ಕಿರು ಆಹಾರ ಸಂಸ್ಕರಣಾ ಘಟಕಗಳಿಗೆ ರೂ. 15 ಲಕ್ಷ ಸಹಾಯಧನ ನೀಡಲಾಗುತ್ತಿದೆ. ಇದರಲ್ಲಿ ಕೇಂದ್ರ ಸರ್ಕಾರ 6 ಲಕ್ಷ ರೂ.ಗಳನ್ನು ಹಾಗೂ ರಾಜ್ಯ ಸರ್ಕಾರ 9 ಲಕ್ಷ ರೂ.ಗಳ ಸಹಾಯ ಧನ ನೀಡುತ್ತಿದ್ದು, ಈ ರೀತಿಯ ಯೋಜನೆ ನಮ್ಮ ರಾಜ್ಯದಲ್ಲಿ ಬಿಟ್ಟರೆ ಬೇರೆ ಯಾವುದೇ ರಾಜ್ಯದಲ್ಲಿ ಇಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯ ಸ್ವಾಮಿ ತಿಳಿಸಿದರು. ಭಾತರ ಸರ್ಕಾರದ ಆಹಾರ ಸಂಸ್ಕರಣಾ ಉದ್ಯಮ ಮಂತ್ರಾಲಯ, ಖೇತಿವಾಲಾಸ್ ಹಾಗೂ ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ನಿಗಮದ ವತಿಯಿಂದ ಹಮ್ಮಿಕೊಂಡಿದ್ದ “ಕೃಷಿ ಜಾಗೃತಿ” ಕಾರ್ಯಗಾರದ ಉದ್ಘಾಟನೆ ಹಾಗೂ ಖೇತಿ ಪ್ರಶಸ್ತಿ ಪುರಸ್ಕøತರಾದ ಅಧಿಕಾರಿಗಳು ಹಾಗೂ ಸಂಸ್ಥೆಯ ಪ್ರತಿನಿಧಿಗಳನ್ನು ಸನ್ಮಾನ ಮಾಡಿ ಮಾತನಾಡಿದರು.
ರಾಜ್ಯದಲ್ಲಿ 1400 ಆಹಾರ ಸಂಸ್ಕರಣಾ ಘಟಕಗಳಿದ್ದು, ಇದಕ್ಕೋಸ್ಕರ 206 ಕೋಟಿ ರೂ.ಗಳ ವಿಶೇಷ ಅನುದಾನ ಮೀಸಲಿರಿಸಿದೆ ಎಂದರು. ಕಳೆದ ಐದು ವರ್ಷಗಳಲ್ಲಿ ಈ ಯೋಜನೆಯಡಿ 20,051 ಅರ್ಜಿಗಳು ಸಲ್ಲಿಕೆಯಾಗಿದ್ದು, 6,585 ಅರ್ಜಿಗಳಿಗೆ ಸಾಲ ಮಂಜೂರಾಗಿದ್ದು, ಒಟ್ಟು 758.48 ಕೋಟಿ ಬಂಡವಾಳ ಹೂಡಿಕೆಯಾಗಿದೆ. ಆಹಾರ ಸಂಸ್ಕರಣೆಯಲ್ಲಿ ತೊಡಗಿರುವ ಸ್ವಸಹಾಯ ಸಂಘದ 11,825 ಸದಸ್ಯರಿಗೆ 46.58 ಕೋಟಿಯಷ್ಟು ಬೀಜ ಬಂಡವಾಳದ ಬೆಂಬಲವನ್ನು, ಸಣ್ಣ ಉಪಕರಣಗಳನ್ನು ಖರೀದಿಸಲು ಮತ್ತು ಕಾರ್ಯನಿರತ ಬಂಡವಾಳಕ್ಕಾಗಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ವಿವಿಧ ಕೃಷಿ, ತೋಟಗಾರಿಕೆ ವಿಶ್ವವಿದ್ಯಾಲಯಗಳು, ಸರ್ಕಾರಿ ಸಂಸ್ಥೆಗಳಗೆ 14 ಸಾಮಾನ್ಯ ಇನ್ಕ್ಯುಬೇಶನ್ ಕೇಂದ್ರಗಳನ್ನು ಮಂಜೂರು ಮಾಡಲಾಗಿದೆ. ದೇಶದಲ್ಲೇ ಅತಿ ಹೆಚ್ಚು ಇನ್ಕ್ಯುಬೇಶನ್ ಕೇಂದ್ರಗಳನ್ನು ರಾಜ್ಯಕ್ಕೆ ಮಂಜೂರು ಮಾಡಲಾಗಿದೆ. ಕೃಷಿ ವಲಯದಲ್ಲಿ ತಾಂತ್ರಿಕ ಸಮಗ್ರ ಕೃಷಿಗೆ ಮೌಲ್ಯವರ್ಧನೆ ಅಳವಡಿಸಿಕೊಂಡರೆ ಇಡೀ ದೇಶವೇ ಆರ್ಥಿಕವಾಗಿ ಸದೃಢವಾಗುತ್ತದೆ. ರೈತರಿಗೆ ಹಾಗೂ ನವೋದ್ಯಮಿಗಳಿಗೆ ಉತ್ತೇಜನ ನೀಡಲು ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ತಾಂತ್ರಿಕತೆಯನ್ನು ಪರಿಚಯ ಮಾಡಿಕೊಡುವ ಹಾಗೂ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವಂತಹ ಇಂತಹ ಕಾರ್ಯಕ್ರಮಗಳನ್ನು ಹೆಚ್ಚು ಆಯೋಜಿಸಿದಷ್ಟು ರೈತ ಸಮುದಾಯಕ್ಕೆ, ಯುವ ಸಮುದಾಯಕ್ಕೆ ಬಹಳಷ್ಟು ಅನುಕೂಲವಾಗುತ್ತದೆ ಎಂದರು.
ಇಂದು ಇಡೀ ರಾಷ್ಟ್ರ ಮತ್ತು ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದೇವೆ ಅದೆಲ್ಲಕ್ಕೂ ಪರಿಹಾರ ಕೃಷಿ ಮತ್ತು ಕೃಷಿ ಉತ್ಪನನಗಳ ಮೌಲ್ಯವರ್ಧನೆ ಹಾಗೂ ಉದ್ದಿಮೆ ಕ್ಷೇತ್ರಗಳನ್ನು ಅಳವಡಿಸಿಕೊಂಡಾಗ ಮಾತ್ರ ಸಾಧ್ಯ ಎಂದು ನಾವು ಅರ್ಥ ಮಾಡಿಕೊಳ್ಳಬೇಕು. ರಾಜ್ಯದಲ್ಲಿ ಇಂದು ಅನೇಕ ಯುವಕರು ಕೃಷಿ ಕಡೆ ಆಲೋಚನೆ ಮಾಡುತ್ತಿರುವುದರಿಂದ ಕೃಷಿಗೆ ಹೆಚ್ಚಿನ ಒತ್ತು ನೀಡುವುದು ಸರ್ಕಾರ ಹಾಗೂ ಇಂತಹ ಸಂಸ್ಥೆಗಳ ಕರ್ತವ್ಯ. ನಮ್ಮೆಲ್ಲರ ಮುಂದಿನ ಭವಿಷ್ಯದ ಚಿಂತನೆಗೆ ಕೃಷಿಯಲ್ಲಿ ಮೌಲ್ಯವರ್ಧನೆ ಮಾಡಿದರೆ ಒಂದಕ್ಕಿಂತ ಹೆಚ್ಚು ಪಟ್ಟು ಹಣ ಸಿಗುತ್ತದೆ.
ಕೃಷಿ ಚಟವಟಿಕೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಬಹಳ ವರ್ಷಗಳಿಂದ ಪ್ರೋತ್ಸಾಹ ನೀಡುತ್ತಿದ್ದು ಇತ್ತೀಚಿನ ದಿನಗಳಲ್ಲಿ ಪ್ರಕೃತಿಯಲ್ಲಿ ಮೊದಲಿಗಿಂತ ಹೆಚ್ಚಿನ ಬದಲಾವಣೆ ಕಾಣುತ್ತಿದ್ದೇವೆ ಇದರ ಜೊತೆಗೆ ತಾಂತ್ರೀಕರಣ ವ್ಯವಸಾಯ ಮಾಡಬೇಕು ಮತ್ತು ಅದಕ್ಕಿಂತ ಹೆಚ್ಚಾಗಿ ಕೃಷಿಯಲ್ಲಿ ಸಂಸ್ಕರಣೆ ಮಾಡಿ, ಮೌಲ್ಯವರ್ಧನೆ ಮಾಡಿದರೆ ಮಾತ್ರ ಒಂದಕ್ಕಿಂತ ಹೆಚ್ಚು ಲಾಭ ಪಡೆಯಲು ಸಾಧ್ಯವಾಗುತ್ತದೆ. ರೈತರು ತಮ್ಮ ಉತ್ಪನ್ನಗಳ ಮೌಲ್ಯವರ್ಧನೆಗೆ ಹೆಚ್ಚು ಆದ್ಯತೆ ನೀಡಬೇಕು ಹಾಗೂ ಮಾರುಕಟ್ಟೆಯ ಬಗ್ಗೆ ಜ್ಞಾನ ವಿಸ್ತಾರವಾಗಬೇಕು ಎಂಬ ಉದ್ದೇಶದಿಂದ ಮಾಹಿತಿ ನೀಡಲು ಇಂದು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಬಹತೇಕ ಯುವಕರು ಭಾಗವಹಿಸಿದ್ದು, ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಕೆಫೆಕ್ ವ್ಯವಸ್ಥಾಪಕ ನಿರ್ದೇಶಕರಾದ ಸಿ.ಎನ್. ಶಿವಪ್ರಕಾಶ್ ಅವರು ಪ್ರಾಸ್ತಾವಿಕ ಮಾತನಾಡಿ, ಆಹಾರ ಸಂಸ್ಕರಣೆ ಮಾಡಿದರೆ ರೈತನಿಗೆ ಉತ್ತಮ ಬೆಲೆ ಸಿಗುತ್ತದೆ. ಇದರ ಜೊತೆಗೆ ಕೆಲವರಿಗೆ ಉದ್ಯೋಗ ದೊರೆಯುವುದರ ಜೊತೆಗೆ ಗ್ರಾಹಕರಿಗೆ ಉತ್ತಮ ಉತ್ಪನ್ನಗಳು ದೊರೆಯುತ್ತದೆ. ಸಂಸ್ಕರಣೆ ಆಗದಿದ್ದರೆ ಆಹಾರ ಕೊಳೆತು ಹೋಗುತ್ತದೆ. ಸರ್ಕಾರ ಜಾರಿಗೆ ತಂದಿರುವ ಕಿರು ಆಹಾರ ಸಂಸ್ಕರಣಾ ಉದ್ದಿಮೆಯು ಉತ್ತಮ ಯೋಜನೆಯಾಗಿದೆ. ಬ್ಯಾಂಕ್ ಅಧಿಕಾರಿಗಳು ಅರ್ಜಿಗಳು ಬಂದ 15 ದಿನಗಳಲ್ಲಿ ವಿಲೇವಾರಿ ಮಾಡಿದರೆ ಅರ್ಜಿದಾರರಿಗೆ ಅನುಕೂಲ ಕಲ್ಪಿಸಿದಂತಾಗುತ್ತದೆ ಎಂದರು.
ಕಾರ್ಯಾಗಾರದಲ್ಲಿ ಜಲಸಂಧಾನ ಅಭಿವೃದ್ಧಿ ಆಯುಕ್ತರಾದ ಮಹೇಶ್ ಬಿ.ಶಿರೂರ್, ನಿರ್ದೇಶಕ ಮೊಹಮ್ಮದ್ ಪರವೇಜ್ ಬಂಥ್ನಾಳ್, ನಬಾರ್ಡ್ ವ್ಯವಸ್ಥಾಪಕ ನಿರ್ದೇಶಕರಾದ ಪ್ರಕಾಶ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾದ ವಿ.ಎನ್.ಶರ್ಮಾ, ಕೃಷಿ ಇಲಾಖೆಯ ಅಧಿಕಾರಿಗಳು, ಬ್ಯಾಂಕ್ ಅಧಿಕಾರಿಗಳು ಹಾಗ ಮತ್ತಿತರರು ಉಪಸ್ಥಿತರಿದ್ದರು.