Live Stream

[ytplayer id=’22727′]

| Latest Version 8.0.1 |

Feature Article

“ಹರಿದಾಸ ಸಾಹಿತ್ಯ ಹರಿಕಾರ” ಶ್ರೀ  ಶ್ರೀಪಾದರಾಜರು

“ಹರಿದಾಸ ಸಾಹಿತ್ಯ ಹರಿಕಾರ” ಶ್ರೀ  ಶ್ರೀಪಾದರಾಜರು
“ಹರಿದಾಸ ಸಾಹಿತ್ಯ ಹರಿಕಾರ” ಶ್ರೀ  ಶ್ರೀಪಾದರಾಜರು
(ಜೂನ್ 10, ಗುರುಗಳ ಆರಾಧನೆ ಪ್ರಯುಕ್ತ ಈ ಲೇಖನ)
ಗುರುಭ್ಯೋ ನಮಃ, ಪರಮ ಗುರುಭ್ಯೋನಮಃ ಶ್ರೀಮದಾನಂದತೀರ್ಥ ಭಗವತ್ ಪಾದಾಚಾರ್ಯ ಗುರುಭ್ಯೋನಮಃ
ತಂ ವಂದೇ ನೃಸಿಂಹತೀರ್ಥನಿಲಯಂ ಶ್ರೀ ವ್ಯಾಸರಾಟ್ ಪೂಜಿತಂ ಧ್ಯಾಯಂತಂ ಮನಸಾನೃಸಿಂಹ ಚರಣಂ ಶ್ರೀಪಾದರಾಜಂ ಗುರುಂ.
,
ಜೇಷ್ಠ ಬಹುಳ ಚತುರ್ದಶಿ ಶ್ರೀ ಶ್ರೀಪಾದರಾಜರ ಆರಾಧನೆ.
ಇದರ ನಿಮಿತ್ತ ಪ್ರಸ್ತುತ ಶ್ರೀಪಾದರಾಜರ ಮಠದ ಪ್ರಸ್ತುತ  ಪೀಠಾಧಿಪತಿಗಳಾದ ಶ್ರೀ ೧೦೮ ಶ್ರೀ ಸುಜಯನಿಧಿತೀರ್ಥ ಶ್ರೀಪಾದಂಗಳವರು ಒಂದು ತಿಂಗಳ ಕಾಲ ವಿಶೇಷವಾದ ಕಾರ್ಯಕ್ರಮವನ್ನು ಶ್ರೀಪಾದರಾಜರ ಮೂಲಮಠದಲ್ಲಿ ಹಮ್ಮಿಕೊಂಡಿದ್ದು ವಿಶೇಷವಾದ ಜ್ಞಾನ  ಕಾರ್ಯವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಅವರಿಗೆ ಹೃತ್ಪೂರ್ವಕವಾಗಿ ನಮಿಸುತ್ತಾ ಶ್ರೀಪಾದರಾಜರ ಬಗ್ಗೆ ಪುಟ್ಟ ಲೇಖನವನ್ನು ಬರೆಯುವ ಪ್ರಯತ್ನ ಮಾಡುತ್ತಿದ್ದೇನೆ.
ಮಹನೀಯರು ಮತ್ತು ಧ್ರುವಾಂಶ ಸಂಭೂತರಾದ ಶ್ರೀಪಾದರಾಜರು  ಹೆಸರಿಗೆ ತಕ್ಕಂತೆ  ಶ್ರೀಪಾದರುಗಳಿಗೆ ರಾಜರು, ಮಹಾಪುಣ್ಯ ಪುರುಷರು. ಪ್ರಾತಃಕಾಲದಲ್ಲಿ ನಾವು ನಿತ್ಯ ಅವರ ಸ್ಮರಣೆ ಮಾಡಿದರೆ ನಮಗೆ ಸಕಾಲದಲ್ಲಿ ಮೃಷ್ಟಾನ್ನ ಭೋಜನ ದೊರೆಯುವುದೆಂಬ ಭಾವನೆ ಇನ್ನೂ ಜನರಲ್ಲಿ ನೆಲೆಗೊಂಡಿದೆ. ಹರಿದಾಸ ಪೀಳಿಗೆಯಲ್ಲಿ ಪ್ರಥಮತ: ಶ್ರೀಪಾದರಾಜಾಯ ನಮಃ ಎಂಬ ಪುಣ್ಯ ನಾಮವನ್ನು ಸ್ಮರಿಸಬೇಕಾಗುತ್ತದೆ. ಕೃತಿಯಿಂದಲೂ ಆಕೃತಿ (ಶಾಸ್ತ್ರಗ್ರಂಥ)ಯಿಂದಲೂ ಶ್ರೀಪಾದರಾಜರು ಶ್ರೀಪಾದರಾಜರೇ ಎಂದು  ಹೊಗಳುತ್ತದೆ. ಇವರ ಪಾಂಡಿತ್ಯದ ಪರಮಾವಧಿಯನ್ನು ತಿಳಿಯಬೇಕಾದರೆ ಇವರು ರಚಿಸಿದ “ವಾಗ್ವಜ್ರ” ಎಂಬ ಗ್ರಂಥವನ್ನು ತಿಳಿಯಬೇಕು.
ಶ್ರೀಪಾದರಾಜರ ಪರಿಚಯ :
ಇವರ ತಂದೆ ಶೇಷಗಿರಿ ಆಚಾರ್ಯರು, ತಾಯಿ ಗಿರಿಯಮ್ಮ.ಮೈಸೂರು ಸೀಮೆಯ ಚನ್ನಪಟ್ಟಣದ ತಾಲ್ಲೂಕಿನ ಅಬ್ಬೂರು ಸಮೀಪದಲ್ಲಿ ಶೇಷಗಿರಿ ದಂಪತಿಗಳು ತೋಟವನ್ನು ಬೆಳಸಿಕೊಂಡು ವ್ಯವಸಾಯ ಮಾಡುತ್ತಾ ಬಡತನ ಜೀವನದಿಂದಲೇ ತೃಪ್ತರಾಗಿದ್ದರು. ಇಂತಹ ಬಡದಂಪತಿಗೆ ಜನಿಸಿ ಲಕ್ಷ್ಮೀನಾರಾಯಣ ಎಂದು ಕರೆಸಿಕೊಳ್ಳುತ್ತಿದ್ದ ಬಾಲಕ ಪರಮಾತ್ಮನ ವಿಶೇಷ ಅನುಗ್ರಹದಿಂದ ಲೋಕ ವಿಖ್ಯಾತರಾದ ಶ್ರೀಪಾದರಾಜರಾದರು. ಈ ಬಾಲಕ ತಂದೆಯ ಬಳಿಯಲ್ಲಿ ಅಷ್ಟಿಷ್ಟು ವಿದ್ಯಾಭ್ಯಾಸ ಮಾಡಿ ಮನೆಯ ಕೆಲಸ ಮಾಡಿ ದನಗಳನ್ನು  ಗುಡ್ಡದ ಬಳಿಯಲ್ಲಿ ಮೇಯಿಸಿಕೊಂಡು ಬರುವ ಕೆಲಸ ಮಾಡುತ್ತಿದ್ದನು.
ಕಿಮಲಾಭ್ಯಂ ಭಗವತಿ ಪ್ರಸನ್ನೇ ಶ್ರೀನಿಕೇತನೆ ಎಂಬಂತೆ  ಒಂದು ದಿನ ಶ್ರೀರಂಗಪಟ್ಟಣದಿಂದ ಹೊರಟು ಸಂಚಾರ ಮಾಡಿಕೊಂಡು ಬರುತ್ತಿದ್ದ ಸ್ವರ್ಣವರ್ಣತೀರ್ಥರ ಮೇನೆಯು ಆ ಗುಡ್ಡಗಾಡಿನ ಕಾಲುಧಾರಿಯಲ್ಲಿ ಸಾಗುತ್ತಾ ಬರುತ್ತಿತ್ತು. ದನ ಕಾಯುತ್ತಿದ್ದ ಲಕ್ಷ್ಮೀನಾರಾಯಣನನ್ನು ಕರೆದು ಅಬ್ಬೂರು ಎಷ್ಟು ದೂರವಿದೆ ಎಂದು ಕೇಳಿದಾಗ ಆ ಬಾಲಕ ನನ್ನನ್ನು ನೋಡಿ ದನಗಳನ್ನು ನೋಡಿ  ಸೂರ್ಯನನ್ನು ನೋಡಿ ಎಷ್ಟು ದೂರವು ಗೊತ್ತಾಗುತ್ತೆ ಎಂದು ಚಮತ್ಕಾರದಿಂದ ಹೇಳಿದನು. ಆ ಬಾಲಕನ ಮಾತಿಗೆ ಸ್ವಾಮಿಗಳು ತುಂಬಾ ಸಂತೋಷಪಟ್ಟು ಅವನ ತಲೆಯ ಮೇಲೆ ಕೈ ಆಡಿಸಿ ಮಂತ್ರಾಕ್ಷತೆಯನ್ನು ಹಾಕಿದರು. ಮುಂದೆ ಪುರುಷೋತ್ತಮತೀರ್ಥರ ಮಠದಲ್ಲಿ ಸ್ವರ್ಣವರ್ಣತೀರ್ಥರ ಬಿಡಾರವಾಯಿತು. ಶ್ರೀಪಾದರೀರ್ವರ ಸಮಾಗಮ ಗಂಗಾ ಯಮುನಾ ಸಂಗಮದಂತಾಯಿತು. ಉಭಯ ಯತಿಗಳು ದೇವರ ಮಹಾಭಕ್ತರು. ಲಕ್ಷ್ಮೀನಾರಾಯಣನಿಗೆ ಮುಂದೆ ಉಪನಯನ ಸಂಸ್ಕಾರವಾಯಿತು. ಲಕ್ಷ್ಮೀನಾರಾಯಣನಿಗೆ ಸ್ವರ್ಣವರ್ಣತೀರ್ಥರು ಸನ್ಯಾಸತ್ವವನ್ನು ಕೊಟ್ಟು ಲಕ್ಷ್ಮೀನಾರಾಯಣಮುನಿ ಎಂದು ಆಶ್ರಮ ನಾಮವನ್ನು ಕೊಟ್ಟರು. ಪೀಠಾರೋಹಣ ಆದ ತಕ್ಷಣ ರಾಯರ ಮಠದ ಪೂರ್ವಪೀಳಿಗೆಯ ವಿಭುದೇಂದ್ರತೀರ್ಥರಲ್ಲಿ ವಿದ್ಯಾಭ್ಯಾಸವನ್ನು ಮಾಡಿದರು. ನಂತರ ವಿಭುದೇಂದ್ರತೀರ್ಥರು ಮತ್ತು ಶ್ರೀಪಾದರಾಜರು ಸಂಚಾರ ಮಾಡುತ್ತಾ ಕೃಷ್ಣಾ ತೀರದಲ್ಲಿದ್ದ ಕಾರ್ಪರ ನರಸಿಂಹ ಕ್ಷೇತ್ರದಲ್ಲಿ ಚಾತುರ್ಮಾಸ ಸಂಕಲ್ಪ ಕೈಗೊಂಡರು. ಇದೇ ಕಾಲದಲ್ಲಿ ಉತ್ತರಾದಿಮಠದ ಶ್ರೀ ರಘುನಾಥತೀರ್ಥರು ಅಲ್ಲಿಗೆ ಬಂದರು. ಲಕ್ಷ್ಮೀನಾರಾಯಣತೀರ್ಥರ ಪಾಂಡಿತ್ಯ ಪರೀಕ್ಷೆ ಮಾಡಬೇಕೆಂದು ನ್ಯಾಯಸುಧೆಯಲ್ಲಿ ಕಠಿಣವಾದ ವಾಕ್ಯವನ್ನು ವಿಮರ್ಶೆಗೆ ತಂದರು. ಅಷ್ಟೇ ಸಾಕೆಂದು ಲಕ್ಷ್ಮೀನಾರಾಯಣ ಮುನಿಗಳು ಇಡೀ ಸುಧಾ ಗ್ರಂಥವನ್ನು ವಿಚಿತ್ರ ರೀತಿಯಿಂದ ಅನುವಾದ ಮಾಡಿ ತೋರಿಸಿದರು. ರಘುನಾಥತೀರ್ಥರು ಲಕ್ಷ್ಮೀನಾರಾಯಣತೀರ್ಥರ ಪಾಂಡಿತ್ಯಕ್ಕೆ ಬೆರಗಾಗಿ ಅವರನ್ನು ಪ್ರಶಂಸಿಸಿದರು. ಲಕ್ಷ್ಮೀನಾರಾಯಣತೀರ್ಥರು ರಘುನಾಥತೀರ್ಥರಿಗೆ ತಾವು ಮಹಾಸಂಸ್ಥಾನಾಧೀಶರಾದ ಶ್ರೀಪಾದಂಗಳು ನಾನಾದರೋ ಬಾಲಸನ್ಯಾಸಿ ನನ್ನಂಥವರ ಪ್ರಶಂಸೆ ಮಾಡಬಾರದು ಎಂದಾಗ ರಘುನಾಥತೀರ್ಥರು ಆ ಮಾತಿನ ಮರ್ಮವನ್ನು ಅರಿತು ನಾವು ಬರೀ ಶ್ರೀಪಾದರು. ತಾವಾದರೋ ಶ್ರೀಪಾದರುಗಳಿಗೆ ರಾಜರು ಎಂದು ಮನಪೂರ್ವಕವಾಗಿ ಆಶೀರ್ವದಿಸಿ ಇದಕ್ಕೆ ಶ್ರೀರಾಮಚಂದ್ರ ದೇವರೇ ಸಾಕ್ಷಿ ಎಂದು ಕೊಂಡಾಡಿದರು. ಅಂದಿನಿಂದ ಲಕ್ಷ್ಮೀನಾರಾಯಣತೀರ್ಥರು  ಶ್ರೀಪಾದರಾಜರು ಎಂಬ ಹೆಸರಿನಿಂದ ಲೋಕ ವಿಖ್ಯಾತರಾದರು. ಶ್ರೀಪಾದರಾಜರು ಸಂಚಾರವನ್ನು ಮುಗಿಸಿ ಶ್ರೀರಂಗಕ್ಕೆ ಬಂದ ಸ್ವಲ್ಪ ದಿನಗಳಲ್ಲಿ ಸ್ವರ್ಣವರ್ಣತೀರ್ಥರು ಬೃಂದಾವನಸ್ಥರಾದರು. ಪದ್ಮನಾಭತೀರ್ಥರ ಮಠದ ಸರ್ವಾಧಿಪತ್ಯವು ಶ್ರೀಪಾದರಾಜರದಾಯಿತು.
ಶ್ರೀಪಾದರಾಜರು ವ್ಯಾಸ ಸಾಹಿತ್ಯ ಮತ್ತು  ದಾಸ ಸಾಹಿತ್ಯಕ್ಕೆ  ಅಪಾರವಾದ ಕೊಡುಗೆಯನ್ನು ಕೊಟ್ಟಿದ್ದಾರೆ.
ಪೂಜಾ ಕಾಲದಲ್ಲಿ ವೈದಿಕ ಪಂಡಿತರಿಂದ ವೇದ ಪಾರಾಯಣ ಮಾಡಿಸುವಂತೆ ದಾಸ ಸಾಹಿತ್ಯಕ್ಕೆ ಹೆಚ್ಚು ಮನ್ನಣೆ ಕೊಟ್ಟು ಭಾಗವತರ ಮುಖದಿಂದ ಕನ್ನಡ ದೇವರ ನಾಮಗಳನ್ನೂ ಹಾಡಿಸಿದರು. ಶ್ರೀಪಾದರಾದರು ಪೂಜಾ ಕಾಲದಲ್ಲಿ ಹಾಡುತ್ತಿದ್ದ ಹಾಡುಗಳು ಎಂದರೆ ಬ್ರಹ್ಮರ ಗೀತೆ, ವೇಣು ಗೀತೆ, ಗೋಪಿ ಗೀತೆಗಳು ‌ಸುಂದರ ಸಾಹಿತ್ಯದ ದಿವ್ಯ ಹಾಡುಗಳು ಶ್ರೀಪಾದರಾಯರ ಕಾಲದಲ್ಲಿ ಕನ್ನಡ ಸಾಹಿತ್ಯಕ್ಕೆ ಸನ್ಮಾನ ದೊರೆಯಿತು.
ಕನ್ನಡ ವಾಯುಸ್ತುತಿ ಎಂದೇ ಪ್ರಖ್ಯಾತವಾದ ಮಧ್ವನಾಮ ಎಲ್ಲರ ನರನಾಡಿಗಳಲ್ಲೂ ಇಂದಿಗೂ ಪ್ರಚಲಿತವಾಗಿದೆ.
ಶ್ರೀಪಾದರಾಜರ ಮಹಿಮೆಗಳು :
ಸಾಳ್ವ ನರಸಿಂಹರಾಜನಿಗೆ ಬಂದ ಬ್ರಹ್ಮಹತ್ಯಾ ದೋಷವನ್ನು ಶಂಖೋದಕದಿಂದ ಪರಿಹಾರ ಮಾಡಿದರು.
ವ್ಯಾಸರಾಯರು ಬಾಲಕರಾಗಿದ್ದಾಗ ಪುರುಷೋತ್ತಮತೀರ್ಥರ ಗುಹೆಯಲ್ಲಿ ಮಲಗಿರಲು ದೊಡ್ಡ ಅಜಗರ ಅವರನ್ನು ಸುತ್ತಿತ್ತು. ಶ್ರೀಪಾದರಾಜರು ಸರ್ಪ ಭಾಷೆಯಲ್ಲಿ ಮಾತನಾಡಿ ಸರ್ಪವನ್ನು ಬಿಡಿಸಿದರು.
ಸ್ವಪ್ನ ಸೂಚನೆಯಂತೆ ಭೀಮರತಿ ತೀರದಲ್ಲಿ ಭೂ ಸ್ಥಾಪಿತವಾಗಿದ್ದ ಸ್ವರ್ಣ ಪೀಠಿಕೆಯನ್ನು ತೆಗೆಸಿ ಅಲ್ಲಿ ದೊರೆತ ರಂಗವಿಠಲ ದೇವರನ್ನು ತಮ್ಮಲ್ಲಿ ಪೂಜೆಗಾಗಿ ಇಟ್ಟುಕೊಂಡರು. ಇದರ ದ್ಯೋತಕವಾಗಿ ಶ್ರೀಪಾದರಾಜರು  “ರಂಗವಿಠಲ” ಎಂಬ ಅಂಕಿತದಿಂದ ದೇವರನಾಮಗಳನ್ನು ರಚಿಸಿದ್ದಾರೆ.
ಇವರಿಗೆ ಪರಮಾತ್ಮನ ಅನುಗ್ರಹದಿಂದ ಸುಖ ಪ್ರಾರಭ್ಧವಿದೆ. ಇವರು ಎಲ್ಲಿದ್ದರೂ 64 ಭಕ್ಷ್ಯಗಳನ್ನು ಪರಮಾತ್ಮನಿಗೆ ನೈವೇದ್ಯ ಮಾಡಿ ಬಿಕ್ಷ ಸ್ವೀಕರಿಸುತ್ತಿದ್ದರು. ಒಂದು ಬಾರಿ ಒಬ್ಬ ವ್ಯಾಪಾರಿ ತಿರುಪತಿಗೆ ಸಾಮಾನುಸರಂಜಾಮಗಳನ್ನು ಕೊಂಡೊಯ್ಯುತ್ತಿದ್ದನು ಅವನಿಗೆ ತಿರುಪತಿಯ ಶ್ರೀನಿವಾಸನು ಸ್ವಪ್ನದಲ್ಲಿ ದರ್ಶನವಿತ್ತು ಆ ಕಾಡಿನಲ್ಲಿದ್ದ ಶ್ರೀಪಾದರಾಜರಿಗೆ ಎಲ್ಲವನ್ನು ಸಮರ್ಪಿಸುವಂತೆ ಸೂಚಿಸಿದನು. ಆಗ ಆ ವ್ಯಾಪಾರಿ ತಿರುಪತಿಗೆ ಹೋಗುತ್ತಿದ್ದ ದಾರಿಯಲ್ಲಿ ಶ್ರೀಪಾದರಾಜರು ಇರುವುದನ್ನು ತಿಳಿದು ಅವರಲ್ಲಿಗೆ ಬಂದು ತಾನು ತಂದಿದ್ದ ಎಲ್ಲಾ ಸಾಮಾನು ‌ಸರಂಜಾಮುಗಳನ್ನು ಅವರಿಗೆ ಅರ್ಪಿಸಿದನು. ಹೀಗಾಗಿ ಕಾಡಿನಲ್ಲಿದ್ದರೂ ಕೂಡ ಅವರು 64 ಬಗೆಯ ಭಕ್ಷಗಳನ್ನು ದೇವರಿಗೆ ಸಮರ್ಪಿಸಿದರು. ಈಗಲೂ ಶ್ರೀಪಾದರಾಜರನ್ನು ನೆನೆದವರಿಗೆ ಆಹಾರದ ಕೊರತೆ ಇರುವುದಿಲ್ಲ. ಶ್ರೀಪಾದರಾಜರ ಅನುಗ್ರಹದಿಂದ ವ್ಯಾಸರಾಜರು ತಿರುಪತಿಯ ಶ್ರೀನಿವಾಸನಿಗೆ 12 ವರ್ಷ ಪೂಜಿಸುವ  ಸೌಭಾಗ್ಯ ಲಭಿಸಿತು.
ಶ್ರೀ ಪಾದರಾಜರು ತಮ್ಮ ಸಾಧನ ಕ್ಷೇತ್ರವಾದ ಮುಳುಬಾಗಿಲಿನಲ್ಲಿ ಜೇಷ್ಠ ಶುದ್ಧ ಚತುರ್ದಶಿ ದಿನದಂದು ಬೃಂದಾವನಸ್ಥರಾದರು ಇಂದಿಗೂ ಎಲ್ಲರ ಮನೆ ಮನಗಳಲ್ಲಿ ಶಾಶ್ವತವಾಗಿ ಉಳಿದುಕೊಂಡಿದ್ದಾರೆ.
ವಿಜಯದಾಸರು ‘ನರಕ ನರಕದಲ್ಲಿ ಹೊರಳುವ ಮನುಜನೆ ಧರೆಯೊಳಿವರ ಚರಿತೆ ಅದಭುತ ಒಂದೊಂದು. ನಿರುತದಲಿ  ನೋಡು ತುಂಬಿ ಸೂಸುತಲಿದೆ ಅರುಣೋದಯದಲೆದ್ದು ಶ್ರೀಪಾದರಾಯರ ಸ್ಮರಿಸಿದ ಮಾನವನಿಗೆ ಸರ್ವಸಂಪದವು ಪರಮಗತಿಯಾಗುವುದು ಪರಿಹಾಸವಲ್ಲ ಕೇಳು. ಸುರಭೂಸುರ ಪ್ರಿಯ ವಿಜಯವಿಠಲನು ಕರುಣದಿಂದಲಿ ಮಹಾ ಉನ್ನತ ಪದವೀವ.’ ಎಂದಿದ್ದಾರೆ.
ಈ ಎರಡು ವಾಕ್ಕುಸುಮಗಳನ್ನು ಪತ್ಯಂತರ್ಗತ ಶ್ರೀಪಾದರಾಜ ಗುರ್ವಂತರ್ಗತ, ಗುರು ಮಧ್ವಂತರ್ಗತ ಅಂಭೃಣಿ ಪತಿ ವೇದವ್ಯಾಸ ದೇವರಲ್ಲಿ ಸಮರ್ಪಣೆ ಮಾಡುತ್ತಿದ್ದೇನೆ.

ಶ್ರೀ ಕೃಷ್ಣಾರ್ಪಣಮಸ್ತು

ನಹಂಕರ್ತಾ ಹರಿ:ಕರ್ತಾ

ಹೇಮಾಮಾಲಿನಿ ಶ್ರೀಧರಾಚಾರ್
ವೀ ಕೇ ನ್ಯೂಸ್
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";