ಬೆಳಿಗ್ಗೆ ಎಂಟು ಗಂಟೆ. ಸೋಮುವಾರ ವಾರದ ಪೂಜೆಗೆ ಹೂ ಹಣ್ಣು, ತಿಂಡಿಗೆ ತರಕಾರಿ ತರಲು ನಗರದ ಕಟ್ಟಿನಕೆರೆ ಮಾರ್ಕೇಟಿಗೆ ಬಂದಿದ್ದೆ. ಪಿಕ್ಚರ್ ಪ್ಯಾಲೇಸ್ ಥಿಯೇಟರ್ನಲ್ಲಿ ಹಳೇ ಚಿತ್ರದ ಪೋಸ್ಟರ್ ಕಣ್ಣಿಗೆ ಬಿತ್ತು. ಅದು ಅಂದಿನ ಕಾಲದ ಬಾಂಡ್ ಸಿನಿಮಾ ಜೇಡರ ಬಲೆ. ವಿದ್ಯಾರ್ಥಿ ದಿನಗಳಲ್ಲಿ ನಮ್ಮೂರ ಶ್ರೀ ಯೋಗನರಸಿಂಹಸ್ವಾಮಿ ಜಾತ್ರೆಗೆ ನೋಡಿದ್ದೆ. ಅದೇನು ಭಯಂಕರ ಹೊಡೆದಾಟ, ನಮ್ಮೂರ ಜಯಣ್ಣ, ಎತ್ತಿನಗಾಡಿಗೆ ಪೋಸ್ಟರ್ ಅಳವಡಿಸಿ ‘ ನೋಡಲು ಮರೆಯದಿರಿ. ಮರೆತು ಮರುಗದಿರಿ. ಭಯಂಕರ ಹೊಡೆದಾಟಗಳಿಂದ ಕೂಡಿದ ಚಿತ್ರ. ಜೇಡರಬಲೆ..ಎಂ.ಪಿ.ಶ0ಕರ್ ಕೊಲೆ.. ಜಯಣ್ಣನ ರೋಚಕ ಪ್ರಚಾರಕ್ಕೆ ಆಕರ್ಷಿತನಾಗಿ ಟೆಂಟ್ ಸಿನಿಮಾದಲ್ಲಿ ಫ್ರಂಟ್ (ನೆಲ) ನಲ್ಲಿ ಕುಳಿತು ಸಿನಿಮಾ ನೋಡಿದ್ದೆ. ದಡ್.! ನನ್ನ ಕುತ್ತಿಗೆ ಮೇಲೆ ಬಲವಾದ ಪೆಟ್ಟು ಬಿದ್ದು ತಿರುಗಿ ನೋಡಿದೆ. ಕಟ್ಟುಮಸ್ತಾದ ಆಳು! ಕನ್ನಡದ ಕಟ್ಟಾಳು! ಮೀಸೆ ಗೋಪಾಲ. ಬಿದ್ದ ಏಟಿನ ನೋವಿಗೆ ದವಡೆಗೆ ಹೊಡೆಯುವ ಸಿಟ್ಟು ಬಂದರೂ ಹೊಡೆಯಲಾದೀತೆ ಈ ಬಡಕಲು ಶರೀರದ ಕವಿಗೆ.! ಶಕುನಿಯ ಮಾಯ ನೋಟದಂತೆ ಪೋಸ್ ಕೊಟ್ಟು ವಕ್ರನೋಟದಿ ನಕ್ಕೆ.
“ಎಲ್ಲಿಗೆ ಹೊರಟ್ಯೋ ವಿಕಟಕವಿ. ಬಾ ಟೀ ಕುಡಿಸು..
” ತರಕಾರಿ ತರಲು ಹೋಗಬೇಕು ಗುರು.. “ ಹೋಗುವೆ ಬಾ. ಅಪರೂಪಕ್ಕೆ ಸಿಕ್ಕಿದ್ದೀಯ. ಗುರು ಭವನದಲ್ಲಿ ಟೀ ಕುಡಿಸು ಬಾ.. ಎಂದು ಹೊರಟ ಕಟ್ಟಾಳುವನ್ನು ಹಿಂಬಾಲಿಸಿದೆ. ಗುರು ಭವನದಲ್ಲಿ ನಮ್ಮ ಗುರುಗೋಪಾಲರು ಒಂದು ಮಸಾಲೆ ದೋಸೆಗೆ ಆರ್ಡರ್ ಮಾಡಿದರು.
“ ನಿನಗೆ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ಸಿಕ್ಕಿಲ್ಲವೇನೋ ಕವಿ.. ದೋಸೆಯನ್ನು ಬಾಯಿಗೆ ತುರುಕುತ್ತಾ ಕೇಳಿದರು ಗುರುಗಳು.
“ ಇಲ್ಲಾ ಗುರುವೇ. ಪ್ರಶಸ್ತಿಗೆ ಅರ್ಜಿ ಹಾಕಿ ಪ್ರಶಸ್ತಿ ಪಡೆಯಬೇಕೆ? ಗುರುತಿಸಿಕೊಡುವುದು ಧರ್ಮ ಅಲ್ಲವೇ..?
“ಅಯ್ಯೋ ನಿನ್ನ ಕರ್ಮವೇ.! ಎಷ್ಟು ಪುಸ್ತಕ ಬರೆದಿದ್ದಿಯ..?
“ ಅರವತ್ತು ದಾಟಿದೆ.. ವಯಸ್ಸು ಅರವತ್ನಾಲ್ಕು ದಾಟಿದೆ.
“ ಜಿಲ್ಲೆದು ಆಗಿದೆ ಅಲ್ವೆ.? ಹೌದು ಬಹಳ ಹಿಂದೆಯೇ ಆಗಿದೆ..
ಸರಿ, ಏನಾದ್ರೂ ಮಾಡುವ.. ಈಗ ಒಂದು ಟೀಗೆ ಆರ್ಡರ್ ಮಾಡು..ಬೈಟು ಹೇಳಬೇಡ.
“ಸರಿ ಅಣ್ಣ.. ಎಂದು ಬಾಯಿಬಿಟ್ಟು ಹೇಳಿ ವಯಸ್ಸಿನಲ್ಲಿ ನನಗಿಂತ ಸಣ್ಣ..ಎಂದು ಗೊಣಗಿಕೊಂಡೆ. ‘ಡರ್..! ಎಂದು ತೇಗಿ ‘ಹುಳಿ ತೇಗೆಂದು ಗೊಣಗಿದರು ಗುರು ದ್ರೋಣಚಾರ್ಯರು ಬಿಲ್ಲು ಬಿಡಲಿಲ್ಲ. ನಾನು ಕೊಟ್ಟೆ. ಹೋಟೆಲ್ ನಿಂದ ಹೊರಗೆ ಬಂದೆವು. ಅಣ್ಣ ನೀವೀಗ ಫಿಲಂ ಸೆನ್ಸಾರ್ ಮಂಡಳಿಯ ಸದಸ್ಯರಲ್ಲವೇ..
“ ಕಟ್.! ಹೇ ವಿಕಟಕವಿ ಆ ಸೆನ್ಸಾರ್ ವಿಷಯವೆಲ್ಲಾ ಹಾದಿ ಬೀದಿಯಲ್ಲಿ ಮಾತನಾಡಬಾರದು.. ಎಂದು ನನ್ನ ಮಾತಿಗೆ ಕತ್ತರಿ ಹಾಕಿ “ಈಗ ಹೇಳು ನಿನ್ನ ಬರವಣಿಗೆ ಹೇಗೆ ಸಾಗಿದೆ. ಬರೇ ಚುಟುಕ ಬರೆದುಕೊಂಡು ಸಮಾಜವನ್ನು ಕುಟುಕುತ್ತಿರುವೆಯಾ ಹೇಗೆ ಕಟುಕ..?
“ಅಣ್ಣಾವರ ಮಾತು ಯಾವಾಗಲೂ ಕಟುವೇ.! ಏನೂ ಮಾಡುವುದು ಮಾತು ಎಷ್ಟೇ ಕಹಿಯಾದರೂ ಅರಗಿಸಿಕೊಳ್ಳಲೇಬೇಕು.
‘ಹಾಂ ಗೋಪಾಲ್ ಜೀ.. ದಿನಾ ಬೆಳಿಗ್ಗೆ ನಮ್ಮ ಹಾಸನ್ ಚುಟುಕು ಕವಿ ಕುಮಾರ್ ಅವರು ಹೊಸ ಹೊಸ ಹಸನಾದ ಕವಿತೆ ಹೊಸೆದು ವ್ಯಾಟ್ಸಪ್ನಲ್ಲಿ ನಿಮ್ಮ ನಂಬರನ್ನು ನಮ್ಮ ರೈರ್ಸ್ ಗ್ರೂ:ಪ್ಗೆ ಸೇರಿಸಲೇ..
“ ಯಾವುದೇ ಕಾರಣಕ್ಕೂ ಬೇಡ. ನಾನು ಈಗಾಗಾಲೇ ಸಾಕಷ್ಟು ರೈರ್ಸ್ ಗ್ರೂಪ್ ನಿಂದ ಲೆಫ್ಟ್ ಆಗಿದ್ದೇನೆ. ಇರಲಿ, ನೀನು ಆಗೆಲ್ಲಾ ಲೋಕಲ್ ಪೇಪರ್ ನಲ್ಲಿ ಚುಟುಕು ಬರೀತ್ತಿದ್ದೆಯೆಲ್ಲಾ.. ಇನ್ನೂ ಜಿಲ್ಲೆಯಲ್ಲೇ ಉಳಿದಿದ್ದಿಯೋ.. ಸ್ಟೇಟ್ಗೆ ಪ್ರಮೋಟ್ ಆಗಿದ್ದೀಯೊ..? ಮೊನ್ನೆ ಯಾವುದೋ ನ್ಯೂಸ್ ಪೇಪರ್ನಲ್ಲಿ ನಿನ್ನ ನಾನ್ಸೆನ್ಸ್ ಪೊಯೆಂ ನೋಡಿದೆ. ಸರಿ, ಹೇಗಾದ್ರೂ ರ್ಕೊಂಡು ಸಾಯಿ. ಈಗ ನನ್ನ ತಲೆ ಬಿಸಿ ಆಗಿದೆ. ಒಂದು ಬರಕ್ಲೇ ಸಿಗರೇಟು ಕೊಡಿಸು ಬಾ ಎಂದು ಬೀಡಾ ಅಂಗಡಿಗೆ ಕರೆದೊಯ್ದರು. ಅಣ್ಣನನ್ನು ಬೇಗ ಬೀಳ್ಕೊಡಬೇಕು. ಇಲ್ಲವಾದರೇ ಬೀಳುತ್ತೆ ಬರೆ.!
“ಇತ್ತೀಚಿಗೆ ನವ್ಯ ಕವಿಗಳು ಜಡೆ ಕವಿತೆ ಬರೆಯುತ್ತಿದ್ದಾರಲ್ಲಾ. ನೀನ್ಯಾವ ಜಡೆಗೆ ಕೈ ಹಾಕಿಲ್ಲವೇನೋ ವಿಕಟಕವಿ. ಸಿಗರೇಟ್ ಹೊಗೆ ಉಗುಳಿ ಅಣ್ಣ ನಿರಾಳ ಮನಸ್ಥಿತಿಗೆ ಬಂದರು.
‘ಗೋಪಾಲು, ನಾನಿನ್ನು ಜಡೆ ಕವಿತೆ ಬರೆಯಲು ಪ್ರಯತ್ನಿಸಿಲ್ಲ. ಆದರೆ ಹಿಂದೊಮ್ಮೆ ಟೂ ಲೈನ್ ಚುಟುಕ ಬರೆದಿದ್ದೆ. ಅದನ್ನು ಇಲ್ಲೇ ಈಗಲೇ ವಾಚಿಸುವೇ ಕೇಳಿ ಪ್ಲೀಸ್..
ದ್ರೌಪದಿ ತೊಟ್ಟಿದ್ದರೆ ಚೂಡಿದಾರ
ದುಶ್ಯಾಸನ ಎಳೆಯುತ್ತಿದ್ದನೆ ದಾರ..
“ಲೇ ಪ್ರಾಸ ಕವಿ, ನೀನು ಹೀಗೆ ಹಾದಿ ಬೀದಿಯಲ್ಲೆಲ್ಲಾ ಚುಟುಕು ವಾಚಿಸಿದರೆ ಅಟ್ಟಿಬಿಡುವೆ ರುದ್ರಪಟ್ಟಣಕ್ಕೆ.! ಲೇ ಕವಿ, ಯಾಕೋ ಹೊಟ್ಟೆನೋವು ಶುರು ಆಗ್ತಾ ಇದೆ. ಈಗ ಗ್ಯಾಸ್ಗೆ ಟ್ರಬಲ್ ಟ್ಯಮ್. ಅವನ್ಯಾರೋ, ಹಳೇ ದೋಸೆ ಮಗಚಿ ಹಾಕಿ ನನ್ನ ಹೊಟ್ಟೆಗೆ ಗ್ಯಾಸ್ ತಂದಿಟ್ಟದ್ದಾನೆ. ಸರಿ ನೀನು ಮನೆಗೆ ಹೊರಡು. ನಾನು ಹೊರಡುತ್ತೇನೆ. ಇದೇ ಇವತ್ತಿನ ಮೊದಲನೇ ಪಾಠ. ಅಂದ್ಹಾಗೆ ನಿನ್ನ ಚುಟುಕು ಕೇಳಿ ನನಗೆ ನೆನಪಾಯಿತು. ಇವತ್ತು ಹಾಸನಾಂಬ ಕಲಾಕ್ಷೇತ್ರದಲ್ಲಿ ಕುರುಕ್ಷೇತ್ರ ನಾಟಕದಲ್ಲಿ ದ್ರೌಪದಿ ವಸ್ತಾçಪಹರಣ ದೃಶ್ಯ ವೀಕ್ಷಿಸಿ ಸೆನ್ಸಾರ್ ಮಂಡಳಿಗೆ ವರದಿ ಕಳಿಸಬೇಕು.. ಎಂದು ಸಿಗರೇಟ್ ತುಂಡನ್ನು ಕಾಲಿನಿಂದ ಹೊಸಕಿ ದುಶ್ಯಾಸನನಂತೆ ನಕ್ಕನು.
ಅಯ್ಯೋ, ಗೋಪಾಲ ಕುರುಕ್ಷೇತ್ರ ನಾಟಕದಲ್ಲಿ ಆ ದೃಶ್ಯ ಇಲ್ಲ..!

ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯.


















