ಬೆಂಗಳೂರು: ಬಿಜೆಪಿ ಕಾರ್ಯಕರ್ತನೊರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಸಿಟಿಯಲ್ಲಿ ನಡೆದಿದೆ. ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಾಗಿದ್ದ ವಿನಯ್ ಸೋಮಯ್ಯ (39) ಆತ್ಮಹತ್ಯೆ ಮಾಡಿಕೊಂಡವ.
ಮೂಲತಃ ಕೊಡಗು ಜಿಲ್ಲೆಯ ವಿನಯ್ , ಸೋಮವಾರಪೇಟೆ ತಾಲ್ಲೂಕಿನ ಗೋಣಿಮರೂರು ಗ್ರಾಮದವರು. ಕುಟುಂಬ ಸಮೇತರಾಗಿ ಬೆಂಗಳೂರಿನಲ್ಲಿ ನೆಲೆಸಿದ್ದ ಅವರು ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ಸಮಾಜಮುಖಿ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿದ್ದ ಅವರು ‘ಕೊಡಗಿನ ಸಮಸ್ಯೆಗಳು ಮತ್ತು ಸಲಹೆ ಸೂಚನೆಗಳು’ ಎಂಬ ವಾಟ್ಸಪ್ ಗ್ರೂಪ್ನ ಅಡ್ಮಿನ್ ಆಗಿ ಸಕ್ರಿಯರಾಗಿದ್ದರು.
ರಾಜಕೀಯ ಒತ್ತಡಗಳು, ತಾನೇ ನಿರ್ವಹಿಸುತ್ತಿದ್ದ ವಾಟ್ಸಪ್ ಗ್ರೂಪ್ನಲ್ಲಿ ವೈರಲ್ ಆದ ಒಂದು ಆಕ್ಷೇಪಾರ್ಹ ಫೋಟೋ ವಿವಾದಕ್ಕೆ ಕಾರಣವಾಗಿದೆ. ಈ ಫೋಟೋ ಕೊಡಗು ಜಿಲ್ಲೆಯ ಕಾಂಗ್ರೆಸ್ ಮುಖಂಡರೊಬ್ಬರ ವಿರುದ್ಧ ಹೋಗಿದ್ದು, ಈ ಕುರಿತು ಮಡಿಕೇರಿ ನಗರ ಠಾಣೆಯಲ್ಲಿ ವಿನಯ್ ವಿರುದ್ಧ ಎಫ್ಐಆರ್ ದಾಖಲಾಯಿತು. ಜೊತೆಗೆ, ಕಾಂಗ್ರೆಸ್ ಮುಖಂಡ ತೆನ್ನೀರ ಮೈನಾ ಎಂಬಾತದಿಂದ ವಿನಯ್ ವಿರುದ್ಧ ದೂರು ಸಹ ದಾಖಲಾಗಿತ್ತು. ವಿನಯ್ ಆತ್ಮಹತ್ಯೆಗೆ ಮುನ್ನ ವಾಟ್ಸಪ್ ಮೂಲಕ ಡೆತ್ ನೋಟ್ ಒಂದನ್ನು ಶೇರ್ ಮಾಡಿದ್ದರು. ಅಲ್ಲಿ ಅವರು “ರಾಜಕೀಯ ಪ್ರೇರಿತ ಎಫ್ಐಆರ್ಗಳಿಂದ ಮನನೊಂದು ಬಿಟ್ಟಿದ್ದೇನೆ” ಎಂದು ಕಳವಳ ವ್ಯಕ್ತಪಡಿಸಿದ್ದರು.
ನಾಗವಾರದಲ್ಲಿದ್ದ ತಮ್ಮ ಕಚೇರಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಸಾವಿನ ಸುದ್ದಿಯಿಂದ ಕುಟುಂಬದವರು, ಸ್ನೇಹಿತರು ಹಾಗೂ ಬಿಜೆಪಿ ಶಿಬಿರದವರು ಆಘಾತಗೊಂಡಿದ್ದಾರೆ. ಒಂದು ಮಗು ಸೇರಿದಂತೆ ಪತ್ನಿಯನ್ನು ಅಗಲಿದ ವಿನಯ್ ಅವರ ಅಗಲಿಕೆಯು ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ.