ಬೆಂಗಳೂರು: ಕಾವ್ಯವನ್ನೇ ಜೀವನದ ಉದ್ದೇಶವಾಗಿಸಿಕೊಂಡು, ಕಾವ್ಯವನ್ನೇ ಜೀವಿಸಿದ ಕವಿ ದ.ರಾ. ಬೇಂದ್ರೆ ಎಂದು ಕವಿ, ಕಾದಂಬರಿಕಾರ ಡಾ. ಜಿ. ಬಿ. ಹರೀಶ ಹೇಳಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷದ್ (ಅಭಾಸಾಪ) ಬೆಂಗಳೂರು ಉತ್ತರ ಜಿಲ್ಲಾ ಸಮಿತಿ ವತಿಯಿಂದ ಶೇಷಾದ್ರಿಪುರಂ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ನಾಕುತಂತಿ ಷಷ್ಟಿಪೂರ್ತಿ ಸರಣಿಯ ‘ನಾದ-5’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾತು- ಕೃತಿಯ ಕುರಿತು 21ನೇ ಶತಮಾನದಲ್ಲಿ ಸಾಕಷ್ಟು ಚರ್ಚೆ ನಡೆದಿದೆ. ಬೇಂದ್ರೆಯವರ ಕವನ ‘ಮಾತು ಕೃತಿ’ ಇದೇ ಕುರಿತಾಗಿದೆ. ಕೃತಿ ಎಂದಕೂಡಲೆ ಕಾರ್ಯ, ಕೆಲಸ ಎಂಬರ್ಥದಲ್ಲಿ ಮಾತ್ರ ನೋಡುವವರಿದ್ದಾರೆ. ಆದರೆ ಕಾವ್ಯವನ್ನು ಬರೆಯುವುದನ್ನೇ ಕೃತಿ ಎಂದೂ ಹೇಳಲಾಗುತ್ತದೆ. ಕೃತಿ (ಆ್ಯಕ್ಟ್) ಎಂದರೆ ಮಾರ್ಕ್ಸ್ವಾದಿಗಳು, ಸಮಾಜವಾದಿಗಳು ಬರೆದ ಆ್ಯಕ್ಟಿವಿಸಂನ ಬರೆಹಗಳಲ್ಲ. ಮಾತು ಕೃತಿಯಾಗಬೇಕು ಎಂದರೆ ಆ ಮಾತಿನಲ್ಲಿ ವೇದದ (ಶೃತಿಯ) ಸಾರವಿರಬೇಕು. ಆ್ಯಕ್ಟಿವಿಸಂ ಹಾಗೂ ಆ್ಯಕ್ಟ್ ನಡುವೆ ಅಗಾಧ ವ್ಯತ್ಯಾಸವಿದೆ ಎಂದರು.
ಮಾನವನು ದೇವನಾಗದೆ ಬೇರೆ ಮಾರ್ಗವಿಲ್ಲ ಎಂದು ಬೇಂದ್ರೆ ಅನೇಕ ಕವನಗಳ ಮೂಲಕ ಹೇಳುತ್ತಾರೆ. ಮಂಗನಿಂದ ಮಾನವ ಎನ್ನುವುದು ಹೇಗೆ ನಿಜವೋ, ಅರವಿಂದರು ಹೇಳಿದಂತೆ ಮಾನವನಿಂದ ದೇವನಾಗುವುದೂ ಅಷ್ಟೇ ಸತ್ಯ. ಆದರೆ ಮಾನವನು ದೇವಮಾರ್ಗದಲ್ಲಿ ಹೋಗಲು ಅಡ್ಡಿಯಾಗಿ ಲಂಕೇಶ್, ತೇಜಸ್ವಿ, ಬರಗೂರು ರಾಮಚಂದ್ರಪ್ಪ ಅವರಂಥವರಿದ್ದಾರೆ. ಹಾಗಾಗಿ ಕಾವ್ಯದ ದೃಷ್ಟಿಯಿಂದ ಇವರೆಲ್ಲರನ್ನೂ ಅಸುರರು ಎನ್ನಬಹುದು. ಆಧುನಿಕ, ಆಧುನಿಕೋತ್ತರ ಎನ್ನುತ್ತ ಅಸುರತನವನ್ನೇ ಮೆರೆಸುವ ಕೆಲಸವೇ ಕನ್ನಡದಲ್ಲಿ ಆಗುತ್ತಿದೆ ಎಂದು ವಿಷಾದಿಸಿದರು.
ಇಂದಿನ ದಿನಗಳಲ್ಲಿ ಕಾವ್ಯವನ್ನು ಸಂಜೆ ಉದ್ಯೋಗ ಮಾಡಿಕೊಳ್ಳುವವರು ಸಾಕಷ್ಟು ಜನರಿದ್ದಾರೆ. ಮನೆಗೆ ಬಂದುಚಹಾ ಕುಡಿದು ಕಾವ್ಯ ಬರೆಯುವವರಿದ್ದಾರೆ. ಆದರೆ ಕಾವ್ಯವನ್ನೇ ಜೀವನ ಮಾಡಿಕೊಂಡವರು ಕಡಿಮೆ ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಗಾಯಕಿ ರಮ್ಯಾ ವಸಿಷ್ಟ ಅವರ ಮಂದ್ರ ಕಲ್ಚರಲ್ ಫೌಂಡೇಷನ್ ವತಿಯಿಂದ ಬೇಂದ್ರೆ ಗಾಯನ ನಡೆಯಿತು. ಸಂಜೀವ್ ಅಗಸ್ತ್ಯ, ಮಂಜುನಾಥ್, ಸತೀಶ್ ಈ ಸಂಚಿಕೆಯ ಕವನ ವಾಚನ ಮಾಡಿದರು.
ಕಾರ್ಯಕ್ರಮದಲ್ಲಿ ಅಭಾಸಾಪ ಪ್ರಾಂತ ಸಹ ಖಜಾಂಚಿ ಭ.ರಾ. ವಿಜಯಕುಮಾರ್ ಉಪಸ್ಥಿತರಿದ್ದರು.