಿ ರೂ. ಈ ಕಂಪನಿಯು ತೈವಾನಿನಿಂದ ಹೊರಗೆ ಇದೇ ಮೊದಲ ಬಾರಿಗೆ ಅತ್ಯಂತ ಬೃಹತ್ತಾದ ಮೊಬೈಲ್ ಪೋನ್ ತಯಾರಿಕಾ ಘಟಕವನ್ನು ಸ್ಥಾಪಿಸಿದ್ದು, ಸದ್ಯದಲ್ಲೇ ಉತ್ಪಾದನೆ ಆರಂಭಿಸಲಿದೆ. ಇಲ್ಲಿ ಪ್ರತೀ ವರ್ಷ 20 ಮಿಲಿಯನ್ (2 ಕೋಟಿ) ಮೊಬೈಲ್ ಪೋನುಗಳನ್ನು ತಯಾರಿಸಲಾಗುವುದು. ಎನ್.ಎಕ್ಸ್.ಪಿ ಸೆಮಿ ಕಂಡಕ್ಟರ್ಸ್ ನಿಂದ 1 ಬಿಲಿಯನ್ ಡಾಲರ್ ಹೂಡಿಕೆ. ಟೊಯೋಟಾ ಕಿರ್ಲೋಸ್ಕರ್ ಕಂಪನಿಯಿಂದ 3,700 ಕೋಟಿ ರೂ.: ಟೊಯೋಟಾ ಕಂಪನಿಯು ತನ್ನ ಉತ್ಪಾದನಾ ಘಟಕವನ್ನು ವಿಸ್ತರಿಸಲು ಈ ಹೂಡಿಕೆ ಮಾಡುತ್ತಿದೆ ಎಂದು ತಿಳಿಸಿದರು.
ಸಂವರ್ಧನ ಮದರ್ಸನ್ ಕಂಪನಿಯಿಂದ 3,700 ಕೋಟಿ ರೂ.: ಈ ಕಂಪನಿಯು ಎಲೆಕ್ಟ್ರಾನಿಕ್ ಬಿಡಿಭಾಗಗಳನ್ನು ಉತ್ಪಾದಿಸಲಿದೆ. ಎಮ್ವೀ ಎನರ್ಜಿ ಪ್ರೈವೇಟ್ ಲಿಮಿಟೆಡ್ ನಿಂದ 5,000 ಕೋಟಿ ರೂ. ಈ ಕಂಪನಿಯು ಸೋಲಾರ್ ಸೆಲ್ ಗಳನ್ನು ಉತ್ಪಾದಿಸಲಿದೆ. ಕ್ರೋನ್ಸ್ ಕಂಪನಿಯಿಂದ 315 ಕೋಟಿ ರೂ. ಬಾಟ್ಲಿಂಗ್ & ಪ್ಯಾಕೇಜಿಂಗ್ ಸಾಧನಗಳ ಉತ್ಪಾದನೆಯ ಉದ್ದೇಶ ಹೊಂದಲಾಗಿದೆ.
ಸನ್ಸೇರಾ ಕಂಪನಿಯಿಂದ 2,150 ಕೋಟಿ ರೂ. ಆಟೋಮೋಟೀವ್ ಮತ್ತು ನಾನ್-ಆಟೋಮೋಟೀವ್ ಬಿಡಿಭಾಗಗಳ ಉತ್ಪಾದನೆ. ಡಿಎನ್ ಸೊಲ್ಯೂಷನ್ಸ್ ನಿಂದ 998 ಕೋಟಿ ರೂ: ಮಶೀನ್ ಟೂಲ್ ಉತ್ಪಾದನೆ. ಎಪ್ಸಿಲಾನ್ ಗ್ರೂಪ್ ನಿಂದ 15,350 ಕೋಟಿ ರೂ: ಆನೋಡ್ ಮತ್ತು ಕ್ಯಾಥೋಡ್ ಮೆಟೀರಿಯಲ್ಸ್ ಉತ್ಪಾದನೆ. ಜಿಂದಾಲ್ ಎನರ್ಜಿ ಕಂಪನಿಯಿಂದ 4,960 ಕೋಟಿ ರೂ: 600 ಮೆಗಾವ್ಯಾಟ್ ಪವನ ವಿದ್ಯುತ್ ಉತ್ಪಾದನಾ ಸ್ಥಾವರ ಸ್ಥಾಪನೆ. ಜಪಾನಿನ ನೈಡೆಕ್ ಕಂಪನಿಯು ಹುಬ್ಬಳ್ಳಿ- ಧಾರವಾಡದಲ್ಲಿ 600 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡಿದೆ. ಇದರ ಉದ್ಘಾಟನೆ ಇತ್ತೀಚೆಗೆ ನಡೆಸಲಾಗಿದೆ ಎಂದು ತಿಳಿಸಿದರು
ಭಾರತೀಯ ಅನಿಲ ಪ್ರಾಧಿಕಾರವು ರಾಜ್ಯದಲ್ಲಿ 1,000 ಮೆಗಾವ್ಯಾಟ್ ಸಾಮಥ್ರ್ಯದ ರೆನ್ಯೂಬಲ್ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆಗೆ ಮುಂದಾಗಿದ್ದು, 5,000 ಕೋಟಿ ರೂಪಾಯಿ ಬಂಡವಾಳ ಹೂಡಿಕೆಗೆ ಒಡಂಬಡಿಕೆ ಆಗಿದೆ. ಬೆಂಗಳೂರು, ವೈಮಾನಿಕ ವಲಯದಲ್ಲಿ ಈಗ ‘ASIAದ ಎಂ.ಆರ್.ಓ. (ಮೈಂಟೆನೆನ್ಸ್, ರಿಪೇರ್ ರಾಜಧಾನಿ’ಯಾಗಿ ಅಭಿವೃದ್ದಿ ಆಗಲಿದೆ. ಇದಕ್ಕೆ ತಕ್ಕಂತೆ ಏರ್ ಇಂಡಿಯಾ, ಇಂಡಿಗೋ ಮತ್ತು ಲಾಕಿನ್ ಮಾರ್ಟಿನ್ ಕಂಪನಿಗಳು ರಾಜ್ಯದಲ್ಲಿ ತಮ್ಮ ಎಂ ಆರ್ ಒ ಘಟಕಗಳನ್ನು ಸ್ಥಾಪಿಸುತ್ತಿವೆ. ಇದಕ್ಕೆ ಏರ್ ಇಂಡಿಯಾ – ರೂ.1450 ಕೋಟಿ, ಇಂಡಿಗೋ ರೂ.1,100 ಕೋಟಿ, ಲೋಕಿನ್ ಮಾರ್ಟಿನ್ – ರೂ.500 ಕೋಟಿ ಹೂಡಿಕೆ ಮಾಡಿವೆ. ಐ.ಕೆ.ಎಫ್. (ಇನ್ವೆಸ್ಟ್ ಕರ್ನಾಟಕ ಫೋರಂ) ಅನ್ನು ಪುನರ್ ರಚನೆ ಮಾಡಿ, ಐ.ಎ.ಎಸ್. ಅಧಿಕಾರಿಯನ್ನು ಅದರ ಸಿ.ಇ.ಒ ಮಾಡಲಾಗಿದೆ. ಉದ್ಯಮದ ಅನುಭವ ಇರುವವರನ್ನು ನೇಮಕ ಮಾಡಿಕೊಂಡು, ಹೆಚ್ಚು ಹೆಚ್ಚು ಹೂಡಿಕೆ ಬರುವ ಹಾಗೆ ಮಾಡಲಾಗುವುದು ಎಂದು ತಿಳಿಸಿದರು.
ಕೆ.ಐ.ಎ.ಡಿ.ಬಿ. ಸುಧಾರಣೆಗಳು:
ಇಂಡಸ್ಟ್ರಿಯಲ್ ಏರಿಯಾಗಳಿಗೆ ನದಿ ಮೂಲಗಳಿಂದ ನೀರು ಒದಗಿಸಲು 3,600 ಕೋಟಿ ರೂ. ಮೊತ್ತದ ಸಮಗ್ರ ಯೋಜನೆ ರೂಪಿಸಲಾಗಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಫಾರ್ಮಾ ಪಾರ್ಕ್, ವಿಜಯಪುರದಲ್ಲಿ ಸೋಲಾರ್ ಸೆಲ್ ಪಾರ್ಕ್, ಚಿತ್ರದುರ್ಗದಲ್ಲಿ ಡ್ರೋನ್ ಪಾರ್ಕ್, ಡಾಬಸ್ಪೇಟೆಗೆ ಸಮೀಪದ ಹನುಮಂತಪುರದಲ್ಲಿ ಮೆಗಾ ಲಾಜಿಸ್ಟಿಕ್ಸ್ ಪಾರ್ಕ್, ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆಯಲ್ಲಿ ಡೀಪ್-ಟೆಕ್ ಪಾರ್ಕ್, ಹುಬ್ಬಳ್ಳಿಯಲ್ಲಿ 200 ಎಕರೆ ಜಾಗದಲ್ಲಿ ಸ್ಟಾರ್ಟಪ್ ಪಾರ್ಕ್, ಬಳ್ಳಾರಿ ಜಿಲ್ಲೆಯ ಸಂಜೀವರಾಯನ ಕೋಟೆಯಲ್ಲಿ 154 ಎಕರೆಯಲ್ಲಿ ಜೀನ್ಸ್ ಪಾರ್ಕ್ ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ಡಾಬಸಪೇಟೆ- ದೊಡ್ಡಬಳ್ಳಾಪುರ ರಸ್ತೆಯಲ್ಲಿ 40,000 ಕೋಟಿ ರೂ. ಹೂಡಿಕೆಯೊಂದಿಗೆ 5,000 ಎಕರೆಯಲ್ಲಿ ಕ್ವಿನ್ ಸಿಟಿ ನಿರ್ಮಿಸಲಾಗುತ್ತದೆ. ನವೋದ್ಯಮಗಳ ಹಬ್ ಆಗಿ ಬೆಂಗಳೂರಿಗೆ ಸಮೀಪದಲ್ಲಿ 1,000 ಎಕರೆ ವಿಸ್ತೀರ್ಣದಲ್ಲಿ ಸ್ವಿಫ್ಟ್ ಸಿಟಿ ನಿರ್ಮಿಸಲಾಗುವುದು. ಇಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಡೇಟಾ ಅನಲಿಟಿಕ್ಸ್, ಫಿನ್ ಟೆಕ್ ಉದ್ಯಮಗಳು ನೆಲೆಯೂರುವಂತೆ ಮಾಡಲಾಗುವುದು.
ಬೆಂಗಳೂರಿನಲ್ಲಿ ಎನ್.ಜಿ.ಇ.ಎಫ್. ಕಾರ್ಖಾನೆ ಇದ್ದ ಜಾಗದಲ್ಲಿ 105 ಎಕರೆ ಜಾಗದಲ್ಲಿ ಟ್ರೀ ಪಾರ್ಕ್ ಅಭಿವೃದ್ಧಿ ಪಡಿಸಲಾಗುತ್ತಿದೆ. ಎಂ.ಎಸ್.ಐ.ಎಲ್. ಮೂಲಕ 200 ಐಷಾರಾಮಿ ಬೌಟಿಕ್, ಪ್ರವಾಸ ಪ್ಯಾಕೇಜ್ ರೂಪಿಸಲಾಗಿದೆ. ಸದ್ಯದಲ್ಲೇ 4 ಹಂತಗಳಲ್ಲಿ ಇ-ಕಾಮರ್ಸ್ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಜತೆಗೆ ವಾರ್ಷಿಕ 10,000 ಕೋಟಿ ರೂ. ವಹಿವಾಟಿನ ಗುರಿಯುಳ್ಳ ಚಿಟ್ ಫಂಡ್ ವ್ಯವಹಾರಕ್ಕೆ ಸದ್ಯದಲ್ಲೇ ಚಾಲನೆ ನೀಡಲಾಗುತ್ತಿದೆ ಎಂದರು
ಕೆ.ಎಸ್.ಡಿ.ಎಲ್: 2024-25ರಲ್ಲಿ 1,700 ಕೋಟಿ ರೂ.ಗೂ ಹೆಚ್ಚಿನ ವಹಿವಾಟು ನಡೆಸಿದ್ದು, 416 ಕೋಟಿ ರೂ. ಲಾಭದ ಸಾರ್ವತ್ರಿಕ ದಾಖಲೆ ಬರೆದಿದೆ. ಪ್ರೀಮಿಯಂ ಸೋಪ್, ಶೆವರ್ ಜೆಲ್, ಹ್ಯಾಂಡ್ ವಾಶ್, ಕುಡಿಯುವ ನೀರು ಹೀಗೆ 21 ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗಿದ್ದು, ಸದ್ಯದಲ್ಲೇ ಸುಗಂಧ ದ್ರವ್ಯಗಳನ್ನೂ ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ. 2028ರ ಹೊತ್ತಿಗೆ ಸಂಸ್ಥೆಯ ವಹಿವಾಟನ್ನು ವಾರ್ಷಿಕ 5,000 ಕೋಟಿ ರೂ.ಗೆ ಕೊಂಡೊಯ್ಯಲಾಗುವುದು.
ಹುಬ್ಬಳ್ಳಿ ಎನ್.ಜಿ.ಇ.ಎಫ್. ಈಗ ಲಾಭದತ್ತ ಮುಖ ಮಾಡಿದೆ. ಸದ್ಯ ಅದರ ಟ್ರಾನ್ಸ್ ಫಾರ್ಮರ್ಸ್ ದೇಶದಲ್ಲಿ ಮಾತ್ರವಲ್ಲ, ವಿದೇಶಕ್ಕೂ ರಫ್ತಾಗುತ್ತಿವೆ. ಬೇಡಿಕೆ ಹೆಚ್ಚಿದೆ. ಅದಕ್ಕೆ ಪೂರಕವಾಗಿ ಎನ್.ಜಿ.ಇ.ಎಫ್. ಪುನಶ್ಚೇತನ ಮಾಡುವ ನಿಟ್ಟಿನಲ್ಲಿ ಹಣಕಾಸು ಇಲಾಖೆ ಜತೆಗೂ ಹಲವು ಸುತ್ತಿನ ಮಾತುಕತೆ ನಡೆದಿದೆ ಎಂದು ತಿಳಿಸಿದರು. ಇಂದು