ಬಿಲ್ಲವಾಸ್ ಕತಾರ್ ನ ಸಾಂಸ್ಕತಿಕ ಕಾರ್ಯದರ್ಶಿ ಶ್ರೀಮತಿ ಪೂಜಾ ಜಿತಿನ್ ಅವರು ಪ್ರಾಸಂಗಿಕ ಭಾಷಣದ ಮೂಲಕ ಸ್ವರ ಲಹರಿಗೆ ಶುಭಾರಂಭಗೈದರು. ನೆರೆದ ವಿಶೇಷ ಗಣ್ಯರು, ಸಲಹಾಸಮಿತಿ, ಪ್ರಾಯೋಜಕರು ,ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿಯ ಉಪಸ್ಥಿತಿಯಲ್ಲಿ ವಿಧಿವತ್ತಾಗಿ ದೀಪ ಬೆಳಗಿಸಿ ಸ್ವರ ಲಹರಿಯ ಉದ್ಘಾಟನೆ ಮಾಡಲಾಯಿತು . ಆಮಂತ್ರಿತ ಗಣ್ಯರಿಗೆಲ್ಲಾ ಪುಷ್ಪಗುಚ್ಛ ವನ್ನು ಕೊಟ್ಟು ಪ್ರೀತಿ ಪೂರ್ವಕವಾಗಿ ಸ್ವಾಗತಿಸಲಾಯಿತು.
ಬಿಲ್ಲವಾಸ್ ಕತಾರ್ ನ ಅಧ್ಯಕ್ಷೆ ಶ್ರೀಮತಿ ಅಪರ್ಣ ಶರತ್ ಅವರು ಬಿಲ್ಲವಾಸ್ ಕತಾರ್ ನ ಧ್ಯೇಯೋದ್ದೇಶಗಳ ಬಗ್ಗೆ ಬೆಳಕು ಚೆಲ್ಲುತ್ತಾ ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಡಾ. ವೈಭವ್ . ಎ. ಟಿ. ಕೌನ್ಸಿಲರ್ (ಚಾನ್ಸೆಲರಿ ಮತ್ತು ಕೌನ್ಸಿಲರ್ ಮುಖ್ಯಸ್ಥರು), ಭಾರತೀಯ ರಾಯಭಾರಿ ಕಚೇರಿ, ಅವರು ಬಿಲ್ಲವಾಸ್ ಕತಾರ್ ನ ಸಾಧನೆಯನ್ನು ಕೊಂಡಾಡಿ, ಭವಿಷ್ಯದಲ್ಲಿ ಇನ್ನಷ್ಟು ವಿಶೇಷ ಕಾರ್ಯಕ್ರಮಗಳನ್ನು ಕೊಡುವುದರ ಮೂಲಕ ವಿಜೃಂಭಿಸಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಗಣ್ಯರಾದ ಶ್ರೀ ಮಣಿಕಂಠನ್ ಎ. ಪಿ. (ಅಧ್ಯಕ್ಷರು, ಐ.ಸಿ.ಸಿ, ಕತಾರ್ ),
ಶ್ರೀ ದಿವಾಕರ ಪೂಜಾರಿ ( ಸ್ಥಾಪಕಾಧ್ಯಕ್ಷರು, ಬಿಲ್ಲವಾಸ್ ಕತಾರ್ ) ಮತ್ತು ಶ್ರೀ ಚಿದಾನಂದ ನಾಯ್ಕ್ (ಪ್ರಧಾನ ವ್ಯವಸ್ಥಾಪಕ, ಎಂ. ಪಲ್ಲೋಂಜಿ ಡಬ್ಲ್ಯು.ಎಲ್.ಎಲ್. ಮತ್ತು ಪ್ರಮುಖ ಪ್ರಾಯೋಜಕರು ) ಅವರುಗಳನ್ನು ಆದರದಿಂದ ಸಂಮಾನಿಸಿ ಸ್ಮರಣಿಕೆ ನೀಡಲಾಯಿತು . ಎಲ್ಲಾ ಮಹನೀಯರು ಬಿಲ್ಲವಾಸ್ ಕತಾರ್ ನ ಪ್ರಶಂಸೆಗೈದರು.
ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು, ಶಿಖರ (ಎಪೆಕ್ಸ್ )ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಕರ್ನಾಟಕದ ವಿವಿಧ ಸಂಘಟನೆಗಳ ನಾಯಕರು ಮತ್ತು ಪ್ರತಿನಿಧಿಗಳು, ಈ ಕಾರ್ಯಕ್ರಮದಲ್ಲಿ ಹಾಜರಿದ್ದು, ಸ್ವರ ಸಂಜೆಗೆ ವಿಶೇಷ ಕಳೆ ತಂದು ಕೊಟ್ಟರು. ಸಭಾ ಕಾರ್ಯಕ್ರಮವನ್ನು ವಸುಧಾ ಕೋಟ್ಯಾನ್ ಅವರು ಅಚ್ಚು ಕಟ್ಟಾಗಿ ನೆರವೇರಿಸಿ ಕೊಟ್ಟರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೃಂಭಿಸಿದ ನೃತ್ಯ ತಂಡಗಳಾದ ವಿಷ್ ಡಾನ್ಸ್ ಸ್ಟುಡಿಯೋ, ಜೂನಿಯರ್ ರಾಕ್ಸ್ಟಾರ್ಸ್, ಶ್ಯಾಮಾ ಹಂಸ (ತಿಲ್ಲಾನಾ), ಮತ್ತು ದೇಶಿ ಸ್ವ್ಯಾಗ್, ಸುವರ್ಣ (ಗೋಲ್ಡ್ ) ಪ್ರಾಯೋಜಕರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಶ್ರೀ ಸುಬ್ರಮಣ್ಯ ಹೆಬ್ಬಾಗಿಲು , ಐ, ಎಸ್. ಸಿ, ಸಲಹಾ ಸದಸ್ಯರು ಅವರಿಗೆ ವಿಶೇಷ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಎಲ್ಲಾ ಕಲಾವಿದರನ್ನು ವಿಶೇಷವಾಗಿ ಸಂಮಾನಿಸಿ ಅವರ ಕಲಾ ಸೇವೆಗೆ ವಿನಯಪೂರ್ವಕ ಗೌರವ ಸಲ್ಲಿಸಲಾಯಿತು.
ಬಿಲ್ಲವಾಸ್ ಕತಾರ್ ನ ಮಾಜಿ ಅಧ್ಯಕ್ಷರು ಮತ್ತು ಸಲಹಾ ಮಂಡಳಿಯ ಮುಖ್ಯಸ್ಥರಾದ ರಘುನಾಥ್ ಅಂಚನ್ , ಸಲಹಾ ಸಮಿತಿಯ ಸರ್ವ ಸದಸ್ಯರು, ಕಾರ್ಯಕಾರಿ ಮಂಡಳಿ, ಸ್ವಯಂ ಸೇವಕರು ಮತ್ತು ಎಲ್ಲಾ ಸದಸ್ಯರು ಅಹರ್ನಿಶಿ ದುಡಿದು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.
ಬಿಲ್ಲವಾಸ್ ಕತಾರ್ ನ ಉಪಾಧ್ಯಕ್ಷರಾದ ಜಯರಾಮ ಸುವರ್ಣ ಅವರು ಎಲ್ಲರಿಗೂ ಧನ್ಯವಾದಗೈದರು. ಎಲ್ಲರ ಮನ ಸೂರೆಗೈದ ಸ್ವರ ಲಹರಿ ಬಿಲ್ಲವಾಸ್ ಕತಾರ್ ನ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿ ಎಲ್ಲರ ಮನದಂತರಾಳದದಲ್ಲಿ ಹೊಸ ಛಾಪನ್ನು ಮೂಡಿಸಿತು.