ಬೆಂಗಳೂರು: ಹಿಂದೂ ಯುವಕ – ಯುವತಿಯರಲ್ಲಿ ಶೌರ್ಯ ಮತ್ತು ಪರಾಕ್ರಮ ಜಾಗೃತಿ ಮೂಡಿಸಲು ಅವರಲ್ಲಿ ರಾಷ್ಟ್ರಪ್ರೇಮ ಮತ್ತು ಧರ್ಮಪ್ರೇಮವನ್ನು ಜಾಗೃತಗೊಳಿಸಲು ಶೌರ್ಯ ಪ್ರಶಿಕ್ಷಣ ಶಿಬಿರವನ್ನು ದಾಸರಹಳ್ಳಿಯಲ್ಲಿ ಆಯೋಜಿಸಲಾಗಿತ್ತು. ಎಲ್ಲಾ ಯುವಕ ಯುವತಿಯರಿಗೆ ಸ್ವರಕ್ಷಣೆಯೊಂದಿಗೆ, ರಾಷ್ಟ್ರರಕ್ಷಣೆ ಹಾಗೂ ಧರ್ಮರಕ್ಷಣೆಗಾಗಿ ಲಾಠಿ ತರಬೇತಿಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಬೆಂಗಳೂರು ಜಿಲ್ಲಾ ಸಮನ್ವಯಕ ಶರತ್ ಕುಮಾರ್ ಭಾಗವಹಿಸಿದ್ದರು.
ಶರತ್ ಕುಮಾರ್ ಶಿಬಿರಾರ್ಥಿಗಳೊಂದಿಗೆ ಮಾತನಾಡುತ್ತ ಯಾವ ಮನುಷ್ಯ ಇತಿಹಾಸ ಮರೆಯುವುದಿಲ್ಲವೋ ಅವರೇ ಇತಿಹಾಸ ನಿರ್ಮಿಸಬಲ್ಲರು. ಹಾಗೆಯೇ ಯಾರು ಇತಿಹಾಸ ಮರೆಯುತ್ತಾರೋ ಅವರಿಂದ ಖಂಡಿತ ಇತಿಹಾಸ ನಿರ್ಮಿಸಲು ಸಾಧ್ಯವಿಲ್ಲ. ನಮ್ಮ ಇತಿಹಾಸ ಎಷ್ಟು ಜ್ವಾಜಲ್ಯಮಾನ, ಪರಾಕ್ರಮ ಮತ್ತು ಆದರ್ಶವಾಗಿದೆ ಎಂದರೆ ಜಗತ್ತಿನ ಇತರ ಯಾವುದೇ ಧರ್ಮಕ್ಕೆ ಅಥವಾ ಯಾವುದೇ ದೇಶಕ್ಕೆ ಇಂತಹ ಇತಿಹಾಸ ಪರಂಪರೆ ಲಭಿಸಿಲ್ಲ. ಅನೇಕ ಆಕ್ರಮಣಕಾರರು ಬಂದರು ಆದರೆ ನಮ್ಮ ಶೂರ ವೀರ ಹಿಂದೂ ರಾಜ-ರಾಣಿಯರು ಅವರನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದರು. ಕರುನಾಡ ವೀರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರು ಕೊನೆಯುಸಿರಿರುವ ತನಕ ಕಿತ್ತೂರಿನ ರಕ್ಷಣೆಗಾಗಿ ಸೆಣೆಸಾಟ ನಡೆಸಿದರು, ಸಾಮಾನ್ಯ ಜನರ ಪಡೆಯನ್ನು ಕಟ್ಟಿ ಅಸಾಮಾನ್ಯ ಪರಾಕ್ರಮ ತೋರಿಸಿ ಬ್ರಿಟಿಷರ ವಿರುದ್ಧ ಹೋರಾಡಿದ ನಮ್ಮ ಕರುನಾಡಿನ ಸ್ತ್ರೀರತ್ನ ಕಿತ್ತೂರಿನ ರಾಣಿ ಚೆನ್ನಮ್ಮ, ಭಾರತಮಾತೆಯ ಕಿರೀಟವಾದ ಕಾಶ್ಮೀರದ ರಕ್ಷಣೆಗಾಗಿ ಜನರಲ್ ಕಾರ್ಯಪ್ಪ ಅವರು ಯಾವ ರೀತಿ ಹೋರಾಡಿದರು ಮತ್ತು ಇಂದು ನಮ್ಮ ಸೈನಿಕರು ರಾಷ್ಟ್ರ ರಕ್ಷಣೆಗೆ ತಮ್ಮ ರಕ್ತ ಕೊಟ್ಟಾದರೂ ಹೊರಡುತ್ತಾರೆ ಎಂದರು.
ಭಾರತದಾದ್ಯಂತ ಕೆಲವು ವರ್ಷಗಳಿಂದ ಸಮಿತಿಯು ಯುವಕ ಯುವತಿಯರಿಗೆ ಶೌರ್ಯ ಪ್ರಶಿಕ್ಷಣ ತರಬೇತಿ ಶಿಬಿರವನ್ನು ಆಯೋಜಿಸುತ್ತಿದ್ದು ಸಾವಿರಾರು ಹಿಂದೂ ಯುವಕ – ಯುವತಿಯರು ಇದರ ಲಾಭವನ್ನು ಪಡೆಯುತ್ತಿದ್ದಾರೆ. ಇಂದು ಯಾವುದೇ ವ್ಯಕ್ತಿ ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯಗಳ ವಿರುದ್ಧ, ದೇಶ ವಿರೋಧಿ ಶಕ್ತಿ, ದೇವಸ್ಥಾನಗಳ ಹಾನಿ, ದೇವತೆಗಳ ವಿಡಂಬನೆ, ನಕ್ಸಲ್ ವಾದಿಗಳ ವಿರುದ್ಧ ಹೋರಾಟ ಮಾಡಬೇಕಾದರೆ ಮೊದಲು ಅವನು ಧೈರ್ಯವಂತನಾಗಿರಬೇಕು , ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಕ್ಷಮನಾಗಿರಬೇಕು. ಈ ಭವ್ಯ ಭಾರತದಲ್ಲಿ ಜನ್ಮ ಸಿಗುವುದೇ ದುರ್ಲಭವಾಗಿದೆ, ಯುವಕ- ಯುವತಿಯರು ತಮ್ಮ ಯೌವನ ಅವಸ್ಥೆಯಲ್ಲಿ ರಾಷ್ಟ್ರಕ್ಕಾಗಿ ಏನಾದರೂ ಮಾಡಲೇಬೇಕು. ಯುವ ಶಕ್ತಿಯ ಮೇಲೆ ಸ್ವಾಮಿ ವಿವೇಕಾನಂದರು ಬಹಳ ವಿಶ್ವಾಸ ಇಟ್ಟಿದ್ದರು. ಭಾರತವನ್ನು ವಿಶ್ವಗುರುವನ್ನಾಗಿಸುವಲ್ಲಿ ಇಂದಿನ ಯುವಕರ ಪಾತ್ರ ಮಹತ್ವದ್ದಾಗಿದೆ. ಅವರನ್ನು ಸದೃಢವಾಗಿಸುವ ಜೊತೆಗೆ ಆತ್ಮಸ್ಥೈರ್ಯವನ್ನು ಜಾಗೃತಗೊಳಿಸುವ ಕಾರ್ಯವು ಇಂತಹ ತರಬೇತಿ ಶಿಬಿರಗಳಿಂದ ಸಾಧ್ಯವಾಗುತ್ತದೆ