ಕೋಲಾರ ಮೂಲದ ಎ.ಕೆ.ರವಿ ಅವರು ಜಿಮ್ ರವಿ (GYM RAVI) ಎಂದೇ ಖ್ಯಾತರು. ದೇಹದಾರ್ಢ್ಯ ಪಟುವಾಗಿ ದೇಶ, ವಿದೇಶಗಳಲ್ಲಿ ಜನಪ್ರಿಯರಾಗಿರುವ ಜಿಮ್ ರವಿ ಇತ್ತೀಚೆಗೆ “ಪುರುಷೋತ್ತಮ” ಎಂಬ ಚಿತ್ರದಲ್ಲಿ ನಾಯಕನಾಗಿಯೂ ಕಾಣಿಸಿಕೊಂಡಿದ್ದರು. ಅಲ್ಲದೇ, ಸಾಮಾಜಿಕ ಕಾರ್ಯಗಳ ಮೂಲಕವೂ ಹೆಸರು ಸಂಪಾದಿಸಿದ್ದಾರೆ.
ಆದರೆ, ತಾವು ಮಾಡುವ ಸಾಮಾಜಿಕ ಕೆಲಸಕ್ಕೆ ಸಂಬಂಧಿಸಿದಂತೆ ಒಂದು ದಿನವೂ ಪ್ರಚಾರ ಬಯಸಿದವರಲ್ಲ. ಅವರೀಗ ಮತ್ತೊಂದು ಮಹತ್ತರ ಕಾರ್ಯಕ್ಕೆ ಮುಂದಾಗಿದ್ದಾರೆ. ಸ್ನೇಹಿತರ ಒತ್ತಾಯಕ್ಕೆ ಮಣಿದ ರವಿ ಅವರು ಈ ಕಾರ್ಯ ಇತರರಿಗೂ ಮಾದರಿಯಾಗಲಿ ಎಂಬ ಉದ್ದೇಶದಿಂದ ಇತ್ತೀಚೆಗೆ ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ಕೋಲಾರದಿಂದ ಬೆಂಗಳೂರಿಗೆ ಬಂದು ಟೌನ್ ಹಾಲ್ನಲ್ಲಿ ನಡೆದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಗಳಿಸಿದ ವಿಷಯದೊಂದಿಗೆ ಮಾತು ಆರಂಭಿಸಿದ ಜಿಮ್ ರವಿ, ”ನಮ್ಮದು ಮಧ್ಯಮವರ್ಗ ಕುಟುಂಬ. ಪ್ರತಿದಿನ ಮುದ್ದೆ ತಿನ್ನುತ್ತಿದ್ದ ನಾವು ಹಬ್ಬಗಳಲ್ಲೇ ಅನ್ನ ಉಣ್ಣುತ್ತಿದ್ದದ್ದು. ನನ್ನ ತಾಯಿ ನನಗೆ ಆದರ್ಶ. ಜೀವನದ ಪಾಠ ಕಲಿಸಿದ ಮಹಾತಾಯಿ ಅವರು. ಒಬ್ಬರ ಸುಖಕ್ಕೆ ನೀನು ಆಗದಿದ್ದರೂ ಪರವಾಗಿಲ್ಲ, ಕಷ್ಟದಲ್ಲಿರುವವರ ಜೊತೆಗಿರು. ಹಿರಿಯರೆದುರು ಕೈಕಟ್ಟಿ ನಿಲ್ಲೆಂದು ಅಮ್ಮ ಹೇಳಿಕೊಟ್ಟಿದ್ದಾರೆ. ಹೀಗೆ ಜೀವನ ಸಾಗುತ್ತಿದ್ದಾಗ ಅಮ್ಮ ನಮ್ಮನ್ನು ಬಿಟ್ಟು ಹೋದರು. ಅಮ್ಮನ ನಿಧನದ ಕೆಲ ತಿಂಗಳ ನಂತರ ಅಪ್ಪ, ನನ್ನ ಹತ್ತಿರ ಬಂದು ನಿಮ್ಮ ಅಮ್ಮನ ಸಾವಿನಿಂದ ಬಹಳ ದುಖವಾಗಿದೆ. ಹಾಗಾಗಿ, ನನ್ನನ್ನು ಕಾಶಿಯಾತ್ರೆಗೆ ಕರೆದುಕೊಂಡು ಹೋಗು ಎಂದರು. ನನ್ನ ಹತ್ತಿರ ಆಗ ಹಣವಿರಲಿಲ್ಲ. ಅಪ್ಪನಿಗೆ ಏರುದನಿಯಲ್ಲಿ ಈಗ ಅದೆಲ್ಲ ಆಗಲ್ಲ ಎಂದುಬಿಟ್ಟೆ”.
ನಮ್ಮ ಯೋಜನೆ ಒಂದಾದರೆ, ವಿಧಿ ಮತ್ತೊಂದು: ಅದಾದ ಕೆಲ ತಿಂಗಳ ಬಳಿಕ ಮತ್ತೆ ಕೇಳಿದರು. ಆಗ ನಾನು ಅವರಿಗೆ ವಿಮಾನದಲ್ಲಿ ಕರೆದುಕೊಂಡು ಹೋಗುತ್ತೇನೆಂದು ಹೇಳಿ ಸಮಾಧಾನಪಡಿದೆ. ಕೆಲ ದಿನಗಳ ನಂತರ ಗೆಳೆಯರ ಹತ್ತಿರ ಸಾಲ ಮಾಡಿ ಅಪ್ಪನ ಕಾಶಿಯಾತ್ರೆಗೆ ವಿಮಾನದ ಟಿಕೆಟ್ ಬುಕ್ ಮಾಡಿದೆ. ಆ ವಿಷಯವನ್ನು ಅಪ್ಪನಿಗೆ ಫೋನ್ ಮಾಡಿ ತಿಳಿಸಿದೆ. ಅವರು ಖುಷಿಯಾಗುತ್ತಾರೆ. ಆದರೆ ವಿಧಿ ಬೇರೆಯದ್ದಾಗಿತ್ತು,
ಅಪ್ಪನ ಹೆಸರಿನಲ್ಲಿ ಕಾಶಿಯಾತ್ರೆ: ”ನಾನು ಈ ವಿಷಯ ತಿಳಿಸಿದ ಕೆಲವೇ ಗಂಟೆಗಳಲ್ಲೇ ಅಪ್ಪ ನಮ್ಮನ್ನು ಬಿಟ್ಟು ಹೋದರು. ಅವರ ಕಾಶಿಯಾತ್ರೆಯ ಆಸೆಯೂ ಅವರ ಜೊತೆಗೆ ಹೋಗಿ ಬಿಡ್ತು. ಅದೇ ದಿನ ನಾನು ನಿರ್ಧಾರ ಮಾಡಿದೆ. ನಮ್ಮ ಅಪ್ಪನ ಆಸೆ ಈಡೇರಿಸಲು, ಕಾಶಿಯಾತ್ರೆ ಮಾಡಲು ಸಾಧ್ಯವಿಲ್ಲದ ಕೆಲ ಅಶಕ್ತರಿಗೆ ಅಪ್ಪನ ಹೆಸರಿನಲ್ಲಿ ಕಾಶಿಯಾತ್ರೆ ಮಾಡಿಸಬೇಕು ಎಂದು ನಿರ್ಧರಿಸಿದೆ” ಎಂದು ತಿಳಿಸಿದರು.
ಅಪ್ಪ ನಿಧನರಾಗಿ 14 ವರ್ಷಗಳಾಯಿತು. ಅಂದಿನಿಂದ ಈವರೆಗೂ ಅದಕ್ಕೋಸ್ಕರ ಹುಂಡಿ ಇಟ್ಟು ಹಣ ಕೂಡಿಸುತ್ತಿದ್ದೆ. ಯಾವುದೇ ದುಂದು ವೆಚ್ವ ಮಾಡದೇ ಹತ್ತು, ಇಪ್ಪತ್ತು ರೂಪಾಯಿಯಿಂದ ಹಿಡಿದು ಸಾವಿರ ರೂಪಾಯಿಗಳವರೆಗೂ ಹುಂಡಿಯಲ್ಲಿ ಹಾಕುತ್ತಿದ್ದೆ. ಈಗದಕ್ಕೆ ಕಾಲ ಕೂಡಿ ಬಂದಿದೆ. ವಾಣಿಜ್ಯ ತೆರೆಗೆ ಅಧಿಕಾರಿಗಳಾದ ಜಗನ್ನಾಥ್ ಹಾಗೂ ಕುಟುಂಬದವರ ಮಾರ್ಗದರ್ಶನದಲ್ಲಿ ರಾಜ್ಯದ ವಿವಿಧ ಕಡೆಗಳಿಂದ ಸುಮಾರು 80 ಜನ ಅಸಕ್ತರನ್ನು ನಾನೇ ಖುದ್ದಾಗಿ ಭೇಟಿ ಮಾಡಿದ್ದು, ಅವರ ಜೊತೆ 101 ಜನರ ತಂಡ ಜುಲೈ 2ರಂದು ಪಯಣ ಬೆಳೆಸುತ್ತಿದ್ದೇವೆ” ಎಂದು ತಿಳಿಸಿದರು.
ಅವರ ಊರಿನಿಂದ ಬರುವ ಪ್ರಯಾಣದ ವೆಚ್ಚದಿಂದ ಹಿಡಿದು ಎಲ್ಲ ವ್ಯವಸ್ಥೆಯನ್ನೂ ನಾವೇ ಮಾಡುತ್ತಿದ್ದೇವೆ. ಜುಲೈ 2ರ ಬೆಳಗ್ಗೆ ಬೆಂಗಳೂರು ವಿಮಾನ ನಿಲ್ದಾಣದಿಂದ ರಾಮ ಜನ್ಮಭೂಮಿ ಅಯೋಧ್ಯೆಗೆ ಪಯಣ ಕೈಗೊಳ್ಳಲಿದ್ದೇವೆ. ಅಲ್ಲಿಂದ ಪ್ರಯಾಗರಾಜ. ಅಲ್ಲಿಂದ ಕಾಶಿ. ಒಟ್ಟು 3 ದಿನಗಳ ಯಾತ್ರೆ. ಎಲ್ಲಾ ಕಡೆ ಎಸಿ ವಾಹನ ಹಾಗೂ ಎಸಿ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ನಮ್ಮ ಜೊತೆ ವೈದ್ಯರು ಹಾಗೂ ಸ್ವಯಂ ಸೇವಕರಿರುತ್ತಾರೆ. ಆಹ್ವಾನಿಸಿದ ಅತಿಥಿಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದು. ನನಗೆ ಈ ವಿಚಾರ ಪ್ರಚಾರ ಮಾಡುವ ಉದ್ದೇಶವಿರಲಿಲ್ಲ. ಸ್ನೇಹಿತರೋರ್ವರು, ನೀವು ಈ ವಿಷಯ ಜನರಿಗೆ ತಿಳಿಸಿ, ಅದು ಎಷ್ಟೋ ಜನರಿಗೆ ಆದರ್ಶವಾಗಬಹುದು ಎಂದರು. ಹಾಗಾಗಿ, ನಿಮ್ಮ ಮುಂದೆ ಈ ವಿಷಯ ತಿಳಿಸಿದ್ದೇನೆ. ದೇವರು ಅನುಕೂಲ ಮಾಡಿಕೊಟ್ಟರೆ ಮುಂದೆಯೂ ಇದೇ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳುವ ಯೋಜನೆ ಇದೆ ಎಂದು ಮಾಹಿತಿ ನೀಡಿದರು