ಬೆಂಗಳೂರು: ಮೆಟಾ ವೇದಿಕೆಗಳಲ್ಲಿ ಕನ್ನಡ ಸ್ವಯಂ ಅನುವಾದದಲ್ಲಿ ಗಂಭೀರ ದೋಷಗಳಿಂದಾಗಿ ವಿಷಯದ ನೈಜ ಅರ್ಥವೇ ವಿರೂಪಗೊಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಬೆನ್ನಲ್ಲೇ, ಫೇಸ್ಬುಕ್ನ ಮಾತೃ ಸಂಸ್ಥೆಯಾದ ಮೆಟಾ ಕ್ಷಮೆಯಾಚಿಸಿದೆ. “ಅನುವಾದದ ದೋಷಕ್ಕೆ ಕಾರಣವಾದ ಅಂಶಗಳನ್ನು ಸರಿಪಡಿಸಿದ್ದೇವೆ ಮತ್ತು ಈ ಘಟನೆಗಾಗಿ ಕ್ಷಮೆಯಾಚಿಸುತ್ತೇವೆ,” ಎಂದು ಮೆಟಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ, ಮೆಟಾದ ಕನ್ನಡ ಸ್ವಯಂ ಅನುವಾದದ ದೋಷಗಳು ಸತ್ಯಾಂಶಗಳನ್ನು ವಿರೂಪಗೊಳಿಸುತ್ತಿವೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. “ಕನ್ನಡ ವಿಷಯಗಳ ತಪ್ಪಾದ ಅನುವಾದವು ಬಳಕೆದಾರರಲ್ಲಿ ತಪ್ಪುಗ್ರಹಿಕೆಗೆ ಕಾರಣವಾಗುತ್ತಿದೆ. ಇದು ಅತ್ಯಂತ ಅಪಾಯಕಾರಿ,” ಎಂದು ಅವರು ಎಚ್ಚರಿಸಿದ್ದರು.
ಮೆಟಾ ತನ್ನ ಅನುವಾದ ವ್ಯವಸ್ಥೆಯಲ್ಲಿನ ದೋಷಗಳನ್ನು ಗುರುತಿಸಿ, ಸರಿಪಡಿಸಿರುವುದಾಗಿ ತಿಳಿಸಿದೆ. ಕನ್ನಡ ಭಾಷೆಯ ಸ್ವಯಂ ಅನುವಾದದಲ್ಲಿ ಗುಣಮಟ್ಟವನ್ನು ಸುಧಾರಿಸಲು ಕಂಪನಿಯು ಕೆಲಸ ಮಾಡುತ್ತಿದೆ ಎಂದು ಭರವಸೆ ನೀಡಿದೆ. ಈ ಘಟನೆಯಿಂದ ಕನ್ನಡಿಗರ ಭಾವನೆಗಳಿಗೆ ಧಕ್ಕೆಯಾಗಿರುವುದಕ್ಕೆ ಕ್ಷಮೆಯಾಚಿಸಿರುವ ಮೆಟಾ, ಭವಿಷ್ಯದಲ್ಲಿ ಇಂತಹ ತಪ್ಪುಗಳು ಪುನರಾವರ್ತನೆಯಾಗದಂತೆ ಎಚ್ಚರಿಕೆ ವಹಿಸುವುದಾಗಿ ತಿಳಿಸಿದೆ