ಶಿಡ್ಲಘಟ್ಟ : ಶ್ರಮ ಜೀವಿಯಾಗಿರುವ ರೈತರು ಆರ್ಥಿಕ ಸಂಕಷ್ಠದಿಂದ ಹೊರ ಬರಲು ನೈಸರ್ಗಿಕ ಕೃಷಿ ಹೊರತುಪಡಿಸಿ ಪರ್ಯಾಯ ಮಾರ್ಗವಿಲ್ಲ ಎಂದು ಜಿಲ್ಲಾ ಕೃಷಿ ಸಹಾಯಕ ನಿರ್ದೇಶಕಿ ಚೇತನ ಅವರು ಅಭಿಪ್ರಾಯ ಪಟ್ಟರು.
ತಾಲೂಕಿನ ಬಶೆಟ್ಟಹಳ್ಳಿ ಹೋಬಳಿಯ ಅಜ್ಜ ಕದರೆನಹಳ್ಳಿ ಗ್ರಾಮದ ಶ್ರೀ ಕೃಷ್ಣ ದೇವಾಲಯದ ಆವರಣದಲ್ಲಿ ಕೃಷಿ ಇಲಾಖೆಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೈತರು ಏಕ ಬೆಳೆ ಪದ್ಧತಿ ಕೈಬಿಡಬೇಕು, ಮಿಶ್ರ ಬೆಳೆಗಳಾದ ಹುಚ್ಚೆಳ್ಳು, ಅವರೆ, ಅಲಸಂದೆ, ಸಾಸಿವೆ, ರಾಗಿ, ತೊಗರಿಯನ್ನು ಬೆಳೆಯಬೇಕು. ತರಕಾರಿ ಬೇಡಿಕೆಯನ್ನು ಮೊದಲೇ ಅರಿತು ಉತ್ಪಾದನೆಗೆ ಮುಂದಾಗಬೇಕು, ದರ ಇಳಿಕೆ ಎಂದು ರಸ್ತೆಗೆ ತರಕಾರಿ ಸುರಿಯುವ ಪ್ರಮೇಯವೇ ಬರುವುದಿಲ್ಲ. ಮಾನವನಿಗೆ ಯಾವ ರೀತಿ ಪೌಷ್ಠಿಕಾಂಶಯುಕ್ತ ಆಹಾರ ಅವಶ್ಯಕತೆ ಇದೆಯೋ ಅದೇ ರೀತಿ ಬೇಳೆಗಳಿಗೂ ಲಘು ಪೋಷಕಾಂಶಗಳಿರಬೇಕು ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿ ಶ್ರೀರಾಮಪ್ಪ ಮಾತನಾಡಿ, ಶೂನ್ಯ ಬಂಡವಾಳದಲ್ಲಿ ಕೃಷಿ ಮಾಡಲು ಲೋಡ್ ಗಟ್ಟಲೆ ಕೊಟ್ಟಿಗೆ ಗೊಬ್ಬರದ ಅವಶ್ಯಕತೆ ಇಲ್ಲ, ನಾಟಿ ಹಸುವಿನ ಸಗಣಿ ಮತ್ತು ಗಂಜಲ, ಕಡಲೆ ಹಿಟ್ಟು ಬೆಲ್ಲ ಇಂತಿಷ್ಟು ಪ್ರಮಾಣದಲ್ಲಿ ನೀರಿನಲ್ಲಿ ಮಿಶ್ರಣ ಮಾಡಿ ಐದು ದಿನಗಳು ನಂತರ ಬಿತ್ತನೆ ಮತ್ತು ಬಿತ್ತನೆ ಮಾಡಿದ ನಂತರ ಬೆಳವಣಿಗೆ ಸಂದರ್ಭದಲ್ಲಿ ಬಳಕೆ ಮಾಡಬೇಕು. ಯಾವುದೇ ಕಾರಣಕ್ಕೆ ನಾಟಿ ಹಸುವಿನ ಸಗಣಿ ಮತ್ತು ಗಂಜಲ ಹೊರತು ಪಡಿಸಿ ಇತರೆ ಹಸುಗಳ ಗಣಿ ಮತ್ತು ಗಂಜಲ ವ್ಯರ್ಥ ಕಸರತ್ತು ಎಂದು ಹೇಳಿದರು.
ಶೂನ್ಯ ಬಂಡವಾಳದಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆಯಲ್ಲಿ ಬೀಜೋಪಚಾರ ಕಡ್ಡಾಯ, ರೋಗ ನಿರೋಧಕ ಶಕ್ತಿ ಜೀವಾಮೃತದಿಂದ ಸಾಧ್ಯವಿದೆ, ಆಕಸ್ಮಿಕ ಕೀಟ ಮತ್ತು ರೋಗ ಬಾಧೆಗೆ ಬೇವಿನ ಬೀಜದ ಕಶಾಯ ಸೂಕ್ತ ನೀರುಣಿಸುವ ಪದ್ಧತಿಯು ಅತಿಮುಖ್ಯ ಎಂದರು.
ಈ ಸಂದರ್ಭದಲ್ಲಿ ಸಹಾಯಕ ತಾಂತ್ರಿಕ ವ್ಯವಸ್ಥಾಪಕಿ (ಆತ್ಮ) ಆಶಾರಾಣಿ, ರೈತರಾದ ಟಿ ಎಸ್ ಆಂಜನೇಯರೆಡ್ಡಿ, ಮುನಿಶಾಮಿ, ಆನಂದ, ದ್ಯಾವಪ್ಪ, ನರಸಿಂಹಪ್ಪ, ಬೈರಪ್ಪ, ದೇವರಾಜು, ಚನ್ನಮ್ಮ ,ಪ್ರಮೀಳಾ, ಅನಿತಾ ಕೃಷಿ ಸಖಿ, ರವಿಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ವರದಿ : ಚಿಕ್ಕತೇಕಹಳ್ಳಿ ಡಿ ಶಿವಕುಮಾರ್ ಶಿಡ್ಲಘಟ್ಟ