ವಿಶ್ವ ಪರಿಸರ ದಿನದ ಅಂಗವಾಗಿ ನಗರದಲ್ಲಿ ಹಸಿರೋತ್ಸವ ಫೋರಂ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಸುರಕ್ಷಾ ಎನ್ವಿರೋ ಸೊಲ್ಯೂಷನ್ ಮತ್ತು ಸುದಯಾ ಫೌಂಡೇಶನ್ ಸಹಯೋಗದೊಂದಿಗೆ “ಗೋ ಗ್ರೀನ್, ಗೋ ಇವಿ” (Go Green, Go EV) ಎಂಬ ವಿಷಯದಡಿಯಲ್ಲಿ ಎಲೆಕ್ಟ್ರಿಕ್ ವಾಹನ (EV) ಬೈಕ್ ರ್ಯಾಲಿ ಹಾಗೂ 500ಕ್ಕೂ ಹೆಚ್ಚು ಸಸಿಗಳನ್ನು ನೆಡುವ ʼಹಸಿರು ಸಂಕಲ್ಪ 2025ʼ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅತ್ಯಂತ ಪುರಾತನ ಗ್ರಾಮವೆಂದೇ ಹೆಸರಾಗಿರುವ ಹುಳಿಮಾವು ಕೆರೆ ಅನೇಕ ಕೆರೆಗಳಿಗೆ ಸಂಪರ್ಕ ಹೊಂದಿದೆ. ಕೆಂಪೇಗೌಡರ ಆಲೋಚನೆ ತುಂಬಾ ಚೆನ್ನಾಗಿತ್ತು, ಹಾಗಾಗಿ ಕೆರೆಗಳೇ ಬೆಂಗಳೂರಿಗೆ ಜೀವನಾಡಿಯಾಗಿ ನಿರ್ಮಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಕೆರೆಗಳೇ ಇಲ್ಲದಿದ್ದರೆ ಬೆಂಗಳೂರಿನಲ್ಲಿ ನಾವಿಷ್ಟು ಸುಂದರ ಬದುಕನ್ನು ಕಾಣಲು ಸಾಧ್ಯವಿರಲಿಲ್ಲ. ಗಲ್ಫ್ ರಾಷ್ಟ್ರಗಳಲ್ಲಿ ಬರೀ ಮರಳುಗಾಡು ವಾತಾವರಣ ಇದೆ. ಈಗ ಅವರಿಗೆ ಪರಿಸರದ ಮಹತ್ವ ಅರ್ಥವಾಗಿದೆ. ಆದ್ರೆ ನಾವು ಪರಿಸರದ ಮಧ್ಯೆಯೇ ಇರುವುದರಿಂದ ಪರಿಸರದ ಬಗೆಗೆ ಕೆಲವು ನಿರ್ಲಕ್ಷ್ಯ ತೋರುತ್ತಿದ್ದೇವೆ. ಹಾಗಾಗಿ ನಾವೆಲ್ಲ ಗಿಡ ಮರಗಳನ್ನು ಬೆಳೆಸೋಣ, ಕೆರೆ ಕಾಲುವೆಗಳನ್ನು ಉಳಿಸೋಣ. ಈ ನಿಟ್ಟಿನಲ್ಲಿ ಹುಳಿಮಾವು ಕೆರೆಗೆ 14 ಕೋಟಿ ಮೀಸಲಿಟ್ಟಿದ್ದೇವೆ ಹಾಗೆ ಉಳಿಮಾವು ಕೆರೆ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ ಎಂದು ಶಾಸಕ ಸತೀಶ್ ರೆಡ್ಡಿ ಅವರು ತಿಳಿಸಿದರು.
ಎಲೆಕ್ಟ್ರಿಕ್ ವಾಹನ (EV) ಬೈಕ್ ರ್ಯಾಲಿ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಚೇರ್ಮೆನ್ ಎಸ್.ಇ ಸುಧೀಂದ್ರ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಇಂದು ಅನೇಕ ರಾಜ್ಯದ ಜನರು ಬೆಂಗಳೂರಿನತ್ತ ವಲಸೆ ಬರುತ್ತಿದ್ದಾರೆ, ಅದಕ್ಕೆ ಮುಖ್ಯ ಕಾರಣ ಬೆಂಗಳೂರಿನ ಈ ಸುಂದರ ವಾತಾವರಣ. ಮುಂದಿನ ದಿನಗಳಲ್ಲಿಯೂ ಕೂಡ ಉತ್ತಮ ಪರಿಸರ ನಮ್ಮದಾಗಬೇಕು, ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಮಾಡುವ ಅಗತ್ಯ ನಮ್ಮ ಮುಂದಿದೆ ಅದಕ್ಕಾಗಿ ನಾವೆಲ್ಲರೂ ಕಾಳಜಿಯಿಂದ ಕಾರ್ಯನಿರ್ವಹಿಸಬೇಕು ಎಂದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನಿವೃತ್ತ ಹಿರಿಯ ವೈಜ್ಞಾನಿಕ ಅಧಿಕಾರಿ ಡಾ. ಬಿ.ಆರ್. ಬಾಲಗಂಗಾಧರ್ ಮಾತನಾಡಿ,
ವಾಹನಗಳ ಬಳಕೆ ಹೆಚ್ಚಾಗಿದೆ ಇದ್ರಿಂದ ವಾಯು ಮಾಲಿನ್ಯಗೊಳ್ಳುತ್ತಿದ್ದು, ಶ್ವಾಸಕೋಶ ಸಂಬಂಧಿತ ಆರೋಗ್ಯ ಸಮಸ್ಯೆಗಳು ಹೆಚ್ಚಾಗ್ತಿವೆ. ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಇವಿ ಚಾಲಿತ ವಾಹನಗಳನ್ನು ನಾವು ಬಳಕೆ ಮಾಡುವುದು ಒಳಿತು. ಇದರಿಂದ ನಗರದಲ್ಲಿ ಆಮ್ಲಜನಕವು ಹೆಚ್ಚಾಗಿ ದೊರೆಯುತ್ತದೆ. ಈ ನಿಟ್ಟಿನಲ್ಲಿ ಇಂತಹ ಅಭಿಯಾನಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ಹೇಳಿದರು.
ಬೆಂಗಳೂರು ನಗರದಲ್ಲಿ ಎಲ್ಲಿಯಾದರೂ ಸಸಿ ನೆಡಲು ಸಹಾಯ ಬೇಕಿದ್ದಲ್ಲಿ 9916596396 ಗೆ ಕರೆ ಮಾಡಬಹುದು. ಹಸಿರೋತ್ಸವ ಫೋರಂ ನವರು ಸ್ವತಃ ಸ್ಥಳಕ್ಕೆ ಭೇಟಿ ನೀಡಿ ಸಸಿಗಳನ್ನು ನೆಡುವ ಕೆಲಸವನ್ನು ಮಾಡಲು ಸಿದ್ಧರಿದ್ದೇವೆ ಎಂದು ಹಸಿರೋತ್ಸವ ಫೋರಂ ನ ನಿರ್ದೇಶಕರಾದ ಆರತಿ ಆರ್ ಹೇಳಿದರು.
ಇವಿ ಬೈಕ್ ರ್ಯಾಲಿಯಲ್ಲಿ 40ಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳು ಪಾಲ್ಗೊಂಡಿದ್ದವು, ಜೊತೆಗೆ ಹುಳಿಮಾವು ಕೆರೆಯಲ್ಲಿ 500ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಯಿತು. ಕಾರ್ಯಕ್ರಮದಲ್ಲಿ ಹಸಿರು ಫೋರಂ ನ ನಿರ್ದೇಶಕರಾದ ನೀತು ರೈನಾ, ಮಾಜಿ ಕಾರ್ಪೋರೇಟರ್ ಭಾಗ್ಯಲಕ್ಷ್ಮಿ ಮುರಳಿ, ಮಾಜಿ ಕಾರ್ಪೊರೇಟರ್ ಮುರಳಿ (ಅರಕೆರೆ ವಾರ್ಡ್), ಬೊಮ್ಮನಹಳ್ಳಿ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿಯಾದ ಅಶೋಕ್ ಕುಮಾರ್ ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಬಿಬಿಎಂಪಿ, ಸ್ಪರ್ಶ್ ಫೌಂಡೇಶನ್, ಮೀಡಿಯಾ ಕನೆಕ್ಟ್, ಬಯೋಕಾನ್ ಬಯೋಲಾಜಿಕ್ಸ್, ನೆಕ್ಸಸ್ ವೇಗಾ ಸಿಟಿ ಮಾಲ್, ಫೋರಮ್ ಮಾಲ್, ಅಪೊಲೊ ಕ್ರೇಡಲ್ & ಚಿಲ್ಡ್ರನ್ ಹಾಸ್ಪಿಟಲ್ಸ್, ಈಜೋನ್ ಇವಿ ಬೈಕ್ಗಳು, ರೆಂಟೆಲೊ ಇವಿ ಬೈಕ್ಗಳು, ನೇಚರ್ ಕ್ರಾಫ್ಟ್ಸ್ ಎಸ್ಟೇಟ್ ಸ್ಟೇ ಮತ್ತು ಇತರರು ಕೈಜೋಡಿಸಿದ್ದರು