ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗುಂದಿ ಗ್ರಾಮದ ತುಂಗಭದ್ರಾ ನದಿಯ ಮಧ್ಯದಲ್ಲಿರುವ ನವವೃಂದಾವನ ಗಡ್ಡೆಯಲ್ಲಿ ಮೂರು ದಿನಗಳ ಶ್ರೀ. ರಘುವರ್ಯತೀರ್ಥರ ಆರಾಧನಾ ಮಹೋತ್ಸವಕ್ಕೆ ಶುಕ್ರವಾರ ಅದ್ದೂರಿ ಚಾಲನೆ ನೀಡಲಾಯಿತು. ಶ್ರೀಮನ್ ಮಧ್ವಾಚಾರ್ಯ ಮೂಲ ಸಂಸ್ಥಾನದ ಶ್ರೀರಘುವರ್ಯತೀರ್ಥರ ಪೂರ್ವಾರಾದನೆ ಆರಂಭಗೊಂಡಿದ್ದು, ಶ್ರೀ ಉತ್ತರಾದಿ ಮಠದ ಪೀಠಾಧಿಪತಿಗಳಾದ ಶ್ರೀಸತ್ಯಾತ್ಮತೀರ್ಥ ಶ್ರೀಪಾದಂಗಳವರು ಹಾಗೂ ಕೂಡ್ಲಿ ಆರ್ಯ ಶ್ರೀಅಕ್ಷೋಭ್ಯತೀರ್ಥ ಮಠದ ಶ್ರೀರಘುವಿಜಯ ತೀರ್ಥ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಮೂರು ದಿನಗಳ ನವೃಂದಾವನದಲ್ಲಿ ಒಂದಾದ ಶ್ರೀರಘುವರ್ಯತೀರ್ಥರ ಆರಾಧನಾ ಮಹೋತ್ಸವ ನಡೆಯಲಿದೆ.
ಪೂರ್ವಾರಾಧನೆ ಅಂಗವಾಗಿ ಶ್ರೀಮದ್ ಉತ್ತರಾದಿ ಮಠದ ಶ್ರೀಪಾದಂಗಳವರಿಂದ ನ್ಯಾಯ ಸುಧಾ ಪಾಠ, ಭಕ್ತರಿಗೆ ಮುದ್ರಾ ಧಾರಣೆ, ಉಭಯ ಶ್ರೀಗಳಿಂದ ಶ್ರೀಪದ್ಮನಾಭ ತೀರ್ಥರ ಮೂಲ ವೃಂದಾವನ ಮುಂಭಾಗದಲ್ಲಿ ನೆಲೆಸಿರುವ ಶ್ರೀರಘುವರ್ಯತೀರ್ಥರ ಮೂಲ ಬೃಂದಾವನಕ್ಕೆ ಮಹಾಪಂಚಾಮೃತ ಅಭಿಷೇಕ ನಂತರ ಸಂಸ್ಥಾನ ಪೂಜೆ, ಯತಿಗಳಿಗೆ ಹಸ್ತೋದಕ, ಭಕ್ತರಿಗೆ ತೀರ್ಥ- ಪ್ರಸಾದ ವಿನಿಯೋಗ, ಸಾಯಂಕಾಲ ಸಭಾ ಕಾರ್ಯಕ್ರಮಗಳು ಜರುಗಿದವು.
ಮೂರು ದಿನಗಳ ಕಾಲ ವಿದ್ವಾಂಸರ ಪ್ರವಚನ ಸೇರಿದಂತೆ ಅನೇಕ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಉಭಯ ಶ್ರೀಗಳ ಅನುಗ್ರಹ ಸಂದೇಶ, ಅಷ್ಟಾವಧಾನ ಕಾರ್ಯಕ್ರಮ, ಮಹಾಮಂಗಳಾರತಿ ಸೇರಿದಂತೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಮೂರು ದಿನಗಳ ಕಾಲ ನಡೆಯಲಿವೆ. ಅಲ್ಲದೆ, ಶ್ರೀರಘೂತ್ತಮತೀರ್ಥರ ಕೋಟಿ ಪಾರಾಯಣ ಜಪಯಜ್ಞದ ಅಂಗವಾಗಿ
ಪಂಡಿತ. ರಾಮಾಚಾರ್ಯ ಉಮರ್ಜಿ ಅವರಿಂದ ವಿಷ್ಣು ತತ್ವ ನಿರ್ಣಯ ಭಾವ ಬೋಧ ಗ್ರಂಥದ ಅನುವಾದ, ಪಂಡಿತ ಕೆರೂರು ಕೇಶವ ಆಚಾರ್ಯ ಅವರಿಂದ ತತ್ವ ಪ್ರಕಾಶಿಕ ಭಾವ ಬೋಧ ಅನುವಾದ ಕುರಿತ ಕಾರ್ಯಕ್ರಮಗಳು ಆಯೋಜನೆಗೊಂಡಿವೆ.
ಮಠದ ದಿವಾನರಾದ ಪಂಡಿತ ಶಶಿಧರಚಾರ್ಯರು, ಉಮರ್ಜಿ ಶ್ರೀಕರಾಚಾರ್ಯಾ, ಮಹಿಷಿ ಆನಂದ ಆಚಾರ್ಯರು,ನರಸಿಂಹ ಆಚಾರ್ಯ ಯಲಬುರ್ಗಾ, ಉಮರ್ಜಿ ರಾಮಾಚಾರ್ಯರು, ಬಳ್ಳಾರಿ ರಾಘವೇಂದ್ರ ಆಚಾರ್ಯರು, ವ್ಯವಸ್ಥಾಪಕರಾದ ಅಕ್ಕಲಕೋಟ ಆನಂದಆಚಾರ್ಯರು , ಮುರಗೋಡು ವಿಜಯ ವಿಠಲ ಆಚಾರ್ಯರು, ಮಠದ ಸಾರ್ವಜನಿಕ ಸಂಪರ್ಕ ಅಧಿಕಾರಿ ಶ್ರೀಪ್ರಸನ್ನಾಚಾರ್ಯ ಕಟ್ಟಿ ,ವಿಷ್ಣು ತೀರ್ಥ ಆಚಾರ್ಯ ಜೋಶಿ, ಅಖಿಲ ಆಚಾರ್ಯ ಅತ್ರೆ, ವೆಂಕಟಗಿರಿ ಆಚಾರ್ಯ ಅನ್ವೇರಿ ಅವರನ್ನು ಒಳಗೊಂಡಂತೆ ಅನೇಕ ಮಠದ ಪಂಡಿತ ಗಣ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವರದಿ: ಹನುಮೇಶ್ ಕೆ ಯಾವಗಲ್