ತುಮಕೂರು: ತುಮಕೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ಅನ್ನಪೂರ್ಣೇಶ್ವರಿ ಆಹಾರ ಸಮಿತಿ ವತಿಯಿಂದ ವಿತರಿಸುತ್ತಿರುವ ಬಿಸಿಯೂಟ ವಿತರಣಾ ಕೇಂದ್ರಕ್ಕೆ ರಾಜ್ಯಪಾಲರಾದ ಥಾವರ್ಚಂದ್ ಗೆಹ್ಲೋಟ್ ಅವರು ಮಂಗಳವಾರ ಭೇಟಿಕೊಟ್ಟು, ವಿದ್ಯಾರ್ಥಿಗಳಿಗೆ ತಾವೇ ಊಟ ಬಡಿಸುವ ಮೂಲಕ ಯೋಜನೆಗೆ ಮೆಚ್ಚುಗೆ ಸೂಚಿಸಿದರು.
ಪಾವಗಡ ರಾಮಕೃಷ್ಣ ಸೇವಾಶ್ರಮ ಹಾಗೂ ಶಿರಡಿ ಸಾಯಿಮಂದಿರ ಆದರ್ಶನಗರ ತುಮಕೂರು ಸಹಯೋಗದಲ್ಲಿ ಅನ್ನಪೂರ್ಣೇಶ್ವರಿ ಆಹಾರ ಸಮಿತಿಯವರು ಮಾಡುತ್ತಿರುವ ಕಾರ್ಯ ಅತ್ಯಂತ ಮಹತ್ವದ್ದಾಗಿ ಎಂದು ಶ್ಲಾಘಿಸಿದ ರಾಜ್ಯಪಾಲರು, ತಮ್ಮ ಘಟಿಕೋತ್ಸವ ಭಾಷಣದಲ್ಲೂ ಈ ಬಗ್ಗೆ ಪ್ರಸ್ತಾಪ ಮಾಡಿ ರಾಜ್ಯದಲ್ಲಿ ಬೇರೆ ಯಾವ ವಿವಿಯಲ್ಲೂ ಇಂತಹ ಯೋಜನೆ ಕಂಡಿಲ್ಲ. ತುಮಕೂರು ವಿವಿಯಲ್ಲಿ ಕೇವಲ ೫ ರೂಪಾಯಿಗೆ ಮಕ್ಕಳಿಗೆ ಊಟ ಕೊಡುತ್ತಿರುವುದು ಮಾದರಿಯಾಗಿದೆ ಎಂದು ಪ್ರಶಂಸಿಸಿದರು.
ಈ ವೇಳೆ ಯೋಜನೆ ಕುರಿತು ರಾಜ್ಯಪಾಲರಿಗೆ ವಿವರಿಸಿದ ಪಾವಗಡ ರಾಮಕೃಷ್ಣ ಸೇವಾಶ್ರಮದ ಮುಖ್ಯಸ್ಥರಾದ ಸ್ವಾಮಿ ಜಪಾನಂದಜೀ ಹಾಗೂ ಕುಲಪತಿ ಪ್ರೊ.ಎಂ.ವೆoಕಟೇಶ್ವರಲು ಅವರು ಕಳೆದ ಮೂರು ವರ್ಷಗಳಿಂದ ದಾನಿಗಳ ಸಹಕಾರ, ಸಮಿತಿ ಸದಸ್ಯರ ನಿಸ್ಪೃಹ ಕಾರ್ಯ ಬದ್ಧತೆಯಿಂದಾಗಿ ಯೋಜನೆ ಅನೂಚಾನವಾಗಿ ನಡೆದುಬಂದಿದ್ದು, ಪ್ರಸಕ್ತ ಊಟದ ಯೋಜನೆ ಪ್ರಯೋಜನ ಪಡೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ೪೦೦೦ಕ್ಕೆ ವಿಸ್ತರಣೆಯಾಗಿದೆ. ವಿವಿಯ ನೂತನ ಜ್ಞಾನಸಿರಿ ಕ್ಯಾಂಪಸ್ನ ವಿದ್ಯಾರ್ಥಿಗಳಿಗೂ ಊಟ ವಿತರಿಸುತ್ತಿದ್ದು, ದೂರದ ಊರುಗಳಿಂದ ಬೆಳಿಗ್ಗೆ ಹಸಿದು ಬರುವ ವಿದ್ಯಾರ್ಥಿಗಳಿಗೆ ಬಿಸಿಯೂಟ ಅನುಕೂಲವಾಗಿದೆ ಎಂದರು.
ಅನ್ನಪೂರ್ಣೆಶ್ವರಿ ಆಹಾರ ಸಮಿತಿ ಸದಸ್ಯರಾದ ಡಾ. ಎಸ್.ನಾಗಣ್ಣ , ಡಾ.ಎಚ್.ಜಿ.ಚಂದ್ರಶೇಖರ್, ಡಾ.ರಮೇಶ್ಬಾಬು, ನಟರಾಜಶೆಟ್ಟಿ, ಕುಲಸಚಿವರುಗಳು, ಕಾಲೇಜಿನ ಪ್ರಾಂಶುಪಾಲೆ ಪ್ರೊ.ದ್ರಾಕ್ಷಾಯಿಣಿ, ಹಾಜರಿದ್ದರು.