Live Stream

[ytplayer id=’22727′]

| Latest Version 8.0.1 |

State News

2 ವರ್ಷಗಳಲ್ಲಿ ರೂ. 6,57,660 ಕೋಟಿ ಹೂಡಿಕೆ – 2,32,771 ಉದ್ಯೋಗ ಸೃಷ್ಟಿ : ಸಚಿವ ಎಂ.ಬಿ. ಪಾಟೀಲ್

2 ವರ್ಷಗಳಲ್ಲಿ ರೂ. 6,57,660 ಕೋಟಿ ಹೂಡಿಕೆ – 2,32,771 ಉದ್ಯೋಗ ಸೃಷ್ಟಿ : ಸಚಿವ ಎಂ.ಬಿ. ಪಾಟೀಲ್

ಕಳೆದ 2 ವರ್ಷಗಳಲ್ಲಿ ರಾಜ್ಯದಲ್ಲಿ ರೂ. 6,57,660 ಕೋಟಿ ಹೂಡಿಕೆಗೆ 115 ಒಡಂಬಡಿಕೆಗಳನ್ನು (MoU) ಮಾಡಿಕೊಳ್ಳಲಾಗಿದೆ. ಇದರಿಂದ ರಾಜ್ಯದಲ್ಲಿ ಸುಮಾರು 2,32,771 ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದರು.

ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಎರಡು ವರ್ಷಗಳ ಸಾಧನೆಯ “ಪ್ರಗತಿ ಪಥದ ಮುಂದಣ ಹೆಜ್ಜೆ” ಪುಸ್ತಕ ಬಿಡುಗಡೆ ಮಾಡಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿಗಳಲ್ಲಿ 906 ಬಂಡವಾಳ ಹೂಡಿಕೆ ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ಇವುಗಳಿಂದ ಸುಮಾರು ರೂ.1,13,200 ಕೋಟಿ ಬಂಡವಾಳ ಹೂಡಿಕೆಯಾಗಲಿದ್ದು, 2,23,982 ಜನರಿಗೆ ಉದ್ಯೋಗವಕಾಶ ಲಭ್ಯವಾಗಲಿದೆ ಎಂದು ತಿಳಿಸಿದರು.

ಫೆಬ್ರವರಿ-2025ರ ಮಾಹೆಯಲ್ಲಿ “ಇನ್ವೆಸ್ಟ್ ಕರ್ನಾಟಕ-2025″ನ್ನು ಆಯೋಜಿಸಲಾಗಿದ್ದು, ಇದರಲ್ಲಿ ಒಟ್ಟು 3,250 ಉದ್ದಿಮೆದಾರರು ಭಾಗವಹಿಸಿದ್ದು, ಒಟ್ಟು 98 ಕಂಪನಿಗಳೊಂದಿಗೆ ರೂ. 6,23,970 ಕೋಟಿ ಹೂಡಿಕೆಯ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಹಾಗೂ ರೂ. 4,03,533 ಕೋಟಿ ಹೂಡಿಕೆ ಮಾಡಲು 1101 ಕಂಪನಿಗಳು ಸಂಬಂಧಿಸಿದ ವಿವಿಧ ಸಮಿತಿಗಳಿಂದ ಅನುಮೋದನೆ ಪಡೆದಿರುತ್ತಾರೆ. ಈ ಯೋಜನೆಗಳಿಂದ ಅಂದಾಜು 6,00,000 ಗಳಷ್ಟು ಉದ್ಯೋಗ ಸೃಜನೆ ನಿರೀಕ್ಷಿಸಲಾಗಿದೆ. ಇವುಗಳಲ್ಲಿ ಶೇ.75 ರಷ್ಟು ಬೆಂಗಳೂರಿನ ಹೊರಗೆ, ಆ ಪೈಕಿ ಶೇ. 45ರಷ್ಟು ಉತ್ತರ ಕರ್ನಾಟಕ ಭಾಗದಲ್ಲಿವೆ ಎಂದರು.

ರಾಜ್ಯದಲ್ಲಿ ರೂ.7.50 ಲಕ್ಷ ಕೋಟಿ ಹೂಡಿಕೆಗಳನ್ನು ಆಕರ್ಷಿಸಲು ಹಾಗೂ 20 ಲಕ್ಷ ಜನರಿಗೆ ಉದ್ಯೋಗ ಸೃಷ್ಟಿಸುವ ಉದ್ದೇಶದೊಂದಿಗೆ ಹೊಸ ಕೈಗಾರಿಕಾ ನೀತಿ 2025-30ನ್ನು ಹೊರತರಲಾಗಿದೆ. ಹೂಡಿಕೆದಾರರಿಗೆ ಕ್ಯಾಪೆಕ್ಸ್ ಸಬ್ಸಿಡಿ ಅಥವಾ ಪಿ.ಎಲ್.ಐ ನಡುವೆ ಆಯ್ಕೆ ಮಾಡಲು ಅವಕಾಶವಿರುತ್ತದೆ ಮತ್ತು ರಾಜ್ಯದ ಸಮತೋಲನ ಕೈಗಾರಿಕಾ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಕೈಗಾರಿಕಾ ಕ್ಷೇತ್ರದಲ್ಲಿ ಹಿಂದುಳಿದ ಜಿಲ್ಲೆಗಳು / ತಾಲ್ಲೂಕುಗಳು ಹೂಡಿಕೆಗಳನ್ನು ಆಕರ್ಷಿಸಲು ಹೆಚ್ಚಿನ ಪೋತ್ಸಾಹವನ್ನು ನೀಡಲಾಗುತ್ತದೆ.

ಕ್ಲೀನ್ ಮೊಬಿಲಿಟಿ ವಾಹನ ಮೌಲ್ಯ ಸರಪಳಿಯಲ್ಲಿ ರೂ 50,000 ಕೋಟಿ ಹೂಡಿಕೆಗಳನ್ನು ಆಕರ್ಷಿಸುವ ಹಾಗೂ ಸರಿಸುಮಾರು 100,000 ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಉದ್ದೇಶದೊಂದಿಗೆ ಕರ್ನಾಟಕ ಕ್ಲೀನ್ ಮೊಬಿಲಿಟಿ ಪಾಲಿಸಿ-2025-30ನ್ನು ಹೊರತರಲಾಗಿದೆ. ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ಅಧಿನಿಯಮದಡಿ 44,165 ಎಕರೆ ಪ್ರದೇಶವುಳ್ಳ 18 ಕೈಗಾರಿಕಾ ಪ್ರದೇಶಗಳನ್ನು ವಿಶೇಷ ಹೂಡಿಕೆ ಪ್ರದೇಶವೆಂದು (SIR) ಘೋಷಿಸಲಾಗಿದೆ ಎಂದು ತಿಳಿಸಿದರು.

ಮೊದಲನೇ ಹಂತದಲ್ಲಿ ಸುಮಾರು 2000 ಎಕರೆ ಪ್ರದೇಶದಲ್ಲಿ ಬೆಂಗಳೂರಿನ ದೊಡ್ಡಬಳ್ಳಾಪುರ-ದಾಬಸ್‍ಪೇಟೆ ರಸ್ತೆಯಲ್ಲಿ ಅಂದಾಜು ರೂ.40,000 ಕೋಟಿ ಬಂಡವಾಳ ಹೂಡಿಕೆಯೊಂದಿಗೆ, ಸುಮಾರು 80,000 ಉದ್ಯೋಗ ಸೃಜನೆಯಾಗಲಿರುವ Knowledge, Wellbeing Innovation (KWIN) City ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ. 2017-18, 2018-19 ಮತ್ತು 2019-20ನೇ ಸಾಲಿನಲ್ಲಿ ರಫ್ತು ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ರಾಜ್ಯದ 68 ಶ್ರೇಷ್ಠ ರಫ್ತುದಾರರಿಗೆ ರಾಜ್ಯ ಶ್ರೇಷ್ಠ ರಫ್ತು ಪ್ರಶಸ್ತಿಗಳನ್ನು 2023-24 ನೇ ಸಾಲಿನಲ್ಲಿ ಪ್ರಧಾನ ಮಾಡಲಾಗಿರುತ್ತದೆ.

ಇಲಾಖಾ ಸಚಿವರ ಅಧ್ಯಕ್ಷತೆಯಲ್ಲಿ Strategic Investments Committee ಯನ್ನು ಹಾಗೂAerospace & Defence, ESDM, Auto/EV, Machine Tools, Pharma, Core Manufacturing, Industry 5.O, ಜವಳಿ ಮತ್ತು ಗ್ರೀನ್ ಎನರ್ಜಿ ವಲಯಗಳಲ್ಲಿ 9 ವಿಷನ್ ಗ್ರೂಪ್‍ಗಳನ್ನು ರಚಿಸಲಾಗಿದೆ. ಅಲ್ಲದೇ ಕರ್ನಾಟಕ ರಾಜ್ಯವು 2023-24ನೇ ಸಾಲಿನಲ್ಲಿ ರೂ. 54,427 ಕೋಟಿ ವಿದೇಶಿ ಹೂಡಿಕೆ ಆಕರ್ಷಿಸಿ, ದೇಶದಲ್ಲಿ 3ನೇ ಸ್ಥಾನದಲ್ಲಿದ್ದು ಹಾಗೂ 2024-25ನೇ ಸಾಲಿನಲ್ಲಿ ರೂ.56,030 ಕೋಟಿ ವಿದೇಶಿ ಹೂಡಿಕೆ ಆಕರ್ಷಿಸುವುದರೊಂದಿಗೆ ದೇಶದಲ್ಲಿ 2ನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.

2023-24ನೇ ಸಾಲಿನಲ್ಲಿ ರಾಜ್ಯವು 166,545 ಮಿಲಿಯನ್ ಯುಎಸ್ ಡಾಲರ್ ರಫ್ತು ಮಾಡುವುದರೊಂದಿಗೆ ಒಟ್ಟಾರೆ ರಫ್ತಿನಲ್ಲಿ 1ನೇ ಸ್ಥಾನದಲ್ಲಿದೆ. ಸೇವಾ ವಲಯಗಳಲ್ಲಿ 1,39,914 ಮಿಲಿಯನ್ ಯುಎಸ್ ಡಾಲರ್ ರಫ್ತು ಮಾಡುವುದರೊಂದಿಗೆ 1ನೇ ಸ್ಥಾನ ಹಾಗೂ ಸರಕು ರಫ್ತಿನಲ್ಲಿ 26,631 ಮಿಲಿಯನ್ ಯುಎಸ್ ಡಾಲರ್ ರಫ್ತು ಮಾಡುವುದರೊಂದಿಗೆ 4ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಅತ್ಯಾಧುನಿಕ ಏಕಗವಾಕ್ಷಿ ಪೋರ್ಟಲ್ ಅನ್ನು ಮೈಕ್ರೋಸಾಫ್ಟ್ ವತಿಯಿಂದ ಅಭಿವೃದ್ಧಿಪಡಿಸಿದ್ದು, ಸುಮಾರು 30 ಇಲಾಖೆಗಳ 100ಕ್ಕೂ ಹೆಚ್ಚು ಅನುಮೋದನೆ / ಹಂಚಿಕೆ / ಅನುಮತಿ / ನಿರಾಪೇಕ್ಷಣಾ ಸೇವೆಗಳನ್ನು ಏಕೀಕರಣ (ಇಂಟಿಗ್ರೇಟ್) ಮಾಡಲಾಗಿದೆ. ಫೆಬ್ರವರಿ 2025ರಲ್ಲಿ ನಡೆದ ಇನ್ವೆಸ್ಟ್ ಕರ್ನಾಟಕ 2025ರಲ್ಲಿ ಸದರಿ ಪೋರ್ಟಲ್ ಲೋಕಾರ್ಪಣೆ ಮಾಡಲಾಗಿದೆ.

ತಯಾರಿಕಾ ವಲಯದ ಬಲವರ್ಧನೆಗೆ ಆಗಬೇಕಾದ ಕಾಯಕಲ್ಪ ಕುರಿತು ದಿನಾಂಕ 10.06.2025 ರಂದು ನಡೆದ “ಉತ್ಪಾದನಾ ಮಂಥನ” ಸಮಾವೇಶದಲ್ಲಿ ಚರ್ಚಿಸಲಾಗಿದ್ದು, ಅದರಲ್ಲಿ 6 ಪ್ರಮುಖ ವಲಯಗಳನ್ನು ಗುರುತಿಸಿದ್ದು, ಅವುಗಳು ಏರೋಸ್ಪೇಸ್, ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್, ಕ್ಯಾಪಿಟಲ್ ಗೂಡ್ಸ್ ಮತ್ತು ರೋಬೋಟಿಕ್ಸ್, ಆಟೋ ಮತ್ತು ಎಲೆಕ್ಟ್ರಿಕ್ ವಾಹನಗಳು, ಜವಳಿ ಹಾಗೂ ಎಫ್.ಎಂ.ಸಿ.ಜಿ ಆಗಿರುತ್ತವೆ. ಈ ಸಮಾವೇಶದಲ್ಲಿ 60 ಪ್ರಮುಖ ಕಂಪನಿಗಳ 80 ಸಿಇಒಗಳು ಭಾಗವಹಿಸಿದ್ದರು ಎಂದು ತಿಳಿಸಿದರು.

ಎರಡು ವರ್ಷಗಳಲ್ಲಿ ನನಸಾಗಿರುವ ಕಂಪನಿಗಳ ಹೂಡಿಕೆ :
ಫಾಕ್ಸ್ ಕಾನ್ ಕಂಪನಿಯಿಂದ 22,000 ಕೋಟಿ ರೂ. ಈ ಕಂಪನಿಯು ತೈವಾನಿನಿಂದ ಹೊರಗೆ ಇದೇ ಮೊದಲ ಬಾರಿಗೆ ಅತ್ಯಂತ ಬೃಹತ್ತಾದ ಮೊಬೈಲ್ ಪೋನ್ ತಯಾರಿಕಾ ಘಟಕವನ್ನು ಸ್ಥಾಪಿಸಿದ್ದು, ಸದ್ಯದಲ್ಲೇ ಉತ್ಪಾದನೆ ಆರಂಭಿಸಲಿದೆ. ಇಲ್ಲಿ ಪ್ರತೀ ವರ್ಷ 20 ಮಿಲಿಯನ್ (2 ಕೋಟಿ) ಮೊಬೈಲ್ ಪೋನುಗಳನ್ನು ತಯಾರಿಸಲಾಗುವುದು. ಎನ್.ಎಕ್ಸ್.ಪಿ ಸೆಮಿ ಕಂಡಕ್ಟರ್ಸ್ ನಿಂದ 1 ಬಿಲಿಯನ್ ಡಾಲರ್ ಹೂಡಿಕೆ. ಟೊಯೋಟಾ ಕಿರ್ಲೋಸ್ಕರ್ ಕಂಪನಿಯಿಂದ 3,700 ಕೋಟಿ ರೂ.: ಟೊಯೋಟಾ ಕಂಪನಿಯು ತನ್ನ ಉತ್ಪಾದನಾ ಘಟಕವನ್ನು ವಿಸ್ತರಿಸಲು ಈ ಹೂಡಿಕೆ ಮಾಡುತ್ತಿದೆ ಎಂದು ತಿಳಿಸಿದರು.

ಸಂವರ್ಧನ ಮದರ್ಸನ್ ಕಂಪನಿಯಿಂದ 3,700 ಕೋಟಿ ರೂ.: ಈ ಕಂಪನಿಯು ಎಲೆಕ್ಟ್ರಾನಿಕ್ ಬಿಡಿಭಾಗಗಳನ್ನು ಉತ್ಪಾದಿಸಲಿದೆ. ಎಮ್ವೀ ಎನರ್ಜಿ ಪ್ರೈವೇಟ್ ಲಿಮಿಟೆಡ್ ನಿಂದ 5,000 ಕೋಟಿ ರೂ. ಈ ಕಂಪನಿಯು ಸೋಲಾರ್ ಸೆಲ್ ಗಳನ್ನು ಉತ್ಪಾದಿಸಲಿದೆ. ಕ್ರೋನ್ಸ್ ಕಂಪನಿಯಿಂದ 315 ಕೋಟಿ ರೂ. ಬಾಟ್ಲಿಂಗ್ & ಪ್ಯಾಕೇಜಿಂಗ್ ಸಾಧನಗಳ ಉತ್ಪಾದನೆಯ ಉದ್ದೇಶ ಹೊಂದಲಾಗಿದೆ.

ಸನ್ಸೇರಾ ಕಂಪನಿಯಿಂದ 2,150 ಕೋಟಿ ರೂ. ಆಟೋಮೋಟೀವ್ ಮತ್ತು ನಾನ್-ಆಟೋಮೋಟೀವ್ ಬಿಡಿಭಾಗಗಳ ಉತ್ಪಾದನೆ. ಡಿಎನ್ ಸೊಲ್ಯೂಷನ್ಸ್ ನಿಂದ 998 ಕೋಟಿ ರೂ: ಮಶೀನ್ ಟೂಲ್ ಉತ್ಪಾದನೆ. ಎಪ್ಸಿಲಾನ್ ಗ್ರೂಪ್ ನಿಂದ 15,350 ಕೋಟಿ ರೂ: ಆನೋಡ್ ಮತ್ತು ಕ್ಯಾಥೋಡ್ ಮೆಟೀರಿಯಲ್ಸ್ ಉತ್ಪಾದನೆ. ಜಿಂದಾಲ್ ಎನರ್ಜಿ ಕಂಪನಿಯಿಂದ 4,960 ಕೋಟಿ ರೂ: 600 ಮೆಗಾವ್ಯಾಟ್ ಪವನ ವಿದ್ಯುತ್ ಉತ್ಪಾದನಾ ಸ್ಥಾವರ ಸ್ಥಾಪನೆ. ಜಪಾನಿನ ನೈಡೆಕ್ ಕಂಪನಿಯು ಹುಬ್ಬಳ್ಳಿ- ಧಾರವಾಡದಲ್ಲಿ 600 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡಿದೆ. ಇದರ ಉದ್ಘಾಟನೆ ಇತ್ತೀಚೆಗೆ ನಡೆಸಲಾಗಿದೆ ಎಂದು ತಿಳಿಸಿದರು

ಭಾರತೀಯ ಅನಿಲ ಪ್ರಾಧಿಕಾರವು ರಾಜ್ಯದಲ್ಲಿ 1,000 ಮೆಗಾವ್ಯಾಟ್ ಸಾಮಥ್ರ್ಯದ ರೆನ್ಯೂಬಲ್ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆಗೆ ಮುಂದಾಗಿದ್ದು, 5,000 ಕೋಟಿ ರೂಪಾಯಿ ಬಂಡವಾಳ ಹೂಡಿಕೆಗೆ ಒಡಂಬಡಿಕೆ ಆಗಿದೆ. ಬೆಂಗಳೂರು, ವೈಮಾನಿಕ ವಲಯದಲ್ಲಿ ಈಗ ‘ASIAದ ಎಂ.ಆರ್.ಓ. (ಮೈಂಟೆನೆನ್ಸ್, ರಿಪೇರ್ ರಾಜಧಾನಿ’ಯಾಗಿ ಅಭಿವೃದ್ದಿ ಆಗಲಿದೆ. ಇದಕ್ಕೆ ತಕ್ಕಂತೆ ಏರ್ ಇಂಡಿಯಾ, ಇಂಡಿಗೋ ಮತ್ತು ಲಾಕಿನ್ ಮಾರ್ಟಿನ್ ಕಂಪನಿಗಳು ರಾಜ್ಯದಲ್ಲಿ ತಮ್ಮ ಎಂ ಆರ್ ಒ ಘಟಕಗಳನ್ನು ಸ್ಥಾಪಿಸುತ್ತಿವೆ. ಇದಕ್ಕೆ ಏರ್ ಇಂಡಿಯಾ – ರೂ.1450 ಕೋಟಿ, ಇಂಡಿಗೋ ರೂ.1,100 ಕೋಟಿ, ಲೋಕಿನ್ ಮಾರ್ಟಿನ್ – ರೂ.500 ಕೋಟಿ ಹೂಡಿಕೆ ಮಾಡಿವೆ. ಐ.ಕೆ.ಎಫ್. (ಇನ್ವೆಸ್ಟ್ ಕರ್ನಾಟಕ ಫೋರಂ) ಅನ್ನು ಪುನರ್ ರಚನೆ ಮಾಡಿ, ಐ.ಎ.ಎಸ್. ಅಧಿಕಾರಿಯನ್ನು ಅದರ ಸಿ.ಇ.ಒ ಮಾಡಲಾಗಿದೆ. ಉದ್ಯಮದ ಅನುಭವ ಇರುವವರನ್ನು ನೇಮಕ ಮಾಡಿಕೊಂಡು, ಹೆಚ್ಚು ಹೆಚ್ಚು ಹೂಡಿಕೆ ಬರುವ ಹಾಗೆ ಮಾಡಲಾಗುವುದು ಎಂದು ತಿಳಿಸಿದರು.

ಕೆ.ಐ.ಎ.ಡಿ.ಬಿ. ಸುಧಾರಣೆಗಳು:
ಇಂಡಸ್ಟ್ರಿಯಲ್ ಏರಿಯಾಗಳಿಗೆ ನದಿ ಮೂಲಗಳಿಂದ ನೀರು ಒದಗಿಸಲು 3,600 ಕೋಟಿ ರೂ. ಮೊತ್ತದ ಸಮಗ್ರ ಯೋಜನೆ ರೂಪಿಸಲಾಗಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಫಾರ್ಮಾ ಪಾರ್ಕ್, ವಿಜಯಪುರದಲ್ಲಿ ಸೋಲಾರ್ ಸೆಲ್ ಪಾರ್ಕ್, ಚಿತ್ರದುರ್ಗದಲ್ಲಿ ಡ್ರೋನ್ ಪಾರ್ಕ್, ಡಾಬಸ್‍ಪೇಟೆಗೆ ಸಮೀಪದ ಹನುಮಂತಪುರದಲ್ಲಿ ಮೆಗಾ ಲಾಜಿಸ್ಟಿಕ್ಸ್ ಪಾರ್ಕ್, ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆಯಲ್ಲಿ ಡೀಪ್-ಟೆಕ್ ಪಾರ್ಕ್, ಹುಬ್ಬಳ್ಳಿಯಲ್ಲಿ 200 ಎಕರೆ ಜಾಗದಲ್ಲಿ ಸ್ಟಾರ್ಟಪ್ ಪಾರ್ಕ್, ಬಳ್ಳಾರಿ ಜಿಲ್ಲೆಯ ಸಂಜೀವರಾಯನ ಕೋಟೆಯಲ್ಲಿ 154 ಎಕರೆಯಲ್ಲಿ ಜೀನ್ಸ್ ಪಾರ್ಕ್ ಸ್ಥಾಪಿಸಲಾಗುವುದು ಎಂದು ತಿಳಿಸಿದರು.

ಡಾಬಸಪೇಟೆ- ದೊಡ್ಡಬಳ್ಳಾಪುರ ರಸ್ತೆಯಲ್ಲಿ 40,000 ಕೋಟಿ ರೂ. ಹೂಡಿಕೆಯೊಂದಿಗೆ 5,000 ಎಕರೆಯಲ್ಲಿ ಕ್ವಿನ್ ಸಿಟಿ ನಿರ್ಮಿಸಲಾಗುತ್ತದೆ. ನವೋದ್ಯಮಗಳ ಹಬ್ ಆಗಿ ಬೆಂಗಳೂರಿಗೆ ಸಮೀಪದಲ್ಲಿ 1,000 ಎಕರೆ ವಿಸ್ತೀರ್ಣದಲ್ಲಿ ಸ್ವಿಫ್ಟ್ ಸಿಟಿ ನಿರ್ಮಿಸಲಾಗುವುದು. ಇಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಡೇಟಾ ಅನಲಿಟಿಕ್ಸ್, ಫಿನ್ ಟೆಕ್ ಉದ್ಯಮಗಳು ನೆಲೆಯೂರುವಂತೆ ಮಾಡಲಾಗುವುದು.

ಬೆಂಗಳೂರಿನಲ್ಲಿ ಎನ್.ಜಿ.ಇ.ಎಫ್. ಕಾರ್ಖಾನೆ ಇದ್ದ ಜಾಗದಲ್ಲಿ 105 ಎಕರೆ ಜಾಗದಲ್ಲಿ ಟ್ರೀ ಪಾರ್ಕ್ ಅಭಿವೃದ್ಧಿ ಪಡಿಸಲಾಗುತ್ತಿದೆ. ಎಂ.ಎಸ್.ಐ.ಎಲ್. ಮೂಲಕ 200 ಐಷಾರಾಮಿ ಬೌಟಿಕ್, ಪ್ರವಾಸ ಪ್ಯಾಕೇಜ್ ರೂಪಿಸಲಾಗಿದೆ. ಸದ್ಯದಲ್ಲೇ 4 ಹಂತಗಳಲ್ಲಿ ಇ-ಕಾಮರ್ಸ್ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಜತೆಗೆ ವಾರ್ಷಿಕ 10,000 ಕೋಟಿ ರೂ. ವಹಿವಾಟಿನ ಗುರಿಯುಳ್ಳ ಚಿಟ್ ಫಂಡ್ ವ್ಯವಹಾರಕ್ಕೆ ಸದ್ಯದಲ್ಲೇ ಚಾಲನೆ ನೀಡಲಾಗುತ್ತಿದೆ ಎಂದರು

ಕೆ.ಎಸ್.ಡಿ.ಎಲ್: 2024-25ರಲ್ಲಿ 1,700 ಕೋಟಿ ರೂ.ಗೂ ಹೆಚ್ಚಿನ ವಹಿವಾಟು ನಡೆಸಿದ್ದು, 416 ಕೋಟಿ ರೂ. ಲಾಭದ ಸಾರ್ವತ್ರಿಕ ದಾಖಲೆ ಬರೆದಿದೆ. ಪ್ರೀಮಿಯಂ ಸೋಪ್, ಶೆವರ್ ಜೆಲ್, ಹ್ಯಾಂಡ್ ವಾಶ್, ಕುಡಿಯುವ ನೀರು ಹೀಗೆ 21 ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗಿದ್ದು, ಸದ್ಯದಲ್ಲೇ ಸುಗಂಧ ದ್ರವ್ಯಗಳನ್ನೂ ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ. 2028ರ ಹೊತ್ತಿಗೆ ಸಂಸ್ಥೆಯ ವಹಿವಾಟನ್ನು ವಾರ್ಷಿಕ 5,000 ಕೋಟಿ ರೂ.ಗೆ ಕೊಂಡೊಯ್ಯಲಾಗುವುದು.

ಹುಬ್ಬಳ್ಳಿ ಎನ್.ಜಿ.ಇ.ಎಫ್. ಈಗ ಲಾಭದತ್ತ ಮುಖ ಮಾಡಿದೆ. ಸದ್ಯ ಅದರ ಟ್ರಾನ್ಸ್ ಫಾರ್ಮರ್ಸ್ ದೇಶದಲ್ಲಿ ಮಾತ್ರವಲ್ಲ, ವಿದೇಶಕ್ಕೂ ರಫ್ತಾಗುತ್ತಿವೆ. ಬೇಡಿಕೆ ಹೆಚ್ಚಿದೆ. ಅದಕ್ಕೆ ಪೂರಕವಾಗಿ ಎನ್.ಜಿ.ಇ.ಎಫ್. ಪುನಶ್ಚೇತನ ಮಾಡುವ ನಿಟ್ಟಿನಲ್ಲಿ ಹಣಕಾಸು ಇಲಾಖೆ ಜತೆಗೂ ಹಲವು ಸುತ್ತಿನ ಮಾತುಕತೆ ನಡೆದಿದೆ ಎಂದು ತಿಳಿಸಿದರು. ಇಂದು

ಮೂಲಸೌಕರ್ಯಗಳ ಇಲಾಖೆಯ ಕಾರ್ಯ ಪ್ರಗತಿ:
ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣಗಳನ್ನು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಾಗಿ ಮೇಲ್ದರ್ಜೆಗೇರಿಸುವ ಉದ್ದೇಶ ಇದೆ. ಇದಕ್ಕೆ ಕೇಂದ್ರಕ್ಕೆ ಸದ್ಯದಲ್ಲೇ ಪತ್ರ ಬರೆಯಲಾಗುವುದು. ಬೆಂಗಳೂರಿನಿಂದ ವಿಜಯಪುರ ಮತ್ತು ಬಾಗಲಕೋಟೆಗೆ ಈಗ ರೈಲು ಪ್ರಯಾಣಕ್ಕೆ 15 ಗಂಟೆಗಳ ಕಾಲ ಹಿಡಿಯುತ್ತದೆ. ಇದನ್ನು 10 ಗಂಟೆಗಳಿಗೆ ಇಳಿಸಲು ನೈರುತ್ಯ ರೈಲ್ವೆ ಅಧಿಕಾರಿಗಳ ಜತೆ ಹಲವು ಸಭೆಗಳನ್ನು ನಡೆಸಲಾಗಿದೆ. ಮುಂಬರುವ ದಿನಗಳಲ್ಲಿ ಇಲ್ಲಿ ರೈಲುಗಳು ಹುಬ್ಬಳ್ಳಿ ಬೈಪಾಸ್ ಮೂಲಕವೇ ಸಂಚರಿಸಲಿವೆ ಎಂದು ಹೇಳಿದರು.

ಪ್ರಗತಿಯಲ್ಲಿ 9 ರೈಲು ಮಾರ್ಗ ಯೋಜನೆಗಳು:
ರಾಜ್ಯ ಸರ್ಕಾರ ಮತ್ತು ರೈಲ್ವೆ ಸಚಿವಾಲಯದ ನಡುವೆ 50:50ರ ಅನುಪಾತದಲ್ಲಿ ವೆಚ್ಚ ಹಂಚಿಕೆ ಆಧರಿಸಿ 9 ರೈಲು ಮಾರ್ಗ ಯೋಜನೆಗಳು ಪ್ರಗತಿಯಲ್ಲಿ ಇದ್ದು ಆದಷ್ಟು ಬೇಗ ಮುಗಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಈ ಸಂಬಂಧವಾಗಿ ಕೇಂದ್ರ ರೈಲ್ವೆ ಖಾತೆ ಸಹಾಯಕ ಸಚಿವ ವಿ.ಸೋಮಣ್ಣ ಅವರೊಂದಿಗೆ ಸಭೆ; ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ. ಈ ಯೋಜನೆಗಳ ಒಟ್ಟು ವೆಚ್ಚ ರೂ. 12,147 ಕೋಟಿ. ಇದರಲ್ಲಿ ರಾಜ್ಯ ಸರ್ಕಾರದ ಪಾಲು ರೂ. 5,752 ಕೋಟಿ. ಅಗತ್ಯವಿರುವ ಕಡೆಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಲು ಕ್ರಮ ವಹಿಸಲಾಗಿದೆ.

ರೈಲ್ವೆ ರಸ್ತೆ ಮೇಲ್ಸೇತುವೆ/ಕೆಳಸೇತುವೆ ಯೋಜನೆಗಳು:
ಒಂದು ಲಕ್ಷಕ್ಕೂ ಅಧಿಕ ಟಿ.ವಿ.ಯು. (ಟ್ರೈನ್ ವೆಹಿಕಲ್ ಯೂನಿಟ್) ವಾಹನ ದಟ್ಟಣೆ ಇರುವ ಕಡೆಗಳಲ್ಲಿ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟುಗಳನ್ನು ಬದಲಿಸಿ, ಮೇಲ್ಸೇತುವೆ/ಕೇಳಸೇತುವೆಗಳನ್ನು ನಿರ್ಮಿಸಲು ತೀರ್ಮಾನ. ರಾಜ್ಯ ಸರಕಾರವೇ ಇದಕ್ಕೆ ಉಚಿತವಾಗಿ ಭೂಮಿ ನೀಡಲಿದ್ದು, ಕಾಮಗಾರಿ ವೆಚ್ಚದ ಶೇಕಡ 50ರಷ್ಟನ್ನು ಭರಿಸಲಿದೆ. ಇದರ ಪ್ರಕಾರ, 51 ಮೇಲ್ಸೇತುವೆ/ಕೆಳ ಸೇತುವೆಗಳ ನಿರ್ಮಾಣ ಕಾರ್ಯವನ್ನು ರೈಲ್ವೆ ಇಲಾಖೆಯು ಕೈಗೆತ್ತಿಕೊಂಡಿದೆ ಎಂದು ತಿಳಿಸಿದರು.

ರೈಲ್ವೆ ಜೋಡಿಹಳಿ ಯೋಜನೆಗಳು:
ಯಶವಂತಪುರ-ಚನ್ನಸಂದ್ರ ಮತ್ತು ಬೈಯಪ್ಪನಹಳ್ಳಿ-ಹೊಸೂರು ಮಾರ್ಗಗಳು ಸದ್ಯಕ್ಕೆ ಜೋಡಿಹಳಿ ಕಂಡಿಲ್ಲ. ಹೀಗಾಗಿ, ಯಶವಂತಪುರ ಮತ್ತು ಬೆಂಗಳೂರು ಸಿಟಿ ರೈಲು ನಿಲ್ದಾಣಗಳಿಂದ ಹೆಚ್ಚುವರಿ ಸಬ್-ಅರ್ಬನ್ ರೈಲು ಸೇವೆ ಆರಂಭಿಸಲು ಆಗುತ್ತಿಲ್ಲ. ರೈಲ್ವೆಯೊಂದಿಗೆ 50:50ರ ಅನುಪಾತದಲ್ಲಿ ವೆಚ್ಚ ಹಂಚಿಕೊಳ್ಳುವ ಮೂಲಕ ಈ ಮಾರ್ಗಗಳನ್ನು ಜೋಡಿಹಳಿ ಪಥಗಳನ್ನಾಗಿಸಿ ಈ ಸಮಸ್ಯೆ ಬಗೆಹರಿಸಲು ಸರ್ಕಾರ ಮುಂದಾಗಿದೆ. ಕರ್ನಾಟಕ ಸರ್ಕಾರ ಮತ್ತು ಭಾರತೀಯ ರೈಲ್ವೆಯ ಜಂಟಿ ಸಹಭಾಗಿತ್ವದಲ್ಲಿ ಕೆ-ರೈಡ್ ನಿಂದ ಕಾಮಗಾರಿಗಳ ಅನುμÁ್ಠನಕ್ಕೆ ಕ್ರಮ ವಹಿಸಲಾಗಿದೆ.

ಬೈಯ್ಯಪ್ಪನಹಳ್ಳಿ- ಹೊಸೂರು ಜೋಡಿಹಳಿ ಯೋಜನೆ (42 ಕಿ.ಮೀ): ಯೋಜನೆಯ ಅಂದಾಜು ವೆಚ್ಚ ರೂ. 498.73 ಕೋಟಿ. ಇದರಲ್ಲಿ ರಾಜ್ಯ ಸರ್ಕಾರದ ಪಾಲು ರೂ.249.36 ಕೋಟಿ. ಯಶವಂತಪುರ- ಚನ್ನಸಂದ್ರ ಜೋಡಿಹಳಿ ಯೋಜನೆ (22 ಕಿಮೀ): ಯೋಜನೆಯ ಅಂದಾಜು ವೆಚ್ಚ ರೂ. 314.10 ಕೋಟಿ. ಇದರಲ್ಲಿ ರಾಜ್ಯ ಸರ್ಕಾರದ ಪಾಲು ರೂ.157.05 ಕೋಟಿ ಇದೆ ಎಂದು ತಿಳಿಸಿದರು.

ಬೆಂಗಳೂರು ಉಪನಗರ ರೈಲು ಯೋಜನೆ (ಬಿ.ಎಸ್.ಆರ್.ಪಿ.) :
ಒಟ್ಟು ರೂ 15,767 ಕೋಟಿ ಅಂದಾಜು ವೆಚ್ಚದಲ್ಲಿ, 57 ರೈಲು ನಿಲ್ದಾಣಗಳನ್ನೊಳಗೊಂಡ ಮತ್ತು 148 ಕಿ.ಮೀ. ಉದ್ದದ ಬೆಂಗಳೂರು ಉಪನಗರ ರೈಲು ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಆರಂಭದಲ್ಲಿ ಬೆಂಗಳೂರು ನಗರವನ್ನು ಮಾತ್ರ ಗುರಿಯಾಗಿಸಿಕೊಂಡಿದ್ದ ಈ ಯೋಜನೆಯನ್ನು ಈಗ ಸುತ್ತಮುತ್ತಲಿನ ತುಮಕೂರು, ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ, ಗೌರಿಬಿದನೂರು, ಮಾಲೂರು, ಬಂಗಾರಪೇಟೆ, ಮಾಗಡಿ ಮತ್ತು ಹೊಸೂರುಗಳಿಗೂ ವಿಸ್ತರಿಸುವ ಉದ್ದೇಶ ಸರ್ಕಾರದ್ದಾಗಿದೆ. ಯೋಜನೆ ಸಂಬಂಧ ಕರ್ನಾಟಕ ಸರಕಾರ, ರೈಲ್ವೆ ಇಲಾಖೆ ಮತ್ತು ಕೆ-ರೈಡ್ ನಡುವೆ ಮಾತುಕತೆ ನಡೆಯುತ್ತಿದೆ.

ಸಬ್ ಅರ್ಬನ್ ರೈಲು ಯೋಜನೆಗೆ ರೂ.7,438 ಕೋಟಿ ಸಾಲ ನೆರವು ಖಾತರಿ. ಯೋಜನೆಗೆ ರೂ.4,650 ಕೋಟಿ ಸಾಲ ಪಡೆಯಲು ಜರ್ಮನಿಯ ಕೆ.ಎಫ್.ಡಬ್ಲ್ಯು. ಸಂಸ್ಥೆ ಜೊತೆ ಒಪ್ಪಂದಕ್ಕೆ ಸಹಿ. ಜೊತೆಗೆ, ಇ.ಐ.ಬಿ. ಸಂಸ್ಥೆಯಿಂದ 300 ಮಿಲಿಯನ್ ಯೂರೋ ಸಾಲ ನೆರವು ಪಡೆಯಲಾಗುವುದು.

ಬಿಬಿಎಂಪಿ, ಬಿ.ಡಬ್ಲ್ಯೂ.ಎಸ್.ಎಸ್.ಬಿ, ಕೆಐಎಡಿಬಿ ಸಮನ್ವಯತೆಯೊಂದಿಗೆ ತೊಡಕುಗಳ ನಿವಾರಣೆಗೆ ಒತ್ತು. ಯೋಜನೆಯ 4 ಕಾರಿಡಾರುಗಳ ಪೈಕಿ ಎರಡು ಕಾರಿಡಾರುಗಳ ಕಾಮಗಾರಿ ನಡೆಯುತ್ತಿದೆ.

ಬೆಂಗಳೂರು ಉಪನಗರ ರೈಲು ಯೋಜನೆಯಲ್ಲಿ ದೇಶದಲ್ಲೇ ಮೊಟ್ಟಮೊದಲ ಬಾರಿಗೆ ನಿರ್ಮಿಸಿರುವ ಎಂಜಿನಿಯರಿಂಗ್ ಅದ್ಭುತ ಎನ್ನಲಾಗಿರುವ 100 ಅಡಿ ಉದ್ದದ ಯು-ಗರ್ಡರ್ ಗಳನ್ನು ಬಳಸುತ್ತಿರುವುದು ವಿಶೇಷವಾಗಿದೆ ಎಂದು ತಿಳಿಸಿದರು.

ವಿಮಾನ ನಿಲ್ದಾಣಗಳು:
ರಾಜ್ಯ ಸರಕಾರವು ಕರ್ನಾಟಕದ ಎಲ್ಲ ದಿಕ್ಕುಗಳಲ್ಲೂ ವಿಮಾನ ನಿಲ್ದಾಣಗಳನ್ನು ನಿರ್ಮಿಸಲು ಆದ್ಯತೆ ನೀಡಿದೆ. ಇದರಿಂದ ಪ್ರವಾಸೋದ್ಯಮ, ಶೈಕ್ಷಣಿಕ ಚಟುವಟಿಕೆಗಳು, ವಾಣಿಜ್ಯ ವಹಿವಾಟು, ಕೃಷಿ ಉತ್ಪನ್ನಗಳ ಸಾಗಾಟ ಇವೆಲ್ಲವೂ ಸುಗಮವಾಗಲಿದೆ. ಅಂತಿಮವಾಗಿ ಈ ಉಪಕ್ರಮವು ರಾಜ್ಯದ ಆರ್ಥಿಕತೆಗೆ ಬಲ ತುಂಬಿದೆ.

ಕೆ.ಎಸ್.ಐ.ಐ.ಡಿ.ಸಿ ಮೂಲಕವೇ ರಾಜ್ಯದ ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಹಾಗೂ ನಿರ್ವಹಣೆ ಮಾಡುವ ಚಾರಿತ್ರಿಕ ನಿರ್ಧಾರದೊಂದಿಗೆ ಬೊಕ್ಕಸಕ್ಕೆ ಹೊಸ ಸಂಪನ್ಮೂಲ ಸೃಷ್ಟಿಸುವ ಉದ್ದೇಶವನ್ನೂ ಇರಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಶಿವಮೊಗ್ಗ ವಿಮಾನ ನಿಲ್ದಾಣ-ನಾಗರಿಕ ವಿಮಾನಯಾನಕ್ಕೆ ಚಾಲನೆ:
ಶಿವಮೊಗ್ಗ ಜಿಲ್ಲಾ ಕೇಂದ್ರದಿಂದ 15 ಕಿ.ಮೀ. ಅಂತರದಲ್ಲಿ ರೂ.449.22 ಕೋಟಿ ವೆಚ್ಚದಲ್ಲಿನ ವಿಮಾನ ನಿಲ್ದಾಣ. ಇಲ್ಲಿ ನಾಗರಿಕ ವಿಮಾನ ಸಂಚಾರ ಸೇವೆಗೆ 2023ರ ಆಗಸ್ಟ್ 31ರಂದು ಚಾಲನೆ ನೀಡಲಾಯಿತು.

ಎ-320 ಮಾದರಿಯ ವಿಮಾನಗಳ ಕಾರ್ಯಾಚರಣೆಗೆ ಸಿದ್ಧಗೊಂಡಿರುವ ಈ ವಿಮಾನ ನಿಲ್ದಾಣದ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ದಿ ನಿಗಮ (ಕೆ.ಎಸ್.ಐ.ಐ.ಡಿ.ಸಿ) ವಹಿಸಿಕೊಂಡಿರುವುದು ಉಲ್ಲೇಖಾರ್ಹ ಅಂಶವಾಗಿದೆ.

ಈ ನಿಲ್ದಾಣದಲ್ಲಿ ಹೆಚ್ಚುವರಿ ಮೂಲಸೌಲಭ್ಯಗಳ (ಭದ್ರತಾ ಉಪಕರಣ) ಅಳವಡಿಕೆ. ಮೊದಲಿಗೆ, ಶಿವಮೊಗ್ಗ-ಬೆಂಗಳೂರು ನಡುವೆ ಇದ್ದ ವಿಮಾನ ಹಾರಾಟ ವ್ಯವಸ್ಥೆ, ನಂತರ ಶಿವಮೊಗ್ಗ-ಹೈದರಾಬಾದ್, ಶಿವಮೊಗ್ಗ-ತಿರುಪತಿ ಮತ್ತು ಶಿವಮೊಗ್ಗ-ಗೋವಾಗೂ ವಿಸ್ತರಣೆ ಕಂಡಿದೆ.

ವಿಜಯಪುರ ವಿಮಾನ ನಿಲ್ದಾಣ :
ಒಟ್ಟು, 727 ಎಕರೆ ವಿಸ್ತೀರ್ಣದಲ್ಲಿ ರೂ. 347.92 ಕೋಟಿ ವೆಚ್ಚದಲ್ಲಿ ನಿರ್ಮಾಣ. ಏರ್ ಬಸ್-320 ಮಾದರಿಯ ವಿಮಾನ ನಿಲ್ದಾಣದಲ್ಲಿ ಖುದ್ದು ಮುತುವರ್ಜಿಯಿಂದಾಗಿ ರಾತ್ರಿ ವೇಳೆ ವಿಮಾನಗಳ ಲ್ಯಾಂಡಿಂಗ್ ಸೌಲಭ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ.

ಕಾರ್ಯಾಚರಣೆಗೆ ಕೇಂದ್ರ ಪರಿಸರ ಇಲಾಖೆ ಸೇರಿದಂತೆ ಅಗತ್ಯವಿರುವ ಪರವಾನಗಿ ಪಡೆಯುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಉದ್ಘಾಟನೆಗೆ ಸಜ್ಜಾಗಿದೆ.

ಮೈಸೂರು ವಿಮಾನ ನಿಲ್ದಾಣ :
ಅರಮನೆ ನಗರಿಯ ವಿಮಾನ ನಿಲ್ದಾಣದಲ್ಲಿ ರನ್-ವೇ ವಿಸ್ತರಣೆ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.

ಹಾಸನ ವಿಮಾನ ನಿಲ್ದಾಣ :
ಎಟಿಆರ್-72 ವಿಮಾನಗಳ ಹಾರಾಟಕ್ಕೆ ಅನುಕೂಲವಾಗುವಂತೆ, ಜಿಲ್ಲಾ ಕೇಂದ್ರದಿಂದ 6 ಕಿ.ಮೀ. ದೂರದಲ್ಲಿರುವ ಬೂವನಹಳ್ಳಿಯಲ್ಲಿ ನಿರ್ಮಾಣವಾಗಲಿರುವ ರೂ.193.65 ಕೋಟಿಯ ಯೋಜನೆ ಇದಾಗಿದೆ. ಇಲ್ಲಿಯವರೆಗೆ 164.70 ಕೋಟಿ ರೂ. ಬಿಡುಗಡೆಗೊಳಿಸಲಾಗಿದೆ. ಪ್ಯಾಕೇಜ್-1ರಲ್ಲಿ ರೂ.117.67 ಕೋಟಿಯ ಹಾಗೂ ಪ್ಯಾಕೇಜ್-2ರಲ್ಲಿ ರೂ. 67.77 ಕೋಟಿಯ ಕಾಮಗಾರಿಗಳು 2026ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ರಾಯಚೂರು ವಿಮಾನ ನಿಲ್ದಾಣ:
ಜಿಲ್ಲಾ ಕೇಂದ್ರದಿಂದ 12 ಕಿ.ಮೀ. ದೂರದಲ್ಲಿ ನಿರ್ಮಾಣವಾಗಲಿರುವ ರೂ. 219 ಕೋಟಿ ವೆಚ್ಚದ ಯೋಜನೆ ಇದಾಗಿದೆ; ಇಲ್ಲಿಯವರೆಗೆ 164.70 ಕೋಟಿ ರೂ. ಬಿಡುಗಡೆಗೊಳಿಸಲಾಗಿದೆ. ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಕಾರವಾರ ಸಿವಿಲ್ ಎನ್‍ಕ್ಲೇವ್ :
ಭಾರತೀಯ ನೌಕಾಪಡೆಯ ಸೀಬರ್ಡ್ ಯೋಜನೆಯ ಭಾಗವಾಗಿ ನಿರ್ಮಾಣವಾಗುತ್ತಿರುವ ರಕ್ಷಣಾ ವಿಮಾನ ನಿಲ್ದಾಣವನ್ನು ನಾಗರಿಕ ವಾಯುಯಾನಕ್ಕೂ ಅನುಕೂಲವಾಗುವಂತೆ ಅಭಿವೃದ್ಧಿಪಡಿಸಲು ಸರ್ಕಾರದ ಕ್ರಮ. ನೌಕಾಪಡೆ ಸಹಯೋಗದಲ್ಲಿ ಸಿವಿಲ್ ಎನ್‍ಕ್ಲೇವ್ ನಿರ್ಮಿಸಲು ಅಂಕೋಲಾದಿಂದ 5 ಕಿ.ಮೀ ದೂರದಲ್ಲಿ ರೂ.27.84 ಕೋಟಿ ವೆಚ್ಚದಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಈ ಕಾಮಗಾರಿ 2025-26ನೇ ಸಾಲಿನಲ್ಲಿ ಮುಗಿಯುವ ನಿರೀಕ್ಷೆ ಇದೆ. ಇದಕ್ಕೆ ಬೇಕಾಗುವ ರೂ. 82 ಕೋಟಿ ರಾಜ್ಯವೇ ಭರಿಸಲಿದೆ.

3 ಹೆಲಿಪೋರ್ಟ್ ನಿರ್ಮಾಣ :
ಚಿಕ್ಕಮಗಳೂರು, ಮಡಿಕೇರಿ ಮತ್ತು ಹಂಪಿಯಲ್ಲಿ ಹೆಲಿಪೋರ್ಟ್ ನಿರ್ಮಾಣ ಸಂಬಂಧ ಬಜೆಟ್ ನಲ್ಲಿ ಪ್ರಕಟಿಸಲಾಗಿದೆ. ಕಾರ್ಯಸಾಧ್ಯತಾ ವರದಿ ಮತ್ತು ವಿಸ್ತೃತ ಯೋಜನಾ ವರದಿಗಳನ್ನು ಸಿದ್ಧಪಡಿಸಲಾಗಿದೆ. ಚಿಕ್ಕಮಗಳೂರಿನಲ್ಲಿ ಭೂಮಿಯನ್ನು ಗುರುತಿಸಲಾಗಿದೆ. ಇಲ್ಲಿ ಭೂಸ್ವಾಧೀನಕ್ಕಾಗಿ ಹಣ ಬಿಡುಗಡೆಗೊಳಿಸಲು ಸಂಪುಟ ಸಭೆ ಅನುಮೋದನೆ ನೀಡಿದೆ.

ಕರ್ನಾಟಕವು ವೈಮಾನಿಕ ವಲಯದಲ್ಲಿ ಈಗ ದಕ್ಷಿಣ Asiaದ ಎಂ.ಆರ್.ಓ. ರಾಜಧಾನಿಯಾಗಿದೆ. ಇದಕ್ಕೆ ತಕ್ಕಂತೆ ಏರ್ ಇಂಡಿಯಾ, ಇಂಡಿಗೋ ಮತ್ತು ಲಾಕಿನ್ ಮಾರ್ಟಿನ್ ಕಂಪನಿಗಳು ರಾಜ್ಯದಲ್ಲಿ ತಮ್ಮ ಎಂ.ಆರ್.ಒ ಘಟಕಗಳನ್ನು ಸ್ಥಾಪಿಸುತ್ತಿವೆ.

ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಸಂಬಂದಿಸಿದಂತೆ ಕೇಂದ್ರದಿಂದ ಸ್ಥಳ ಆಯ್ಕೆ ಕುರಿತ ವರದಿ ಬರಬೇಕಾಗಿದೆ. ಅದರ ನಂತರ ಕಾರ್ಯಸಾಧ್ಯತಾ ಅಧ್ಯಯನ ಮಾಡಿಸಿ, ಅಂತಿಮಗೊಳಿಸಲಾಗುವುದು.

ಬಲ್ಡೋಟಾ- ಸ್ವಾಮೀಜಿ ಭೇಟಿಯಾಗಬೇಕಾಗಿತ್ತು. ಅವರ ಬಗ್ಗೆ ಅಪಾರ ಗೌರವ ಇದೆ. ಬಲ್ಡೋಟಾದಿಂದ ಹಾನಿ ಆಗುತ್ತಿತ್ತು ಅಂದ್ರೆ ಬೇರೆ ಕಡೆ ಹೋಗಿ ಅನ್ನುತ್ತಿದ್ದೆವು. ಕೇಂದ್ರ ಪರಿಸರ ಇಲಾಖೆ ಕೂಡ ಅನುಮತಿ ನೀಡಿದೆ. ಇದಲ್ಲದೆ, ಭಾರತೀಯ ವಿಜ್ಞಾನ ಸಂಸ್ಥೆಗೂ ಅಧ್ಯಯನ ಮಾಡಲು ಕೋರಲಾಗಿದೆ. ಅದರ ವರದಿ ಬಂದ ನಂತರ ಸ್ವಾಮೀಜಿ ಜತೆ ಮಾತನಾಡಿ ಅಂತಿಮ ಮಾಡುತ್ತೇವೆ ಎಂದರು.

ಎಲ್ಲ ಜಿಲ್ಲೆಗಳ ಕೈಗಾರಿಕಾ ಪ್ರದೇಶಗಳ ಪರಿಸರ ಮಾಲಿನ್ಯ ಅಧ್ಯಯನ ಮಾಡಿಸುವ ಉದ್ದೇಶ ಇದೆ. ಮೊದಲು ಕೊಪ್ಪಳ, ಕೋಲಾರ ಜಿಲ್ಲೆಗಳಲ್ಲಿ ಮಾಡಿಸುತ್ತೇವೆ. ಕೊಪ್ಪಳದಲ್ಲಿ ಪರಿಸರ ಮಾಲಿನ್ಯ ಹೆಚ್ಚು ಅಂತ ಸ್ವಾಮೀಜಿ ಹೇಳಿದ್ದಾರೆ. ಅದನ್ನೂ ಗಮನ ದಲ್ಲಿ ಇಟ್ಟುಕೊಂಡು ಪರಿಸರ ಅಧ್ಯಯನ ಮಾಡಿಸುತ್ತೇವೆ. ಐಐಎಸ್‍ಸಿ ಅಥವಾ ಆ ರೀತಿಯ ಖಾಸಗಿ ಸಂಸ್ಥೆಗಳಿಂದ ಅಧ್ಯಯನ ಮಾಡಿಸಲಾಗುವುದು.

ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಸದ್ಯದಲ್ಲೇ “ಕಲಾ ಲೋಕ” ಪ್ರದರ್ಶನ ಮಳಿಗೆ ಆರಂಭಿಸಲಾಗುವುದು. ಅಲ್ಲಿ ನಮ್ಮ ಎಲ್ಲ ಹೆರಿಟೇಚ್ ಉತ್ಪನ್ನಗಳ ಮಳಿಗೆ ಇರಲಿವೆ. ಉದಾಹರಣೆಗೆ ಮೈಸೂರು ಸಿಲ್ಕ್, ಕಾವೇರಿ ಎಂಪೆರಿಯಂ ಉತ್ಪನ್ನಗಳು, ಮೈಸೂರು ಸ್ಯಾಂಡಲ್ ಸೋಪು ಇತ್ಯಾದಿಯವು ಇರಲಿವೆ.

ಸೆಮಿಕಂಡಕ್ಟರ್- ಹೈಟೆಕ್ :
ಮೈಕ್ರಾನ್- 1 ಲಕ್ಷ ಕೋಟಿ. ಇದರಲ್ಲಿ ಶೇ 50 ರಷ್ಟು ಕೇಂದ್ರ ಕೊಡಲಿದೆ. ನಮ್ಮ ಬಳಿ ಬಂದ ನಂತರ ದೆಹಲಿಗೆ ಹೋದರು. ನಂತರ ಬರಲಿಲ್ಲ. ಆದರೂ ಬೆಂಗಳೂರು ಬಿಟ್ಟು ಏನೂ ಮಾಡಲು ಆಗಲ್ಲ. ನಮ್ಮಿಂದ ಏನೂ ಲೋಪ ಆಗಿಲ್ಲ. ಕೇಂದ್ರ ಸರ್ಕಾರದ ಜತೆ ಮಾತುಕತೆ ನಡೆಯುತ್ತಿದೆ. ಹಿಂದೆ ಬಂದ ಲೀಡ್ ಕೊಟ್ಟಿದ್ದೇವೆ. ಮುಂದೆಯೂ ಕೊಡುತ್ತೇವೆ.

ಕೆ ಎಸ್ ಡಿ ಎಲ್- ನಕಲಿ ತಡೆಗೆ ಕ್ರಮ:
ವಿಶೇಷ ಹೂಡಿಕೆ ವಲಯ ಅಂತ ಮಾಡಿದ್ದೇವೆ. 18 ಕೈಗಾರಿಕಾ ಪ್ರದೇಶಗಳನ್ನು ವಿಶೇಷ ಹೂಡಿಕೆ ವಲಯಗಳನ್ನಾಗಿ ಘೋಷಣೆ ಮಾಡಿದ್ದು, ಇಲ್ಲಿನ ಆಸ್ತಿ ತೆರಿಗೆಯನ್ನು ಕೆಇಎಡಿಬಿ ವಸೂಲಿ ಮಾಡಲಿದೆ. ಸಂಗ್ರಹ ವಾದ ತೆರಿಗೆಯ ಶೇ 70ರಷ್ಟು ಹಣವನ್ನು ಆಯಾ ಪ್ರದೇಶಗಳ ಮೂಲಸೌಕರ್ಯ ಅಭಿವೃದ್ಧಿ ಗೆ ವಿನಿಯೋಗ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.

ವೀ ಕೇ ನ್ಯೂಸ್
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";